ರಾಜ್ಯ ಸರ್ಕಾರದಿಂದ ನಮ್ಮ ತೆರಿಗೆ ನಮ್ಮ ಹಕ್ಕು ಪ್ರತಿಭಟನೆ ನಾಟಕ: ಹೆಚ್ ಎಸ್ ಪುಟ್ಟಸ್ವಾಮಿ
1 min readಚಿಕ್ಕಮಗಳೂರು: ಮುಂದಿನ ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿ ಕಾಂಗ್ರೆಸ್ ಸರ್ಕಾರ ನಮ್ಮ ತೆರಿಗೆ ನಮ್ಮ ಹಕ್ಕು ಎಂಬ ಘೋಷಣೆಯಡಿ ದೆಹಲಿಯಲ್ಲಿ ಪ್ರತಿಭಟನೆ ಎಂಬ ನಾಟಕ ಮಾಡುತ್ತಿದ್ದೆ ಎಂದು ಬಿಜೆಪಿ ಮುಖಂಡ ಹಿರೇಮಗಳೂರು ಪುಟ್ಟಸ್ವಾಮಿ ಆರೋಪಿಸಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡಸಿ ಮಾತನಾಡಿದ ಅವರು, ನಮ್ಮ ತೆರಿಗೆ ನಮ್ಮ ಹಕ್ಕು ಅನ್ನುವುದಾದರೆ ಆದಾಯ ತೆರಿಗೆ ಕಟ್ಟುವ ಜನರು ತಮ್ಮ ಅಭಿವೃದ್ಧಿಗೆ ಆ ಅನುದಾನವನ್ನು ಕೇಳಿದರೆ, ದೇವಾಲಯಗಳ ದುಡ್ಡನ್ನು ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಕೇಳಿದರೆ ಆಗುತ್ತಾ, ಈ ರೀತಿ ರಾಜ್ಯದ ಜನರ ದುಡ್ಡನ್ನು ಅಭಿವೃದ್ಧಿಗೆ ಉಪಯೋಗಿಸುವುದನ್ನು ಬಿಟ್ಟು ತಮ್ಮ ಬಿಟ್ಟಿ ಭಾಗ್ಯಕ್ಕೆ ನೀಡಿರುವುದರಿಂದ ಕರ್ನಾಟಕ ರಾಜ್ಯ ಸರ್ಕಾರದ ಖಜಾನೆ ದಿವಾಳಿಯಾಗಿದೆ ಎಂದು ಕಿಡಿಕಾರಿದರು.
10 ಸಾವಿರ ಕೋಟಿ ರೂಗಳನ್ನು ಮುಸ್ಲಿಂ ಸಮುದಾಯಕ್ಕೆ ನೀಡುವುದಾಗಿ ಘೋಷಿಸಿದ್ದೀರಿ, ಆ ಸಮುದಾಯದಿಂದ ಆದಾಯ ತೆರಿಗೆ ಎಷ್ಟು ಸರ್ಕಾರಕ್ಕೆ ಬರುತ್ತಿದೆ ಎಂದು ಸಾರ್ವಜನಿಕವಾಗಿ ತಿಳಿಸಬೇಕು. ಅದಕ್ಕೆ ನಮ್ಮ ತೆರಿಗೆ ನಮ್ಮ ಹಣ ಅನ್ವಯಿಸುವುದಿಲ್ಲವೇ? ಕೇಂದ್ರದ ಯುಪಿಎ ಸರ್ಕಾರ 2004-2014 ರವರೆಗೆ ಹಾಗೂ ಎನ್ಡಿಎ ಸರ್ಕಾರ 2014-2024 ರವರೆಗೆ ಎಷ್ಟು ಅನುದಾನ ರಾಜ್ಯ ಸರ್ಕಾರಕ್ಕೆ ಕೊಟ್ಟಿದೆ ಎಂದು ಕೇಂದ್ರ ಸರ್ಕಾರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ರವರು ಶ್ವೇತಪತ್ರವನ್ನು ಬಿಡುಗಡೆಗೊಳಿಸಿದ್ದಾರೆ ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದ ಮಂಜೂರಾಗಿರುವಂತಹ ಮೆಡಿಕಲ್ ಕಾಲೇಜು ಕಾಮಗಾರಿಯನ್ನು ಅತೀಶೀಘ್ರದಲ್ಲಿ ಮುಗಿಸಬೇಕು. ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು. ಕಳೆದ ಅವಧಿಯಲ್ಲಿ ಚಿಕ್ಕಮಗಳೂರು ಕಡೂರು ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದ್ದು ನಗರದ ಹೊರವಲಯದಲ್ಲಿ ಕೇಂದ್ರೀಯ ವಿದ್ಯಾಲಯ ಉದ್ಘಾಟನೆಗೊಂಡಿದ್ದು, ಚಿಕ್ಕಮಗಳೂರು-ಮೂಡಿಗೆರೆ, ಹಾಸನ-ಚಿಕ್ಕಮಗಳೂರು ಹೆದ್ದಾರಿ ರಸ್ತೆಯು ಅನುಮೋದನೆಗೊಂಡು ಟೆಂಡರ್ ಪ್ರಕ್ರಿಯೆಯಲ್ಲಿದೆ. ಆನೇಕ ಕುಡಿಯುವ ನೀರಿನ ಯೋಜನೆಗಳು ಕೇಂದ್ರ ಸರ್ಕಾರದ ಯೋಜನೆಯಡಿಯಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.
