ಟ್ಯಾಕ್ಸಿ ಯೂನಿಯನ್ನ 2ನೇ ವರ್ಷದ ವಾರ್ಷಿಕೋತ್ಸವ
1 min readಚಿಕ್ಕಮಗಳೂರು: ಸಂಘಟಿತರಾಗುವ ಮೂಲಕ ಟ್ಯಾಕ್ಸಿ ಚಾಲಕರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಕರೆ ನೀಡಿದರು.
ನಗರದ ರತ್ನಗಿರಿ ರಸ್ತೆ ಶ್ರೀರಾಮ ದೇವಸ್ಥಾನದ ಸಭಾಂಗಣದಲ್ಲಿ ಹಮ್ಮಿಕೊಳ್ಳ ಲಾಗಿದ್ದ ಚಿಕ್ಕಮಗಳೂರು ಟ್ಯಾಕ್ಸಿ ಯೂನಿಯನ್ನ 2ನೇ ವರ್ಷದ ವಾರ್ಷಿಕೋತ್ಸವ ಮತ್ತು ಚಾಲಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.ವಾಹನ ಚಾಲಕರದ್ದು ಜವಾಬ್ದಾರಿ ಕೆಲಸ. ಕೆಲಸ ಪ್ರಾಮಾಣಿಕತೆ ಮುಖ್ಯವಾಗುತ್ತದೆ. ಟ್ಯಾಕ್ಸಿ, ಆಟೋ ಇನ್ನಿತರೆ ವಾಹನಗಳ ಚಾಲಕರು ಎನ್ನುವ ಕೀಳರಿಮೆ ಯಾರಿಗೂ ಬೇಡ. ನಾವು ಪ್ರೀತಿಸಿ ಒಪ್ಪಿಕೊಂಡ ವೃತ್ತಿ ತಾಯಿಯ ಸಮಾನವಾದದ್ದು, ಚಾಲಕರು ಸಂಘಟಿತಾದರೇ ಅಲ್ಲಿ ಬಲ ಇರುತ್ತದೆ. ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಮಾತನಾಡಿ, ಜಿಲ್ಲೆಗೆ ಇತ್ತೀಚಿನ ವರ್ಷ ಗಳಲ್ಲಿ ಪ್ರವಾಸಿಗರ ಭೇಟಿ ಹೆಚ್ಚಿದೆ. ಅವರ ಸುರಕ್ಷತೆಗೆ ಟ್ಯಾಕ್ಸಿ ಚಾಲಕರು ಹೆಚ್ಚಿನ ಒತ್ತುಕೊಡ ಬೇಕು. ಅವರೊಂದಿಗೆ ಪ್ರೀತಿಯಿಂದ ಸೌಜನ್ಯದಿಂದ ವರ್ತಿಸಬೇಕು ಎಂದು ಹೇಳಿದರು.
ಟ್ಯಾಕ್ಸಿ ಚಾಲಕರು ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿಕೊಂಡು ಬೆಳೆಯಬೇಕು. ನಗರದಲ್ಲಿ ಸುಸಜ್ಜಿತ ಟ್ಯಾಕ್ಸಿ ನಿಲ್ದಾಣ ಬೇಕು ಎಂದು ಸಂಘದ ಅಧ್ಯಕ್ಷರು ಕೇಳಿದ್ದಾರೆ. ಜಾಗ ಗುರುತಿಸಲಾ ಗಿದೆ. ಸದ್ಯದಲ್ಲೇ ಸರ್ವೇ ಮಾಡಿಸಿ ಶಾಸಕರ ಗಮನಕ್ಕೆ ತಂದು ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಮಂಜೇಗೌಡ ಮಾತನಾಡಿ, ಬಿಳಿಬೋರ್ಡ್ ವಾಹನಗಳಿಂದ ಹಳದಿ ಬೋರ್ಡ್ ವಾಹನಗಳ ಬಾಡಿಗೆಗೆ ತೊಂದರೆ ಆಗುತ್ತಿದೆ. ಸಂಘದ ಪ್ರಯತ್ನದಿಂದಾಗಿ ಶೇ.50ರಷ್ಟು ಬಿಳಿ ಬೋರ್ಡ್ ವಾಹನಗಳನ್ನು ಹಳದಿ ಬೋರ್ಡ್ಗೆ ಬದಲಿಸಿಕೊಂಡಿದ್ದಾರೆ. ಉಳಿದ ವಾಹನಗಳನ್ನೂ ಹಳದಿ ಬೋರ್ಡ್ಗೆ ಪರಿವರ್ತಿಸಿ ನ್ಯಾಯ ದೊರಕಿಸಬೇಕು ಎಂದರು.
