ಜಿಲ್ಲಾಧಿಕಾರಿಗಳಿಂದ ಮಕ್ಕಳಿಗೆ ಗಣಿತ ಪಾಠ, ಎಸ್ಪಿ, ಸಿಇಒ ಸಹ ಭೋದನೆ
1 min read
ಚಿಕ್ಕಮಗಳೂರು: ಹಿಜಾಬ್_ಕೇಸರಿ ಸಾಲು ವಿವಾದ ಬಳಿಕ ಬುಧವಾರ ಕಾಲೇಜುಗಳು ಆರಂಭಗೊಂಡಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೆ.ಎನ್ ರಮೇಶ್, ಪೊಲೀಸ್ ವರಿಷ್ಟಾಧಿಕಾರಿ ಎಂ.ಹೆಚ್ ಅಕ್ಷಯ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ಚಹಣಾಧಿಕಾರಿ ಜಿ.ಪ್ರಭು ನಗರದ ಅನೇಕ ಕಾಲೇಜುಗಳಿಗೆ ಭೇಟಿ ನೀಡಿದರು. ಈ ವೇಳೆ ಇಂದಾವರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕೆಲಕಾಲ ಪಾಠ ಮಾಡಿದರು.
ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಕಿಡಿ ರಾಜ್ಯಾದ್ಯಂತ ದೊಡ್ಡ ಸಂಚಲನ ಸೃಷ್ಟಿಸಿತ್ತು, ಈ ವೇಳೆ ನಗರದ ಐಡಿಎಸ್ಜಿ ಕಾಲೇಜಿನಲ್ಲಿ ಸಹ ವಿವಾದ ಕಂಡು ಬಂದಿತ್ತು. ಹಿಜಾಬ್ಕೇಸರಿನೀಲಿ ಶಾಲು ಧರಿಸಿದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಬಳಿಕ ಕಾಲೇಜಿಗೆ ರಜೆ ಘೋಷಣೆಯಾದ ಹಿನ್ನೆಲೆ ಪರಿಸ್ಥಿತಿ ತಿಳಿಗೊಂಡಿದ್ದು ಬುಧವಾರ ಮತ್ತೆ ಕಾಲೇಜು ಆರಂಭವಾಗಿದ್ದು ಯಾವುದೇ ಅಹಿತಕರ ಘಟನೆ ಐಡಿಎಸ್ಜಿ ಕಾಲೇಜಿನಲ್ಲಿ ಕಂಡು ಬರಲಿಲ್ಲ.
* ಯೂನಿಫಾರಂ ಧರಿಸಿ ಬಂದ ವಿದ್ಯಾರ್ಥಿಗಳು
ಬುಧವಾರದಿಂದ ಕಾಲೇಜುಗಳು ಆರಂಭಗೊಂಡ ಹಿನ್ನಲೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ನಗರದ ಐಡಿಎಸ್ಜಿ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳಿಗೆ ಭೇಟಿ ನೀಡಿದರು. ಈ ವೇಳೆ ಬಹುತೇಕ ವಿದ್ಯಾರ್ಥಿಗಳು ತರಗತಿಗಳಿಗೆ ಕಾಲೇಜು ಸಮವಸ್ತ್ರ ಧರಿಸಿ ತರಗತಿಗಳಿಗೆ ಹಾಜರಾಗಿದ್ದನ್ನು ಕಂಡು ಖುಷಿ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ಹಿಜಾಬ್, ಮತ್ತು ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿ ನಗರದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ತರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು, ವಿದ್ಯಾರ್ಥಿಗಳು ಕಡ್ಡಾಯವಾಗಿ ಕೋರ್ಟ್ ಆದೇಶವನ್ನು ಪಾಲನೆ ಮಾಡಬೇಕು ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನ ನೀಡುವಂತೆ ಸಲಹೆ ನೀಡಿದರು.
ರಾಜ್ಯದಲ್ಲಿಯೇ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ 2ನೇ ಸರ್ಕಾರಿ ಕಾಲೇಜು ಎಂಬ ಹೆಗ್ಗಳಿಕೆ ಐಡಿಎಸ್ಜಿ ಕಾಲೇಜಿಗಿದೆ. ತರಗತಿಗಳು ಇಂದಿನಿಂದ ಆರಂಭಗೊಂಡಿದ್ದು ಜಿಲ್ಲೆಯ ಬಹುತೇಕ ಕಾಲೇಜುಗಳಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಮೂಲಕ ಹೈಕೋರ್ಟ್ ಆದೇಶವನ್ನು ಪಾಲನೆ ಮಾಡಲಾಗಿದೆ ಎಂದು ತಿಳಿಸಿದರು.
