ಗಾಂಧಿ ಪ್ರತಿಮೆ ಬಳಿ ದೇವೇಗೌಡರು ಉಪವಾಸ ಕೂತಿದ್ದಕ್ಕೆ ಸಿದ್ದರಾಮಯ್ಯ ಸರ್ಕಾರಕ್ಕೆ ಜೀವದಾನವಾಯ್ತು : ವೈ.ಎಸ್.ವಿ.ದತ್ತ
1 min read
ಚಿಕ್ಕಮಗಳೂರು.: ಕಾವೇರಿ ಸಮಸ್ಯೆ ಕುತ್ತಿಗೆಗೆ ಬಂದಿತ್ತು. ಸುಪ್ರೀಂ ಕೋರ್ಟ್ ನಾಳೆ ಬೆಳಗ್ಗೆ ಕರ್ನಾಟಕ ಸರ್ಕಾರವನ್ನ ಡಿಸ್ಮಿಸ್ ಮಾಡುತ್ತೆ ಎಂಬ ಮಾತುಗಳು ಕೇಳಿಬಂದಿದ್ದವು. ಕೇಂದ್ರ ಸರ್ಕಾರ ಕೈಕಟ್ಟಿಕೊಂಡು ಮೂಕಪ್ರೇಕ್ಷಕವಾಗಿತ್ತು. ಅಂದು ಮಾಜಿ ಪ್ರಧಾನಿ ದೇವೇಗೌಡರು ವಿಧಾನಸೌಧದ ಬಳಿ ಆಮರಣಾಂತ ಉಪವಾಸ ಕೂತಿದ್ದಕ್ಕೆ ನಾಲ್ಕೇ ಗಂಟೆಗೆ ಸಮಸ್ಯೆಗೊಂದು ಪರಿಹಾರ ಸಿಕ್ಕಿತ್ತು, ಸಿದ್ದರಾಮಯ್ಯ ಸರ್ಕಾರಕ್ಕೆ ಜೀವದಾನವಾಗಿತ್ತು ಎಂದು ಜೆಡಿಎಸ್ ಮುಖಂಡ, ಜಿಲ್ಲೆಯ ಕಡೂರಿನ ಮಾಜಿ ಶಾಸಕ ವೈ.ಎಸ್.ವಿ ದತ್ತ ಹೇಳಿದ್ದಾರೆ. ಅವರಿಂದು ನಗರದ ಎ.ಐ.ಟಿ. ವೃತ್ತದ ಬಳಿಯ ಒಕ್ಕಲಿಗರ ಭವನದಲ್ಲಿ ನಡೆದ ಜನತಾ ಜಲಧಾರೆ ಹಾಗೂ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನ ಉದ್ದೇಶಿಸಿ ಮಾತನಾಡಿದರು. ಅಂದು ಈ ಸಮಸ್ಯೆ ತಲೆದೂರಿದಾಗ ಎಲ್ಲಾ ರಾಜಕೀಯ ಪಕ್ಷಗಳು ಇಂತಹಾ ಪರಿಸ್ಥಿತಿಯಲ್ಲಿ ಏನು ಮಾಡುವುದು ಎಂದು ಆತಂಕಕ್ಕೀಡಾಗಿದ್ದರು. ಕೇಂದ್ರದ ಆಡಳಿತ ಪಕ್ಷ ಬಿಜೆಪಿಯವರು ಒಂದು ರೀತಿ ಧಿಕ್ಕು ತೋಚದೆ, ನಮ್ಮದೇನು ಇಲ್ಲವೇನೋ ಎಂಬಂತೆ ಕೂತುಕೊಂಡರು. ಹೇಳಿ-ಕೇಳಿ ರಾಷ್ಟ್ರೀಯ ಪಕ್ಷ. ಅವರಿಗೇನು ಕರ್ನಾಟಕದ ಕಾವೇರಿ ಕಟ್ಟಿಕೊಂಡು
ಆಗ ರಾತ್ರೋರಾತ್ರಿ ದೇವೇಗೌಡರು ತಕ್ಷಣ ಒಂದು ತೀರ್ಮಾನ ಮಾಡಿದರು. ನನಗೆ ರಾತ್ರಿ 11 ಗಂಟೆಗೆ ಫೋನ್ ಮಾಡಿ, ದತ್ತ ನಾಳೆ ಬೆಳಗ್ಗೆ 11 ಗಂಟೆಗೆ ನಾನು ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಆಮರಣಾಂತ ಉಪವಾಸ ಕೂರುತ್ತೇನೆ ಎಲ್ಲಾ ರೆಡಿ ಮಾಡು ಎಂದರು. ಬೆಳಗ್ಗೆ ದೇವೇಗೌಡರು ಕಾಫಿಯನ್ನೂ ಕುಡಿಯದೆ ಸ್ನಾನ-ಪೂಜೆ ಮುಗಿಸಿಕೊಂಡು ಗಾಂಧಿ ಪ್ರತಿಮೆ ಬಳಿ ಆಮರಣಾಂತ ಉಪವಾಸ ಕೂತಾಗ ಸಿದ್ದರಾಮಯ್ಯ ಸರ್ಕಾರಕ್ಕೆ ಜೀವದಾನ ಆಯ್ತು ಎಂದರು. 