ಕಸಸಂಗ್ರಹಣೆ ಶುಲ್ಕ ಹೆಚ್ಚಳ, ಕಾಂಗ್ರೆಸ್ ಆಕ್ರೋಶ
1 min read
ಚಿಕ್ಕಮಗಳೂರು: ನಗರಸಭೆ ಮನೆ, ಮನೆ ಕಸಸಂಗ್ರಹಣೆ ಶುಲ್ಕಹೆಚ್ಚಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ಮುಖಂಡರು ಬುಧವಾರ ನಗರಸಭೆ ಎದುರು ಪ್ರತಿಭಟನೆ ನಡೆಸಿದರು.
ಆಡಳಿತ ರೂಢ ಬಿಜೆಪಿ ದುರಾಡಳಿತ ನಡೆಸುತ್ತಿದೆ. ಕಸದಲ್ಲೂ ಲೂಟಿಮಾಡುತ್ತಿದೆ.ಮರಕಡಿದ ಸಾಗಿಸುವ ಮೂಲಕ ಹಣಗಳಿಸಲು ಮುಂದಾಗಿದ್ದು, ನಗರಸಭೆ ನರಕಸಭೆಯಾಗಿ ಮಾರ್ಪಾಡುತ್ತಿದೆ ಎಂದು ಘೋಷಣೆ ಕೂಗಿದರು. ನಗರಸಭೆ ಅಧ್ಯಕ್ಷರ ಕಾರ್ಯವೈಖರಿಯನ್ನು ಟೀಕಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರ ಸಮಿತಿ ಅಧ್ಯಕ್ಷ ಮಂಜೇಗೌಡ, ಕಸಶುಲ್ಕ ಹೆಚ್ಚಳವನ್ನು ಅಜೆಂಡದಲ್ಲಿ ತಾರದೆ ಸಾರ್ವಜನಿಕಸಭೆಯಲ್ಲಿ ಚರ್ಚಿಸದೆ ಏಕಾಏಕಿ ಮನೆಶುಲ್ಕ 10 ರೂ. ಮತ್ತು ಅಂಗಡಿ ಶುಲ್ಕ 20 ರೂ. ಹೆಚ್ಚಿಸಿರುವುದು ಸರ್ವಾಧಿಕಾರಿ ಧೋರಣೆಯ ನಿದರ್ಶನವೆಂದರು.
ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಮಾತನಾಡಿ,ನಗರಸಭೆ ತೊಘಲಕ್ ದರ್ಬಾರ್ನೀತಿಯನ್ನು ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದು, ಕಸದಲ್ಲೇ ಲಕ್ಷಾಂತರ ರೂ.ಕೊಳ್ಳೆಹೊಡೆಯಲು ಮುಂದಾಗಿದೆ ಎಂದು ಆರೋಪಿಸಿದರು.
ನಗರಸಭೆ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಸಭೆಯಲ್ಲಿ ವಿಷಯ ಮಂಡಿಸೆ ಏಕಾಏಕಿ ಕಸಸಂಗ್ರಹಣೆ ಶುಲ್ಕಹೆಚ್ಚಿಸಿದ್ದು, ನಗರಸಭೆ ಅಧ್ಯಕ್ಷರು ಸಾರ್ವಜನಿಕರ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ, ಅಧ್ಯಕ್ಷರು, ಆಯುಕ್ತರ ನಡೆವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಒತ್ತಾಯಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿಶಾಂತೇಗೌಡ ಮಾತನಾಡಿ, ನಗರಸಭೆ ದಲ್ಲಾಳಿಗಳ ಕೂಟವಾಗಿದೆ.ಹಿಟ್ ಅಂಡ್ ರನ್ ಕೆಲಸವಾಗುತ್ತಿದೆ.ಕಸಸಂಗ್ರಹಣೆ ಟೆಂಡರ್ ಮುಕ್ತಾಯವಾಗಿದ್ದು, ಮರುಟೆಂಡರ್ ಕರೆಯದೆ, ಕಸಸಂಗ್ರಹಣೆ ಮತ್ತು ಶುಲ್ಕ ವಸೂಲಿಯನ್ನು ಪೌರಕಾರ್ಮಿಕರ ಮಕ್ಕಳಿಗೆ ನೀಡದೆ, ಬಿಜೆಪಿ ಮುಖಂಡರೇ ವಹಿಸಿಕೊಂಡಿದ್ದಾರೆಂದು ಆರೋಪಿಸಿದರು.
ಬಿಜೆಪಿ ಕಚೇರಿಯಲ್ಲಿ ಕೆಲಸ ನಿರ್ವಹಣೆ ತೀರ್ಮಾನವಾಗುತ್ತಿದೆ. ಆತ್ಮವಂಚನೆ ಆಡಳಿತ ನಡೆಸಲಾಗುತ್ತಿದೆ. ಶುದ್ಧಗಂಗಾ ಕುಡಿಯುವ ನೀರಿನ ಘಟಕವನ್ನು ವಿರೋಧ ಪಕ್ಷದ ಸದಸ್ಯರ ವಾರ್ಡಿಗೆ ನೀಡದೆ ಆಡಳಿತ ಪಕ್ಷದ ಸದಸ್ಯರು ವಾರ್ಡಿಗೆ ನೀಡಲಾಗಿದೆ ಎಂದು ದೂರಿದರು.
ನಗರಸಭೆಯಲ್ಲಿ ಹಿಟ್ಲರ್ ಆಡಳಿತ ನಡೆಯುತ್ತಿದ್ದು, ಕಾಣದ ಕೈಗಳು ಕೆಲಸ ನಿರ್ವಹಿಸುತ್ತಿವೆ. ಬೈಪಾಸ್ ರಸ್ತೆಹದಗೆಟ್ಟಿದ್ದು, ಪಾದಚಾರಿಗಳು,ವಾಹನ ಸವಾರರು ದೂಳನ್ನೆ ಕುಡಿದುಕೊಂಡು ಮುಂದೆ ಸಾಗಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ ಎಂದು ಟೀಕಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g