ಮಠಕ್ಕೆ ನಾನು ಸಿಎಂ ಆಗಿ ಬಂದಿಲ್ಲ, ಭಕ್ತನಾಗಿ ಬಂದಿದ್ದೇನೆ : ಸಿಎಂ ಬೊಮ್ಮಾಯಿ
1 min read
ಚಿಕ್ಕಮಗಳೂರು.: ಶೃಂಗೇರಿ ಶಾರದಾಂಭೆ ಹಾಗೂ ಹರಿಹರಪುರ ಮಠದ ಶಾರದಾ ಲಕ್ಷ್ಮಿ ನರಸಿಂಹ ಸ್ವಾಮಿ ದೇವರಿಂದ ರಾಜ್ಯವನ್ನ ಮುನ್ನೆಡೆಸುವ ಹೊಸ ಪ್ರೇರಣೆ ಪಡೆದುಕೊಂಡು ಹೋಗುತ್ತಿದ್ದೇನೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. ಅವರು ಇಂದು ಜಿಲ್ಲೆಯ ಶೃಂಗೇರಿ ಶಾರದಾಂಭೆ ಹಾಗೂ ಕೊಪ್ಪ ತಾಲೂಕಿನ ಐತಿಹಾಸಿಕ ಹರಿಹರಪುರ ಮಠಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಠದಲ್ಲಿ ಧಾರ್ಮಿಕ ಸಭೆಯನ್ನ ಉದ್ದೇಶಿಸಿ ಮಾತನಾಡಿದ ಅವರು, ಪೂಜ್ಯರು ಕೇವಲ ಮಠವನ್ನ ಮಾತ್ರ ಕಟ್ಟದೆ ನಾವೆಲ್ಲರೂ ಒಂದೇ ಎಂಬ ಭಾವನೆಯಲ್ಲಿ ಜನರ ಮನಸ್ಸನ್ನ ಕಟ್ಟುತ್ತಿದ್ದಾರೆ ಎಂದರು.
ಸಮಾಜ ಆದರ್ಶವಾಗಿ ಇರಬೇಕಾದರೆ ದೈವ ಭಕ್ತಿ, ಗುರುಭಕ್ತಿ ಹಾಗೂ ಆತ್ಮವಿಶ್ವಾಸ ಇರಬೇಕು, ಅದು ಬಹಳ ಮುಖ್ಯ. ಉತ್ಕ್ರಷ್ಟವಾದ ಪ್ರೀತಿಯೇ
ಭಕ್ತಿ ಹಾಗೂ ಪವಿತ್ರ ಎಂದು ಹೇಳಿದರು. ನಾವು ದೇವರ ಬಳಿ ಅಂತಸ್ತು- ಐಶ್ವರ್ಯ ಕೇಳುತ್ತೇವೆ. ಸ್ವಾಮೀಜಿಗಳು ಲೋಕಕ್ಕಾಗಿ ಕೇಳಿ ಕೊಳ್ಳುತ್ತಾರೆ. ನಿಸ್ವಾರ್ಥ ಭಕ್ತಿಯ ಪ್ರಪಂಚದಲ್ಲಿ ನೀವು ಇದ್ದೀರಾ ಎಂದರು. ಭಗವಂತನಿಗೆ ಯಾರಿಗೆ, ಯಾವಾಗ, ಏನು ಕೊಡಬೇಕು ಎಂಬುದು ಗೊತ್ತಿದೆ. ಭಗವಂತ ಜನ್ಮ ನೀಡಿದ್ದಾನೆ. ನಾವು ಏಕೆ ಹುಟ್ಟಿದ್ದೇವೆ. ಎಂಬುದಕ್ಕೆ ಯತ್ತರ ನಮ್ಮೊಳಗೆ ಇದೆ. ನಾವು ಅದನ್ನ ತಿಳಿದುಕೊಂಡರೆ ಜೀವನ ಸಾರ್ಥಕ ಎಂದರು. ಗುರುವಿನ ಬಳಿ ಭಕ್ತಿಯಲ್ಲಿ ಕರಗಿ ಲೀನವಾಗಬೇಕು ಎಂದರು. ನಾನು ಎಂಬ ಅಸ್ತಿತ್ವವನ್ನ ವಿಸೃಜನೆ ಮಾಡಬೇಕು. ನಾನು ಎಂಬುದು ನಿಸರ್ಗದ ಸಣ್ಣ ಕಣ. ಯಾರೂ ಕೂಡ ಸರ್ವ ಸ್ವತಂತ್ರರಾಗಿ ಹುಟ್ಟಲ್ಲ. ಅಪ್ಪ-ಅಮ್ಮ, ಅಕ್ಕ-ತಂಗಿ, ಅಣ್ಣ-ತಮ್ಮ, ಗುರು ಎಲ್ಲರ ಸಹಾಯದಲ್ಲಿ ಬೆಳೆಯುತ್ತಿದ್ದೇವೆ.
