ವಸತಿ ನಿಲಯಕ್ಕೆ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಭೇಟಿ, ಪರಿಶೀಲನೆ
1 min readಚಿಕ್ಕಮಗಳೂರು-ನಗರದ ಹೌಸಿಂಗ್ ಬೋರ್ಡ್ನಲ್ಲಿರುವ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಭೇಟಿ ನೀಡಿ ಸ್ವಚ್ಚತೆ ಕುರಿತು ಪರಿಶೀಲನೆ ನಡೆಸಿದರು.
ವಸತಿ ನಿಲಯದ ಅಡುಗೆ ಕೋಣೆಯಲ್ಲಿ ಗುಣಮಟ್ಟದ ತರಕಾರಿಗಳು ಇಲ್ಲದಿರುವುದನ್ನು ಕಂಡು ಅಲ್ಲಿನ ಸಿಬ್ಬಂದಿಗಳು ಹಾಗೂ ವಸತಿ ನಿಲಯ ಪಾಲಕರ ವಿರುದ್ಧ ಗರಂ ಆದರು.
ಬಳಿಕ ಮಾತನಾಡಿ ವಸತಿ ನಿಲಯಗಳಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಬೇಕು, ಅಡುಗೆ ಕೋಣೆ, ಶೌಚಾಲಯ, ತರಕಾರಿ ಸಂಗ್ರಹಣಾ ಕೊಠಡಿಗಳನ್ನು ಸುವ್ಯವಸ್ಥಿತವಾಗಿ ಇಟ್ಟುಕೊಳ್ಳಬೇಕು, ವಿದ್ಯಾರ್ಥಿಗಳಿಗೆ ಪರಿಸರದ ಕುರಿತು ಅರಿವು ಮೂಡಿಸುವಂತೆ ಸಲಹೆ ನೀಡಿದರು.
ವಸತಿ ನಿಲಯದಲ್ಲಿ ಸುಮಾರು 150 ವಿದ್ಯಾರ್ಥಿನಿಯರಿದ್ದ ಕಡಿಮೆ ಪ್ರಮಾಣದಲ್ಲಿ ತರಕಾರಿಗಳು ಇರುವುದನ್ನು ಕಂಡು ಪ್ರಶ್ನಿಸಿದ ಅವರು ವಿದ್ಯಾರ್ಥಿಗಳಿಗೆ ಪೌಷ್ಟಿಕವಾದ ಆಹಾರ ನೀಡುವ ನಿಟ್ಟಿನಲ್ಲಿ ಗುಣಮಟ್ಟದ ತರಕಾರಿಗಳನ್ನು ಬಳಸಬೇಕು. ಸರ್ಕಾರ ವಿವಿಧ ರೀತಿಯಲ್ಲಿ ಸೌಲಭ್ಯಗಳನ್ನು ನೀಡುತ್ತಿದ್ದು ಯಾವುದೇ ಲೋಪಗಳು ಕಂಡು ಬಂದಲ್ಲಿ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಇದೇ ವೇಳೆ ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ವಾಸ್ತವ ಸ್ಥಿತಿ ವಿವರಿಸಿದಾಗ ನಿಲಯದ ಸಂಪೂರ್ಣ ವರದಿಯನ್ನು ಸಲ್ಲಿಸುವಂತೆ ನಿಲಯ ಪಾಲಕರಿಗೆ ಸೂಚನೆ ನೀಡಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಆಹಾರ ಪದಾರ್ಥಗಳನ್ನು ಬಳಸಬೇಕು ಮುಂದಿನ ದಿನಗಳಲ್ಲಿ ಆಹಾರ ನೀಡುವ ವಿಚಾರದಲ್ಲಿ ವಸತಿ ನಿಲಯಗಳಲ್ಲಿ ಲೋಪಗಳು ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಚೈತ್ರಾ ಮಾತನಾಡಿ ವಸತಿ ನಿಲಯಗಳಲ್ಲಿ ಪ್ರತಿ ವಾರಕ್ಕೆ 2 ಬಾರಿ ತರಕಾರಿಗಳನ್ನು ಖರೀದಿ ಮಾಡಲಾಗುತ್ತದೆ. ಖಚಿತತೆಗಾಗಿ ಛಾಯಾಚಿತ್ರಗಳನ್ನು ತೆಗೆದಿಡುವಂತೆ ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ. ಆದರೆ ಈ ಬಾರಿಯಲ್ಲಿ ಲೋಪವಾಗಿರುವುದು ಗಮನಕ್ಕೆ ಬಂದಿದ್ದು ಮಾಹಿತಿ ಪಡೆದು ವಸತಿ ನಿಲಯದ ವಿರುದ್ಧ ಕ್ರಮವಹಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ಕವಿತಾ ಶೇಖರ್ ಇದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g