ಸಹಾಯಕ ಕಾರ್ಮಿಕ ಆಯುಕ್ತ ಕೆ.ಬಿ.ನಾಗರಾಜು ಮಾತನಾಡಿ, ಕಾರ್ಮಿಕ ಇಲಾಖೆಯಲ್ಲಿ ಅಸಂಘಟಿತ ಕಾರ್ಮಿಕ ಮಂಡಳಿ ಇದೆ. ಅದರ ವತಿಯಿಂದ ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ಸಾರಿಗೆ ವಾಹನ ನೌಕರರ ಅಪಘಾತ ವಿಮೆ ಯೋಜನೆ ಜಾರಿಗೆ ತರಲಾಗಿದೆ. ಇದು ಇಲಾಖೆಯಿಂದಲೇ ಕೊಡುವ ಸೌಲತ್ತು. ಅದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಪಲ್ಲವಿ ಸಿ.ಟಿ.ರವಿ ಮಾತನಾಡಿ, ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಪ್ರವಾಸಿಗರಲ್ಲಿ ಜಾಗೃತಿ ಮೂಡಿಸುವ ಕೆಲಸ ಟ್ಯಾಕ್ಸಿ ಚಾಲಕರಿಂದ ಆಗಬೇಕು. ಪ್ಲಾಸ್ಟಿಕ್ ಎಲ್ಲೆಂದರಲ್ಲಿ ಎಸೆಯ ದಂತೆ ಪರಿಸರ ಕಾಪಾಡುವಂತೆ ಪ್ರಯಾಣಿಕರಲ್ಲಿ ಮನವಿ ಮಾಡಬೇಕು. ಚಾಲಕ ವೃತ್ತಿಗೆ ಮಹಿಳೆ ಯರು ಬರುವಂತಾಗಬೇಕು. ಸಂಘ ಇದಕ್ಕೆ ಪ್ರೋತ್ಸಾಹಿಸಬೇಕು ಎಂದರು.
ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಆರ್.ಶಿವಕುಮಾರ್ ಮಾತನಾಡಿದರು. ಕಾರ್ಯಕ್ರಮ ದಲ್ಲಿ ಚಂದ್ರದ್ರೋಣ ಗ್ರಾಮಾರಣ್ಯ ಸಮಿತಿ ಅಧ್ಯಕ್ಷ ಜಯಂತ್ ಪೈ, ಸಂಚಾರಿ ಠಾಣಾಧಿಕಾರಿ ಸುನಿತ, ಗೌರವಾಧ್ಯಕ್ಷ ಆರ್.ಗಣೇಶ್, ಇನಾಯತ್ ಖಾನ್, ಪ್ರಧಾನ ಕಾರ್ಯದರ್ಶಿ ಸತೀಶ್ಕುಮಾರ್, ಖಜಾಂಚಿ ಬಾಸ್ಕರ್, ಉಪಾಧ್ಯಕ್ಷರಾದ ಮುರಳಿ ಕುಮಾರ್, ಭರತ್, ಸಹ ಕಾರ್ಯದರ್ಶಿ ನಂದೀಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ಶಶಿಧರ, ಕೃಷ್ಣ, ಸದಸ್ಯ ರಾದ ಆದರ್ಶ್, ವಿಜಯಕುಮಾರ್, ಅಫ್ಜಲ್ ಪಾಶಾ ಇದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g