ಇದು ನಮ್ಮ ಅಕೌಂಟ್ ನಲ್ಲಿ ಕ್ರೆಡಿಟ್ ಆಗಿರುತ್ತೆ ಎಂದರು. ಶಂಕರಾಚಾರ್ಯರ ಪರಂಪರೆ, ಶಾರದೆ, ಲಕ್ಷ್ಮಿನರಸಿಂಹರ ಆಶೀರ್ವಾದ ಇರಬೇಕು. ಸಮಾಜದಲ್ಲಿ ಶಾಂತಿ, ಸಹಬಾಳಿತ್ವ ಮುಡಿಸಲು ಮಠದ ಪಾತ್ರ ಬಹಳ ಮುಖ್ಯ. ಅವರು ಕರ್ತವ್ಯ ಮಾಡುತ್ತಿರುವುದರಿಂದ ನೈತಿಕತೆ ಉಳಿದಿದೆ. ಮಠದಿಂದ ಸಮಾಜದ ಪರಿವರ್ತನೆ, ಬದಲಾವಣೆ ಕಾರ್ಯ ನಡೆಯಲಿ. ಸ್ವರ್ಗ ಎಲ್ಲೂ ಇಲ್ಲ, ಇಲ್ಲೆ ಇದೆ. ನಮ್ಮೊಳಗೆ ಇದೆ. ಅನುಭವಿಸಬೇಕಷ್ಟೆ ಎಂದರು.ಬಸವಣ್ಣ ಕಾಯಕವೇ ಕೈಲಾಸ ಎಂದಿದ್ದಾರೆ. ವರ್ಕ್ ಇಸ್ ವರ್ಶಿಪ್. ನ್ಯಾಯ-ನೀತಿಯ ಸಮಾಜ ಸ್ಥಾಪನೆ ಆಗಬೇಕು. ಶಂಕರಾಚಾರ್ಯರ ವಿಚಾರ, ಆಚಾರ-ತತ್ವಗಳನ್ನು ಅರ್ಥ ಮಾಡಿಕೊಂಡು, ಬದುಕಿನಲ್ಲಿ ಕಿಂಚಿತ್ತು ಅಳವಡಿಸಿಕೊಂಡಲ್ಲಿ ಸಮಾಜ ಸುಧಾರಣೆ ಆಗುತ್ತದೆ ಎಂದರು. ನಾನು ಸಿಎಂ ಆಗಿ ಬಂದಿಲ್ಲ. ಭಕ್ತನಾಗಿ ಬಂದಿದ್ದೇನೆ. ಶ್ರದ್ಧಾಪೂರ್ವಕವಾಗಿ ತಲೆ ಭಾಗಿ ಶಾರದೆಗೆ ನಮಸ್ಕಾರ ಮಾಡುತ್ತೇನೆ. ಮಠದ ಮುಂದಿನ ಎಲ್ಲಾ ಕಾರ್ಯಕ್ರಮಕ್ಕೂ ನಮ್ಮ ಸರ್ಕಾರದ ಬೆಂಬಲ ಇರುತ್ತದೆ ಎಲ್ಲರಿಗೂ ಶುಭವಾಗಲಿ ಎಂದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g