ಸರ್ಕಾರದ ಮಾತು ನಂಬಿ ಶ್ರೀಗಂಧ ಬೆಳೆಯಬೇಡಿ, ಬೀದಿಗೆ ಬೀಳ್ತೀರಾ : ಶ್ರೀಗಂಧ ಬೆಳೆಗಾರರ ಆಕ್ರೋಶ
1 min read
ಚಿಕ್ಕಮಗಳೂರು.ಶ್ರೀಗಂಧದ ಬೆಳೆಗೆ ಸೂಕ್ತ ಪರಿಹಾರ ನೀಡಿವಂತೆ ಆಗ್ರಹಿಸಿ ಶ್ರೀಗಂಧ ಬೆಳೆಗಾರರ ಪ್ರತಿಭಟನೆ 26ನೇ ದಿನಕ್ಕೆ ಕಾಲಿಟ್ಟಿದ್ದು ಸರ್ಕಾರದ ಬೇಜವಾಬ್ದಾರಿತನದ ವಿರುದ್ಧ ರೈತರು ಅರೆಬೆತ್ತಲೆ ಪ್ರತಿಭಟನೆ ನಡೆಸುತ್ತಿದ್ದಾರೆ. ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿ 22 ರೈತರು ತಮ್ಮ ಜಮೀನಿನಲ್ಲಿ ಶ್ರೀಗಂಧವನ್ನ ಬೆಳೆದಿದ್ದರು. ಈ ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದ್ದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭೂಮಿಯನ್ನ ವಶಪಡಿಸಿಕೊಳ್ಳಲು ಮುಂದಾಗಿದ್ದರು. ಆದರೆ, ರೈತರು ಸೂಕ್ತ ಪರಿಹಾರ ನೀಡಿ ಎಂದು ಕಳೆದ ಎರಡ್ಮೂರು ವರ್ಷಗಳಿಂದ ಮನವಿ ಮಾಡುತ್ತಿದ್ದಾರೆ. ಸರ್ಕಾರದ ವಿರುದ್ಧ ಹೋರಾಡುತ್ತಿದ್ದಾರೆ. ಆದರೆ, ಸರ್ಕಾರ ಒಂದು ಶ್ರೀಗಂಧದ ಗಿಡಕ್ಕೆ ಕೇವಲ 420 ರೂಪಾಯಿಯನ್ನ ನಿಗಧಿ ಮಾಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಹಾಗಾಗಿ, ರೈತರು ಕಳೆದ 26 ದಿನದಿಂದ ತಮ್ಮ ಜಮೀನಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಹೈಕೋರ್ಟಿನ ಸಿಂಗಲ್ ಬೆಂಚ್ ಒಂದು ವರ್ಷದ ಹಿಂದೆಯೇ ಒಂದು ಮರಕ್ಕೆ 2 ಲಕ್ಷದ 44 ಸಾವಿರ ನೀಡಿ ಎಂದು ಆದೇಶಿಸಿದೆ, ದ್ವಿಸದಸ್ಯ ಪೀಟ ಮೂರು ತಿಂಗಳ ಹಿಂದೆ 2 ಲಕ್ಷದ 44 ಸಾವಿರ ನೀಡುವಂತೆ ಆದೇಶಿಸಿದೆ. ಆದರೆ, ಸರ್ಕಾರ ಹಾಗೂ ಅಧಿಕಾರಿಗಳು ಹೈಕೋರ್ಟ್ ಆದೇಶವನ್ನ ಉಲ್ಲಂಘಿಸಿ ಒಂದು ಗಿಡಕ್ಕೆ ಕೇವಲ 420 ರೂಪಾಯಿ ನೀಡಿದ್ದಾರೆ. ಈ ಹಣ ಒಂದು ಸಣ್ಣ ಗಿಡ ತರಲು ಆಗುವುದಿಲ್ಲ ಎಂದು ಧರಣಿ ನಡೆಸುತ್ತಿದ್ದಾರೆ. ಸರ್ಕಾರ ಶ್ರೀಗಂಧ ಬೆಳೆಯಿರಿ, ಸರ್ಕಾರದಿಂದ ಸಬ್ಸಿಡಿ ಸಿಗಲಿದೆ ಎಂದು ರೈತರನ್ನ ದಾರಿ ತಪ್ಪಿಸುತ್ತಿದೆ. ಆದರೆ, ಸರ್ಕಾರದ ಮಾತು ನಂಬಿ ನೀವು ಶ್ರೀಗಂಧ ಬೆಳೆದರೆ ನಮ್ಮಂತೆ ಬೀದಿಗೆ ಬರುತ್ತೀರಾ ಎಂದು ರೈತರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. 26 ದಿನಗಳಿಂದ ಪ್ರತಿಭಟಿಸುತ್ತಿರುವ ರೈತರು ಸರ್ಕಾರದ ವಿರುದ್ಧ ಅರೆಬೆತ್ತಲೆ ಧರಣಿಗೆ ಮುಂದಾಗಿದ್ದಾರೆ. ಗಂಡಸರು, ಮಕ್ಕಳು ಶರ್ಟ್ ಬಿಚ್ಚಿ ಪ್ರತಿಭಟನೆಗೆ ಮುಂದಾಗಿದ್ದಾರೆ. ಮಕ್ಕಳು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು ಬೆಳಗ್ಗೆ ಎಕ್ಸಾಂ ಬರೆಯಲು ಹೋಗುವ ಮಕ್ಕಳು ಸಂಜೆ ಪ್ರತಿಭಟನೆ ಜಾಗದಲ್ಲೇ ಓದುತ್ತಿದ್ದಾರೆ.
ಹಿಜಬ್ ತೀರ್ಪು ಒಂದೇ ದಿನಕ್ಕೆ ಜಾರಿ : ಹಿಜಬ್ ವಿಚಾರದಲ್ಲಿ ಹೈಕೋರ್ಟ್ ನೀಡಿದ ತೀರ್ಪನ್ನ ಸರ್ಕಾರ ಒಂದೇ ಜಾರಿಗೆ ತರಲು ಮುಂದಾಗಿದೆ. ಆದರೆ, ನಮ್ಮ ಪರ ಹೈಕೋರ್ಟ್ ತೀರ್ಪು ನೀಡಿ ಮೂರು ತಿಂಗಳಾದರೂ ಸರ್ಕಾರ ಏಕೆ ಮೀನಾಮೇಷ ಎಣಿಸುತ್ತಿದೆ. ಸರ್ಕಾರದ ಬಳಿ ಹೈಕೋರ್ಟ್ ಆದೇಶಕ್ಕೂ ಬೆಲೆ ಇಲ್ಲದಂತಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಹೈಕೋರ್ಟ್ ಆದೇಶದ ಪ್ರಕಾರ 22 ಕುಟುಂಗಳಿಗೆ 62 ಕೋಟಿ ಹಣ ಸಿಗಬೇಕಿದೆ. ಆದರೆ, ಸರ್ಕಾರದ 420 ರೂಪಾಯಿ ಲೆಕ್ಕದಲ್ಲಿ 2 ಲಕ್ಷದ 50 ಸಾವಿರ ಆಗಲಿದೆ. ಹಾಗಾಗಿ, ರೈತರು ನಮಗೆ ಹೈಕೋರ್ಟ್ ಆದೇಶದಂತೆ ಪರಿಹಾರ ನೀಡಿ ಎಂದು ಅರೆಬೆತ್ತಲೆ ಧರಣಿ ನಡೆಸುತ್ತಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g