ಜಗತ್ತಿನ ಯಾವುದೇ ಕ್ಷೇತ್ರದ ಪರಿಭಾಷೆ ಗೆಲುವೇ ಆಗಿರುತ್ತದೆ – ಶೃತಿ
1 min readಅಜ್ಜಂಪುರ: ಜಗತ್ತಿನ ಯಾವುದೇ ಕ್ಷೇತ್ರದ ಪರಿಭಾಷೆ ಗೆಲುವೇ ಆಗಿರುತ್ತದೆ. ಎಲ್ಲರು ಗೆಲುವಿಗಾಗಿ ಹಪ ಹಪಿಸುತ್ತಿದ್ದಾರೆ ಎಂದು ಉಪನ್ಯಾಸಕಿ ಅಜ್ಜಂಪುರ ಎಸ್. ಶೃತಿ ಅಭಿಪ್ರಾಯಿಸಿದರು.ಪಟ್ಟಣದ ಅರುಣೋದಯ ಪದವಿ ಪೂರ್ವ ಕಾಲೇಜಿನಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಶ್ರಾವಣ ಸಂಜೆಯಲ್ಲಿ ಮತ್ತೆ ಕಲ್ಯಾಣ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ವಿದ್ಯಾರ್ಥಿ ದೆಸೆಯಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು, ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆಂದು ಕೀಳರಮೆ ಇಟ್ಟುಕೊಳ್ಳದೆ ಅವಕಾಶದ ಮಹಾಪೂರವೇ ಹರಿದು ಬಂದಿದೆ ಎಂದುಕೊಳ್ಳುತ್ತ ಕಲಾ ವಿಷಯವನ್ನೇ ವರವನ್ನಾಗಿ ಮಾಡಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಬೇಕು. ಸಾಧನೆ ಎಂದಿಗೂ ಸುಮ್ಮನೆ ಆಗುವಂತದಲ್ಲ ಅದಕ್ಕಾಗಿ ಮಾಡಿದಂತಹ ಸಿದ್ಧತೆ, ಪರಿಶ್ರಮ ಮತ್ತು ಛಲ ಬಿಡದೆ ನಿರಂತರವಾಗಿ ಪ್ರಯತ್ನಿಸಿದರೆ ಮಾತ್ರ ಗೆಲುವು ನಮ್ಮದಾಗುತ್ತದೆ ಎಂದರು.
ಗುರಿಯ ಗಮ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಸಾಧನೆಯ ತಪಸ್ಸನ್ನು ಇಂದಿನಿಂದಲೇ ಮಾಡುವ ಜತೆಗೆ ನಮ್ಮ ಗಮ್ಯ ಸಾಧಿಸಲು ದಾರಿ ಬದಲಾದರೂ ಗುರಿ ಬದಲಾಗದಂತೆ ಪ್ರತಿಕ್ಷಣವು ಎಚ್ಚರದಿಂದ ಸಾಗಬೇಕು ಎಂದು ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು.ಕಸಾಪ ಗೌರವ ಸಲಹೆಗಾರರಾದ ಎ ಸಿ ಚಂದ್ರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಯುವ ಜನತೆ ಮೊಬೈಲ್ ಗೀಳಿನಿಂದ ಹೊರಬಂದು ಪುಸ್ತಕವನ್ನು ಓದಬೇಕು, ಪುಸ್ತಕ ನಮ್ಮ ಸಂಸ್ಕೃತಿಯ ಮೂಲಾಧಾರವಾಗಿದೆ. ಜ್ಞಾನಾರ್ಜನೆಯ ಜತೆಗೆ ಸಮಾಜದೊಂದಿಗೆ ನಿಕಟ ಸಂಪರ್ಕದಲ್ಲಿರಲು ಸಾಧ್ಯವೆಂದು ತಿಳಿಸಿದರು.ಕಾಲೇಜಿನ ಪ್ರಾಂಶುಪಾಲ ರಾಮಚಂದ್ರಪ್ಪ ಅಧ್ಯಕ್ಷತೆವಹಿಸಿದ್ದರು. ಕಸಾಪ ಮಹಿಳಾ ಘಟಕದ ಕೋಶಾಧ್ಯಕ್ಷೆ ಗಾಯತ್ರಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಕೃಷ್ಣಮೂರ್ತಿ, ಪಂಚಾಕ್ಷರಿ, ಕಸಾಪ ಮಹಿಳಾ ಘಟಕದ ಕಾರ್ಯದರ್ಶಿ ಶಾರದಮ್ಮ ಶಿವಕುಮಾರ್ ಓಂಕಾರಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g