75 ವರ್ಷಗಳ ಬಳಿಕ ಸರ್ಕಾರಿ ಬಸ್ ಕಂಡ ಕಾಫಿನಾಡ ಕುಗ್ರಾಮ
1 min readರಾಜ್ಯವನ್ನಾಳಿದ ಹಲವು ರಾಜ ಮನೆತನಗಳಲ್ಲಿ ಹೊಯ್ಸಳ ಮನೆತನ ಕೂಡ ಒಂದು. ಅಂತಹಾ ಹೊಯ್ಸಳ ರಾಜರ ಮೂಲ ಸ್ಥಾನವಾದ ಹೊಯ್ಸಳಲು ಗ್ರಾಮದಲ್ಲಿ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳ ಬಳಿಕ ಮೊದಲ ಬಾರಿಗೆ ಸರ್ಕಾರಿ ಬಸ್ ಓಡಿದೆ. ದಶಕಗಳ ಮನವಿ ಹಾಗೂ ಹೋರಾಟದ ಬಳಿಕ ಅಂತು-ಇಂತು ನಮ್ಮ ಊರಿಗೆ ಸರ್ಕಾರಿ ಬಸ್ ಬಂತೆಂದು ಗ್ರಾಮಸ್ಥರು ಸಂತಸಗೊಂಡಿದ್ದಾರೆ. ರಾಜವಂಶ ಹೊಯ್ಸಳರ ಮೂಲಸ್ಥಾನ ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹೊಯ್ಸಳಲು ಗ್ರಾಮ. ಈ ಗ್ರಾಮದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದ್ದ ದೇವಾಲಯ ಇಂದಿಗೂ ಇದೆ. ಈ ಗ್ರಾಮದಲ್ಲಿ ಸುಮಾರು 200ಕ್ಕೂ ಅಧಿಕ ಕುಟುಂಬಗಳಿವೆ. ಕಾಡಂಚಿನ ಈ ಕುಗ್ರಾಮ ಮೂಲಭೂತ ಸಮಸ್ಯೆಗಳಿಂದ ವಂಚಿತವಾಗಿತ್ತು. 75 ವರ್ಷಗಳಿಂದ ಅನೇಕ ಸರ್ಕಾರಗಳು ಬಂದು- ಹೋದರು ಈ ಗ್ರಾಮಕ್ಕೆ ಸರ್ಕಾರಿ ಬಸ್ ಓಡಿರಲಿಲ್ಲ. ಈ ಗ್ರಾಮದ ಇತರೆ ಸಮಸ್ಯೆಗಳಿಗೂ ಯಾವ ಸರ್ಕಾರಗಳು ಸ್ಪಂದಿಸಿರಲಿಲ್ಲ. ಬಡವರು-ಕೂಲಿ ಕಾರ್ಮಿಕರೇ ಹೆಚ್ಚಿರುವ ಮೂಲಭೂತ ಸೌಲಭ್ಯ ಹಾಗೂ ಸರ್ಕಾರಿ ಬಸ್ ಸೇವೆಗೆ ಹಲವು ದಶಕಗಳಿಂದ ಮನವಿ ಮಾಡುತ್ತಲೇ ಬಂದಿದ್ದರು. ಆದರೆ, ಮಾಡುತ್ತೇವೆ ಅನ್ನೋ ಸರ್ಕಾರ ಹಾಗೂ ಜನನಾಯಕರು ಏನನ್ನೂ ಮಾಡಿರಲಿಲ್ಲ. ಬಿಸಿಲು, ಮಳೆ, ಚಳಿ ಗಾಳಿ ಎನ್ನದೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು 5 ಕಿ.ಮೀ ನಡೆದುಕೊಂಡು ಬಂದು ಬಸ್ ಹಿಡಿದು ಶಾಲೆಗೆ – ಕಚೇರಿಗಳಿಗೆ ಹೋಗಬೇಕಾಗಿತ್ತು. ಇಲ್ಲಿನ ನಿವಾಸಿಗಳು ಮೂಡಿಗೆರೆಗೆ ನೂತನವಾಗಿ ಆಯ್ಕೆಯಾದ ಶಾಸಕಿ ನಯನಾ ಮೋಟಮ್ಮರಿಗೂ ಬಸ್ ಗಾಗಿ ಮನವಿ ಸಲ್ಲಿಸಿದ್ದರು. ಇದೀಗ ಹೊಯ್ಸಳಲು ಗ್ರಾಮಕ್ಕೆ ಸರ್ಕಾರಿ ಬಸ್ ಬಂದಿರುವುದು ಗ್ರಾಮಸ್ಥರ ದಶಕಗಳ ಹೋರಾಟಕ್ಕೆ ಸಿಕ್ಕ ಜಯವಾಗಿದೆ. ಹಾಗಾಗಿ, ಗ್ರಾಮಸ್ಥರು ಬಸ್ಸಿಗೆ ತಳಿರು ತೋರಣಗಳನ್ನ ಕಟ್ಟಿ ಸ್ವಾಗತಿಕೊಂಡಿದ್ದಾರೆ. ಬಸ್ಸಿನ ಬಾಗಿಲಿಗೆ ಟೇಪ್ ಕಟ್ಟಿ, ಟೇಪ್ ಕತ್ತರಿಸುವ ಮೂಲಕ ಮತ್ತೆಂದು ನಿಲ್ಲದಿರಲಿ ಎಂದು ಸಂಚಾರಕ್ಕೆ ಅಡಿ ಇಟ್ಟಿದ್ದಾರೆ. ಹೊಯ್ಸಳಲು ಗ್ರಾಮಕ್ಕೆ ಸರ್ಕಾರಿ ಬಸ್ ಸೇವೆ ಸಿಕ್ಕಿರುವುದರಿಂದ ಶಕ್ತಿ ಯೋಚನೆಯು ಈ ಭಾಗದ ಬಡ ವರ್ಗದವರಿಗೆ ಲಭ್ಯವಾಗಲಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ನೂರಾರು ಹಳ್ಳಿಗಳಿಗೆ ಇಂದಿಗೂ ಸರ್ಕಾರಿ ಬಸ್ ಸೌಲಭ್ಯವಿಲ್ಲ. ಹಾಗಾಗಿ, ಸರ್ಕಾರ ಎಲ್ಲಾ ಭಾಗಕ್ಕೂ ಸರ್ಕಾರಿ ಬಸ್ ಬಿಡುವಂತೆ ಮಲೆನಾಡಿಗರು ಆಗ್ರಹಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g