40 ಡಿಗ್ರಿ ತಾಪಮಾನ ದಾಖಲಾದ ಬೆನ್ನಲ್ಲೇ ಜಿಲ್ಲೆಯ ಹಲವೆಡೆ ಮಳೆ ಆರ್ಭಟ
1 min read
40 ಡಿಗ್ರಿ ತಾಪಮಾನದಿಂದ ಬಸವಳಿದಿದ್ದ ಚಿಕ್ಕಮಗಳೂರಲ್ಲಿ ನಿರೀಕ್ಷೆಯಂತೆ ಮಳೆಯ ಆರ್ಭಟ ಆರಂಭವಾಗಿದೆ. ಗುಡುಗು ಸಿಡಿಲು ಸಹಿತ ಆಲಿಕಲ್ಲು ಮಳೆ ಬಿದ್ದಿದ್ದು ಗಂಟೆಗೂ ಹೆಚ್ಚು ಕಾಲ ವರುಣ ಅಬ್ಬರಿಸಿದ್ದಾನೆ. ಬಿಸಿಲಿನ ಝಳಕ್ಕೆ ಸುಸ್ತಾಗಿದ್ದ ಜನರಿಗೆ ಮಳೆಯ ಆಗಮನ ಖುಷಿ ನೀಡಿದ್ದು, ಹವಾಮಾನ ಇಲಾಖೆ ಮುನ್ಸೂಚನೆ ಯಂತೆ ಮುಂದಿನ ನಾಲ್ಕು ದಿನ ಜಿಲ್ಲೆಯಲ್ಲಿ ಮಳೆಯಾಗಲಿದೆ.
ಮಲೆನಾಡಲ್ಲಿ ಎಂದೂ ಕಾಣದ 40 ಡಿಗ್ರಿ ತಾಪಮಾನ ದಾಖಲೆ ಬರೆದ ನಂತರ ಇಂದು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವರುಣ ಅಬ್ಬರಿಸಿದ್ದಾನೆ. ಚಿಕ್ಕಮಗಳೂರು ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಆಲಿಕಲ್ಲು ಜೊತೆಗೆ ಗುಡುಗು ಮಿಂಚಿನ ಮಳೆ ಬಿದ್ದಿದೆ. ಮಧ್ಯಾಹ್ನದ ವೇಳೆಗೆ ಭೂಮಿ ವಾತಾವರಣ ತಂಪು ಮಾಡುತ್ತಿದ್ದಂತೆ ಬಿರುಗಾಳಿ ಸಹಿತ ಮಳೆ ಆರ್ಭಟ ಆರಂಭಿಸಿತು. ಗಂಟೆಗಟ್ಟಲೆ ಸುರಿದ ಮಳೆಯಿಂದಾಗಿ ವಾಹನ ಸವಾರರು
ಪರದಾಡುವಂತಾಗಿತ್ತು, ಬಿರುಗಾಳಿಗೆ ಕೆಲವೆಡೆ ಮರದ ಕೊಂಬೆಗಳು ಮುರಿದು ಬಿದ್ದ ಘಟನೆ ನಡೆದಿದೆ. ತೀವ್ರ ಬಿಸಿಲನ್ನು ನೋಡಿದ್ದ ಜನರಿಗೆ ಒಮ್ಮೆಲೆ ಮಂಜು ಮುಸುಕಿದ ವಾತಾವರಣ ಮುದ ನೀಡಿದ್ದು ಸಂತಸದಿಂದಲೇ ಮಳೆರಾಯನನ್ನ ಬರಮಾಡಿಕೊಂಡರು. ನಗರದ ಕೆಲವೆಡೆ ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಯಾದ ಘಟನೆ ಸಹಾ ಸಂಭವಿಸಿದೆ. ಅಗಸರ ಬೀದಿಯಲ್ಲಿ ರಸ್ತೆಯಲ್ಲಿ ನೀರು ನಿಂತು ವಾಹನಗಳು ಜಲಾವೃತ ವಾಗುವಂತಾಗಿದೆ, ಇನ್ನೂ ನಾಲ್ಕು ದಿನಗಳ ಕಾಲ ಮಳೆ ಬೀಳುವ ಸಾಧ್ಯತೆಗಳನ್ನು ಹವಾಮಾನ ಇಲಾಖೆ ತಿಳಿಸಿದ್ದು ಮತ್ತಷ್ಟು ಮಳೆಯ ನಿರೀಕ್ಷೆ ಜನತೆಯಲ್ಲಿ ಮೂಡಿದೆ. ತೀವ್ರ ನೀರಿನ ಕೊರತೆ ಎದುರಿಸುತ್ತಿದ್ದ ಬರಪೀಡಿತ ಪ್ರದೇಶದಲ್ಲಿ ವರುಣನು ಕೃಪೆ ತೋರಿದ್ದು ಇನ್ನೂ ಹೆಚ್ಚಿನ ಮಳೆ ಬೀಳಲಿ ಎಂದು ಆಕಾಶದ ಕಡೆ ಮುಖ ಮಾಡಿ ನೋಡುತ್ತಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g