ಎಂ.ಜಿ ರಸ್ತೆ ಅಂಗಡಿಗಳ ಮೇಲೆ ನಗರಸಭೆ ನೇತೃತ್ವದಲ್ಲಿ ದಾಳಿ, ಪ್ಲಾಸ್ಟಿಕ್ ವಶ
1 min readಚಿಕ್ಕಮಗಳೂರು: ನಗರದ ವಾಣಿಜ್ಯ ಮಳಿಗೆಗಳು ಹಾಗೂ ವ್ಯಾಪಾರ ಪರವಾನಗಿಯನ್ನು ಮಾರ್ಚ್ 19 ರೊಳಗಾಗಿ ನವೀಕರಿಸಿಕೊಳ್ಳದಿದ್ದಲ್ಲಿ ಮಾಲೀಕರಿಗೆ ದಂಡ ವಿಧಿಸಲಾಗುವುದು ಎಂದು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಎಚ್ಚರಿಕೆ ನೀಡಿದ್ದಾರೆ.ನಗರಸಭೆ ಅಧಿಕಾರಿಗಳೊಂದಿಗೆ ಎಂಜಿ ರಸ್ತೆಯ ಕೆಲವು ಅಂಗಡಿಗಳಿಗೆ ದಿಢೀರ್ ಭೇಟಿ ನೀಡಿ ಪರವಾನಗಿ, ಸ್ವಚ್ಛತೆ ಹಾಗೂ ಪ್ಲಾಸ್ಟಿಕ್ ಮಾರಾಟದ ಬಗ್ಗೆ ಪರಿಶೀಲನೆ ನಡೆಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.
ಪ್ರತಿದಿನ ಸೂಪರ್ವೈಸರ್ಗಳು ಹಾಗೂ ಹೆಲ್ತ್ ಇನ್ಸ್ಪೆಕ್ಟರ್ಗಳು ನಗರದ ಎಲ್ಲಾ ವಾಣಿಜ್ಯ ಮಳಿಗೆಗೆಗಳಿಗೆ ಭೇಟಿ ನೀಡಿ ಪರವಾನಗಿ ನವೀಕರಣ ಸೇರಿದಂತೆ ಪ್ಲಾಸ್ಟಿಕ್ ಮಾರಾಟದ ಕುರಿತು ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ನಗರಸಭೆ ಬಜೆಟ್ ಮುಗಿದ ಕೂಡಲೇ ಆಯುಕ್ತರ ಜೊತೆ ತಾವೂ ಸಹ ಖುದ್ದಾಗಿ ವಾಣಿಜ್ಯ ಮಳಿಗೆಗಳಿಗೆ ತೆರಳಿ ಪರಿಶೀಲಿಸುತ್ತೇವೆ ಅಲ್ಲದೇ ಸ್ಥಳದಲ್ಲೇ ಪರವಾನಗಿ ನವೀಕರಿಸುವ ಕೆಲಸವನ್ನೂ ಮಾಡುತ್ತೇವೆ ಎಂದು ತಿಳಿಸಿದರು.
ನಗರದ ಎಂಜಿ ರಸ್ತೆಯ ಮಹಾಲಕ್ಷ್ಮಿ ಸ್ವೀಟ್ಸ್ ಅಂಗಡಿಯವರು ಕಳೆದ ಎರಡು ವರ್ಷಗಳಿಂದ ಪರವಾನಗಿ ನವೀಕರಿಸದೆ ಅನಧಿಕೃತವಾಗಿ ವ್ಯಾಪಾರ ಮಾಡುತ್ತಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ 5000 ರೂ. ದಂಡ ವಿಧಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ತಿಳಿಸಿದರು.
ಇದೇ ಅಂಗಡಿಯವರು ಕೇವಲ 1 ಸಾವಿರ ರೂ.ಗೆ ಪರವಾನಗಿಯನ್ನು ಪಡೆದಿದ್ದಾರೆ. ಇದನ್ನು ವಿತರಿಸಿದವರು ಯಾರು ಎನ್ನುವುದನ್ನು ಸಹ ಪತ್ತೆ ಹಚ್ಚಿ ಅಂತಹ ಅಧಿಕಾರಿ, ಸಿಬ್ಬಂದಿ ವಿರುದ್ಧವೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ನಗರದಲ್ಲಿ ಕೆಲವು ಪಾನೀಪೂರಿ ಮಾರಾಟಗಾರರು ಇನ್ನಿತರೆ ವ್ಯಾಪಾರಿಗಳು ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬಾರದು ಎಂದು ಕಳೆದ ಒಂದು ತಿಂಗಳಿನಿಂದಲೂ ಸೂಚನೇ ನೀಡುತ್ತಲೇ ಬಂದಿದ್ದರೂ ಅದನ್ನು ಪಾಲಿಸದಿರುವುದು ಕಂಡು ಬಂದಿದೆ ಇನ್ನು ಮುಂದೆ ಇಂತಹ ಪರಿಪಾಠ ಮುಂದುವರಿದಲ್ಲಿ ಅವರನ್ನು ಅಲ್ಲಿಂದ ತೆರವುಮಾಡಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಕರಾದ ರಂಗಪ್ಪ, ಸೂಪರ್ವೈಸರಾದ ರಮೇಶ್, ವಿವೇಕ್, ಸತೀಶ್, ಶ್ರೀನಿವಾಸ್, ಭರತ್ಕುಮಾರ್ ಉಪಸ್ಥಿತರಿದ್ದರು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g