11 ಗಂಟೆಗೆ ದೇವೇಗೌಡರು ಉಪವಾಸ ಕೂತರು, ನಾಲ್ಕು ಗಂಟೆ ವೇಳೆಗೆ ಪ್ರಧಾನಿ ಮೋದಿ ಫೋನ್ ಮಾಡಿ, ದೇವೇಗೌಡರೇ ನಿಮ್ಮ ಉಪವಾಸ ಕೊನೆ ಮಾಡಿ, ನಾನು ಈಗಲೇ ಸರ್ವೋಚ್ಛ ನ್ಯಾಯಾಲಯಕ್ಕೆ ನಮ್ಮ ಸಾಲಿಸಿಟರ್ ಜನರಲ್ ಕೈನಲ್ಲಿ ಅರ್ಜಿ ಹಾಕಿಸಿ ಈಗ ಬಂದಿರೋ ಕಂಟಕವನ್ನ ಪಾರು ಮಾಡಿ ಕರ್ನಾಟಕದ ಜನರಿಗೆ ನ್ಯಾಯ ಕೊಡಿಸುತ್ತೇನೆ ಎಂದು ತೀರ್ಮಾನಿಸಿದರು. ದೇವೇಗೌಡರ ಇಂತಹಾ ಹೋರಾಟದ ಬದುಕಿನ ಕಥೆಗಳು ನೂರಾರು ಎಂದರು. ನೀರಾವರಿ ಮತ್ತು ಕೃಷಿ ಒಂದಕ್ಕೊಂದು ಪೂರಕವಾಗಿರುವಂತದ್ದು. ಹಾಗಾಗಿ, ರೈತರ ಬದುಕು ಹಸನಾಗಬೇಕಾದರೆ ನಮ್ಮ ನೀರಾವರಿ ವ್ಯವಸ್ಥೆ ಎಷ್ಟು ಅಚ್ಚುಕಟ್ಟಾಗಿ, ಎಷ್ಟು ವ್ಯವಸ್ಥಿತವಾಗಿ ರೈತರ ಮನೆಬಾಗಿಲಿಗೆ ಹಾಗೂ ಹೊಲಗಳಿಗೆ ನೀರು ಮುಟ್ಟಬೇಕು ಎಂಬ ಪ್ರಯತ್ನ ನಡೆದಿದೆ. ಆದರೆ, ಉತ್ಪ್ರೇಕ್ಷೆಯಲ್ಲ. ಅತಿಶಯೋಕ್ತಿಯೂ ಅಲ್ಲ. ದೇವೇಗೌಡರನ್ನ ಕೂರಿಸಿಕೊಂಡು ಹೇಳುತ್ತೇವೆ. ಎಲ್ಲಾ ರಾಜಕೀಯ ಪಕ್ಷದವರು ಒಪ್ಪಲೇಬೇಕಾದ ಸಂಗತಿ ಅಂದರೆ, ರಾಜಕೀಯ ಪಕ್ಷಗಳ ಹೊರತುಪಡಿಸಿ ಜಾತ್ಯಾತೀತವಾಗಿ, ಪಕ್ಷತೀತವಾಗಿ ನಾವೆಲ್ಲಾ ಒಪ್ಪಬೇಕಾದ ಸತ್ಯ ಅಂದರೆ ಕರ್ನಾಟಕ ರಾಜ್ಯದಲ್ಲಿ ನೀರಾವರಿಯ ಬಗ್ಗೆ ನಿಜವಾಗಲು ಮಾತನಾಡುವ ನೈತಿಕ ಹಕ್ಕಿರುವ ಏಕೈಕ ವ್ಯಕ್ತಿ ಅಂದೆ ಅದು ದೇವೇಗೌಡರಿಗೆ ಮಾತ್ರ ಎಂದರು. ಅದರಿಂದ ಜನತಾ ಜಲಧಾರೆ ಅಥವ ಬೇರ್ಯಾವುದೇ ಆಗಿರಬಹುದು ಏನೇ ಇದ್ದರೂ ನೀರಾವರಿ ವಿಷಯದಲ್ಲಿ ದೇವೇಗೌಡರು ಮಾತನಾಡಿದರೆ ಮಾತ್ರ ಅದಕ್ಕೊಂದು ತೂಕ-ಘನತೆ-ಸಮಸ್ಯೆಗೊಂದು ಪರಿಹಾರ ಎಂದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g