ಮಲೆನಾಡಲ್ಲಿ ಮಳೆ ಅಬ್ಬರ, ರಸ್ತೆಯಲ್ಲಿ ನದಿಯಂತೆ ಹರಿದ ನೀರು
1 min readಚಿಕ್ಕಮಗಳೂರು : ಜಿಲ್ಲೆಯ ಮಲೆನಾಡು ಭಾಗದಲ್ಲಿ ಸಂಜೆ ಬಳಿಕ ಮಳೆ ಅಬ್ಬರ ಜೋರಾಗಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಮಲೆನಾಡು ತಾಲೂಕುಗಳಾದ ಮೂಡಿಗೆರೆ, ಕೊಪ್ಪ, ಎನ್.ಆರ್.ಪುರ, ಶೃಂಗೇರಿ ಹಾಗೂ ಕಳಸ ತಾಲೂಕಿನಲ್ಲಿ ಭಾರೀ ಮಳೆ ಸುರಿದಿದೆ. ಬೆಳಗ್ಗೆಯಿಂದಲೂ ಮೋಡಕವಿದ ವಾತಾವರಣವಿದ್ದ ಮಲೆನಾಡು ಭಾಗದಲ್ಲಿ ಅಲ್ಲಲ್ಲೆ ಸಾಧಾರಣ ಮಳೆಯಾಗುತ್ತಿತ್ತು. ಸಂಜೆ ಬಳಿಕ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಾಳೂರು, ಬಣಕಲ್ ಭಾಗದಲ್ಲಿ ಧಾರಾಕಾರ ಮಳೆ ಸುರಿದಿದೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸುತ್ತಮುತ್ತ ಭಾರೀ ಮಳೆ ಸುರಿದ ಪರಿಣಾಮ ಮಹಲ್ಗೋಡು ಸೇತುವೆ ಮುಳುಗಡೆಯಾಗಿದ್ದು ಮಾಗುಂಡಿ-ಕಳಸ ಸಂಪರ್ಕ ಕಡಿತಗೊಂಡಿದೆ. ತುಂಬಿ ಹರಿಯುತ್ತಿರುವ ಸೇತುವೆ ಮೇಲೆ ಸಂಚರಿಸಲು ಹೋದ ಬೈಕ್ ಸವಾರರು ಸೇತುವೆ ಕಟ್ಟೆಗೆ ಡಿಕ್ಕಿಯಾಗಿ ಸೇತುವೆ ಮೇಲೆ ಸಿಕ್ಕಿ ಹಾಕಿಕೊಂಡಿದ್ದಾರೆ. ಸ್ಥಳಿಯರು ಹಗ್ಗ ಕಟ್ಟಿ ಸೇತುವೆ ಮಧ್ಯೆ ಸಿಕ್ಕಿಬಿದ್ದಿದ್ದ ಬೈಕ್ ಸವಾರರನ್ನ ರಕ್ಷಿಸಿದ್ದಾರೆ. ಮಹಲ್ಗೋಡು ಸೇತುವೆ ಪ್ತಿ ಮಳೆಗಾಲದಲ್ಲೂ ಹತ್ತಾರು ಬಾರಿ ಮುಳುಗಡೆಯಾಗಿ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೀಡಾಗುತ್ತಾರೆ. ಸ್ಥಳೀಯರು ಹತ್ತಾರು ಬಾರಿ ಅಧಿಕಾರಿಗಳ ಗಮನಕ್ಕೆ ತಂದು ಮನವಿ ಮಾಡಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ಮಹಲ್ಗೋಡು ಸೇತುವೆ ಮೂಡಿಗೆರೆ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಮೂಡಿಗೆರೆಯಿಂದ ಮಹಲ್ಗೋಡು ತುಂಬಾ ದೂರವಿದೆ. ಅಷ್ಟು ದೂರ ಯಾರು ಬರುತ್ತಾರೆ ಅಂತಾರಂತೆ ಅಧಿಕಾರಿಗಳು. ಸೇತುವೆ ರಸ್ತೆ ಮಟ್ಟದಿಂದ ಕೆಳಭಾಗದಲ್ಲಿದೆ.
ಪಕ್ಕದಲ್ಲೇ ಹಳ್ಳವಿದೆ. ಸಣ್ಣ ಮಳೆ ಬಂದರೂ ಸೇತುವೆ ಮುಳುಗಡೆಯಾಗಲಿದೆ. ಹಾಗಾಗಿ, ಸ್ಥಳೀಯರು ಸೇತುವೆಯನ್ನ ಎತ್ತರಿಸಿಕೊಡುವಂತೆ ಕಳೆದ ನಾಲ್ಕೈದು ವರ್ಷಗಳಿಂದ ಮನವಿ ಮಾಡುತ್ತಿದ್ದರೂ ಅಧಿಕಾರಿಗಳು ಮಳೆಗಾಳ ಮುಗಿಯಲಿ ಎಂದು ಹೇಳುತ್ತಾ ದಿನ ದೂಡುತ್ತಿದ್ದಾರೆ ಎಂದು ಸ್ಥಳೀಯರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮೂಡಿಗೆರೆ ತಾಲೂಕಿನಲ್ಲೂ ಭಾರೀ ಮಳೆ ಸುರಿದ ಪರಿಣಾಮ ರಸ್ತೆಯಲ್ಲಿ ನೀರು ಹರಿದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಈ ಅಕಾಲಿಕ ಮಳೆಯಿಂದಾಗಿ ಮಲೆನಾಡಿ ಕಾಫಿ ಬೆಳೆಗಾರು ಕಾಫಿ ಉದುರುವ ಆತಂಕದಲ್ಲಿದ್ದರೆ, ಎನ್.ಆರ್.ಪುರ, ಕೊಪ್ಪ, ಶೃಂಗೇರಿ ಭಾಗದ ಅಡಿಕೆ ಬೆಳೆಗಾರರಿಗೆ ಕೊಳೆ ರೋಗದ ಭೀತಿ ಆವರಿಸಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g