ಚಿಕ್ಕಮಗಳೂರಿನ ಶಾಸಕರ ಅವಧಿ 9 ತಿಂಗಳು ಪೂರ್ಣಗೊಂಡಿದ್ದು ಯಾವುದೇ ರೀತಿಯ ಅನುದಾನಗಳನ್ನು ಸರ್ಕಾರದಿಂದ ತರಲು ವಿಫಲರಾಗಿದ್ದಾರೆ. ಡಿಸಿ ಕಚೇರಿ ಕಾಮಗಾರಿ, ಹೊಸ ಕೋರ್ಟ್ ಬಿಲ್ಡಿಂಗ್ ಕಾಮಗಾರಿ, ಅರಣ್ಯ ಭವನ ಕಾಮಗಾರಿ, ಹೊಸ ಐಬಿ, ಹೊಸ ತಾಲ್ಲೂಕು ಕಚೇರಿ, 600 ಕೋಟಿ ರೂ ವೆಚ್ಚದ ಮೆಡಿಕಲ್ ಕಾಲೇಜು ಈ ರೀತಿ ಅನೇಕ ಕಾಮಗಾರಿಗಳನ್ನು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮಾಜಿ ಶಾಸಕರಾದ ಸಿ.ಟಿ.ರವಿಯವರು ತಂದು ಕೆಲವು ಕಾಮಗಾರಿಗಳು ಪೂರ್ಣಗೊಂಡಿದ್ದು, ಮತ್ತೆ ಕೆಲವು ಚಾಲ್ತಿಯಲ್ಲಿವೆ. ಆದರೆ ಗುದ್ದಲಿ ಪೂಜೆ ಮತ್ತು ಉದ್ಘಾಟನೆಯಲ್ಲೇ ಕಾಲಾಹರಣ ಮಾಡುತ್ತಿರುವ ಈಗಿನ ಶಾಸಕರು ತಮ್ಮ ಅವಧಿಯಲ್ಲಿ ಯಾವ ಹೊಸ ಕಾರ್ಯಕ್ರಮಗಳನ್ನು ಹಾಗೂ ಕಾಮಗಾರಿಗಳನ್ನು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ತಂದಿದ್ದೀರಿ ಎಂದು ಪ್ರಶ್ನಿಸಿದರು.
ತಮ್ಮನ್ನು ತಾವೇ ಬೆನ್ನು ತಟ್ಟಿಕೊಳ್ಳುವುದನ್ನು ಬಿಟ್ಟು ಭ್ರಷ್ಟಾಚಾರ ರಹಿತ ಹಾಗೂ ಅಭಿವೃದ್ಧಿ ಪರವಾದ ಆಡಳಿತವನ್ನು ಮಾಡಬೇಕು. ಅವರ ಯೋಚನೆ ಮತ್ತು ಅಭಿವೃದ್ಧಿ ಪರವಾದ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕಾಗಿ ಶಾಸಕರಿಗೆ ಕಿವಿ ಮಾತನ್ನು ಹೇಳಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g