ಐಡಿಎಸ್ಜಿ ಕಾಲೇಜಿನಲ್ಲಿ ಬಹುತೇಕ ವಿದ್ಯಾರ್ಥಿಗಳು ತರಗತಿಗೆ ಸಮವಸ್ತ್ರದಲ್ಲಿಯೇ ಹಾಜರಾಗಿ ಪಾಠ ಆಲಿಸಿದ್ದಾರೆ. ಇದು ರಾಜ್ಯದ ಇತರೆ ಕಾಲೇಜಗಳಿಗೆ ಮಾದರಿಯಾಗಲಿದೆ. ಮುಂದಿನ ದಿನಗಳಲ್ಲಿ ಸಮವಸ್ತ್ರ ಧರಿಸಿ ಹಾಜರಾಗುವ ವಿದ್ಯಾರ್ಥಿಗಳನ್ನು ಶ್ಲಾಘಿಸಿ ಅಭಿನಂದಿಸುವಂತೆ ಪ್ರಾಂಶುಪಾಲರು, ಉಪನ್ಯಾಸಕರಿಗೆ ಸಲಹೆ ನೀಡಿದರು.
* ಇಂದಾವರ ಶಾಲೆಯಲ್ಲಿ ಗಣಿತ ಪಾಠ
ಮಂಗಳವಾರ ತಾಲೂಕಿನ ಇಂದಾವರ ಪ್ರೌಢಶಾಲೆಯಲ್ಲಿ ಹಿಜಾಬ್ ವಿವಾದ ಉಂಟಾದ ಸಂಬಂಧ ಬುಧವಾರ ಡಿಸಿ, ಎಸ್ಪಿ ಹಾಗೂ ಸಿಇಒ ಶಾಲೆಗೆ ಭೇಟಿ ನೀಡಿ ಕೆಲ ಕಾಲ ಮಕ್ಕಳಿಗೆ ಪಾಠ ಮಾಡಿದರು. ಜಿಲಾಧಿಕಾರಿ ಕೆ.ಎನ್ ರಮೇಶ್, ಎಸ್ಪಿ ಎಂ ಹೆಚ್ ಅಕ್ಷಯ್ ಗಣಿತ, ವಿಜ್ಞಾನ ಪಾಠ ಮಾಡಿದರೆ, ಸಿಇಒ ಜಿ.ಪ್ರಭು ಸಮಾಜವಿಜ್ಞಾನದ ಬಗ್ಗೆ ಭೋದನೆ ಮಾಡಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಕೆ.ಎನ್ ರಮೇಶ್ ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ತಿಳುವಳಿಕೆ ಮೂಡಿಸಲಾಗಿದೆ. ಹೈಕೋರ್ಟ್ ಆದೇಶ ಪಾಲನೆ ಬಗ್ಗೆ ಮಾಹಿತಿ ನೀಡಲಾಗಿದೆ, ಇದೀಗ ಸಮಸ್ಯೆ ತಿಳಿಯಾಗಿದ್ದು ಬಹುತೇಕ ವಿದ್ಯಾರ್ಥಿಗಳು ತರಗತಿಗಳಗೆ ಹಾಜರಾಗಿದ್ದಾರೆ ಎಂದು ತಿಳಿಸಿದರು. ಶಾಲಾ-ಕಾಲೇಜುಗಳನ್ನು ಯಾವುದೇ ಕಾರಣಕ್ಕೂ ಬಂದ್ ಮಾಡುವ ಪ್ರಶ್ನೆಯೇ ಇಲ್ಲ, ಈಗಾಗಲೇ ಪರೀಕ್ಷೆಗಳು ಸಮೀಪಿಸುತಿದ್ದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ವಿವಾದ ಕೈಬಿಟ್ಟು ಶಾಲೆಗಳಿಗೆ ಹಾಜರಾಗುವ ಮೂಲಕ ಸರ್ಕಾರದ ಆದೇಶ ಪಾಲನೆ ಮಾಡುವಂತೆ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಹೆಚ್.ಅಕ್ಷಯ್ ಮಾತನಾಡಿ ಪದವಿ ಹಾಗೂ ಪಿಯುಸಿ ತರಗತಿಗಳು ಆರಂಭಗೊಂಡಿದ್ದು ನಗರದ ಕಾಲೇಜುಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾಲೇಜುಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ ಎಂದು ತಿಳಿಸಿದರು.
ಹೈಕೋಟ ಆದೇಶ ಪಾಲನೆ ಮಾಡುವುದು ನಮ್ಮೆಲ್ಲರ ಕರ್ತವ್ಯ, ಇದನ್ನು ಉಲ್ಲಂಘನೆ ಮಾಡಿ ಶಾಂತಿ, ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g