ಮಲೆನಾಡಲ್ಲಿ ಮಳೆ ಅಬ್ಬರ, ಮನೆ ಮುಂದಕ್ಕೆ ಜರುಗಿದ ಗುಡ್ಡ
1 min read
ಕಾಫಿನಾಡಲ್ಲಿ ಕಳೆದ ಹದಿನೈದು ದಿನದಿಂದ ಬಿಡುವು ನೀಡಿದ್ದ ವರುಣದೇವ ಇಂದು ಮತ್ತೆ ಅಬ್ಬರಿಸಿ ಬೊಬ್ಬರಿದಿದ್ದಾನೆ. ಮಳೆ-ಗಾಳಿಯ ಅಬ್ಬರ ಜೋರಾದ ಪರಿಣಾಮ ಗುಡ್ಡದ ಮಣ್ಣು ಜರುಗಿ ಮನೆಯ ಮುಂದೆ ಬಂದು ಕೂತಿದ್ದು ಮನೆಯವರು ಓಡಾಡಲು ಸಾಧ್ಯವಾಗದಂತಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ಭಾಗದಲ್ಲಿ ಸಂಜೆ ಭಾರೀ ಮಳೆ ಸುರಿದಿದೆ. ಭಾರೀ ಮಳೆಯ ಪರಿಣಾಮ ಕಳಸ ತಾಲೂಕಿನ ಕವನಹಳ್ಳ ಗ್ರಾಮದಲ್ಲಿ ಭಾರೀ ಭೂಕುಸಿತ ಉಂಟಾಗಿದೆ. ಕವನಹಳ್ಳಿ ಗ್ರಾಮದ ವನಿತಾ-ಉದಯ್ ಎಂಬುವರ ಮನೆ ಬಳಿ ಭಾರೀ ಪ್ರಮಾಣದಲ್ಲಿ ಭೂಕುಸಿತ ಉಂಟಾಗಿದೆ. ಮನೆ ಮುಂದೆ ಲೋಡ್ಗಟ್ಟಲೇ ಮಣ್ಣಿನ ರಾಶಿ ಬಂದು ಕೂತಿದೆ. ಮನೆಯ ಒಳಗೂ ಕೆಸರು ಮಿಶ್ರಿತ ನೀರು ಹರಿದು ಸಾಕಷ್ಟು ಹಾನಿಯಾಗಿದೆ.
ಅಷ್ಟೆ ಅಲ್ಲದೆ, ಮಳೆ ಪ್ರಮಾಣ ಹೆಚ್ಚಾಗುತ್ತಿದ್ದ ನಿರಂತರವಾಗಿ ಮಣ್ಣು ಜಾರುತ್ತಿರುವುದರಿಂದ ಕುಟುಂಬ ಕಂಗಾಲಾಗಿ ಹೋಗಿದೆ. ಗುಡ್ಡದ ಮಣ್ಣು ಜರುಗುತ್ತಿದ್ದಂತೆ ಗುಡ್ಡದ ಮೇಲಿದ್ದ ಕಾಫಿತೋಟದ ಕಾಫಿ, ಅಡಿಕೆ ಮರಗಳು ಮನೆ ಮೇಲೆ ಬಂದು ಬಿದ್ದಿವೆ. ಸ್ವಲ್ಪ-ಸ್ವಲ್ಪ ಜಾರುತ್ತಾ ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿದಿದೆ. ಗುಡ್ಡ ಕುಸಿಯುವುದನ್ನ ಕಣ್ಣಾರೆ ಕಂಡ ಮನೆಯವರು ಹೆದರಿ ಎಲ್ಲರೂ ಮನೆಯಿಂದ ಹೊರಬಂದಿದ್ದಾರೆ. ಸ್ಥಳಿಯರು ಬಂದು ಮನೆ ಮುಂದೆ ಬಿದ್ದಿದ್ದ ಮರಗಳನ್ನ ಕಡಿದು ಹಾಕಿದ್ದಾರೆ. ಆದರೆ, ಗುಡ್ಡ ಕುಸಿತ ನಿರಂತರವಾಗಿದ್ದು ಸ್ಥಳಿಯರು ಬೆಚ್ಚಿ ಬಿದ್ದಿದ್ದಾರೆ. ಕಳೆದ ಹತ್ತು ದಿನಗಳ ಕಾಲ ಬಿಡುವು ಕೊಟ್ಟಿದ್ದ ಮಳೆ, ಮತ್ತೆ ಆರ್ಭಟಿಸುತ್ತಿರುವುದರಿಂದ ಕಾಫಿ ನಾಡಿಗರು ಆತಂಕಕ್ಕೆ ಒಳಗಾಗಿದ್ದಾರೆ. ಜುಲೈ 2ನೇ ವಾರದ ದಾಖಲೆ ಮಳೆಗೆ ಅಡಿಕೆ-ಮೆಣಸು-ಕಾಫಿ ಕೊಚ್ಚಿ ಹೋಗಿತ್ತು. ಈಗ ಮತ್ತೆ ಮಳೆಯ ಅಬ್ಬರ ಕಂಡು ಮಲೆನಾಡಿಗರು ಮಳೆರಾಯನಿಗೆ ಇಡಿಶಾಪ ಹಾಕುತ್ತಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g