ಕೆರೆಯ ಒಡಲು ಸೇರುತ್ತಿದೆ ಕೈಗಾರಿಕಾ ಪ್ರದೇಶದ ರಸಾಯನಿಕಯುಕ್ತ ವಿಷನೀರು
1 min read
ಚಿಕ್ಕಮಗಳೂರು: ನಗರಕ್ಕೆ ತುಸು ದೂರದಲ್ಲಿರುವ ಗೌಡನಹಳ್ಳಿ ಗ್ರಾಮದ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳು ಹೊರ ಹಾಕುತ್ತಿರುವ ರಾಸಾಯನಿಕ ಮಿಶ್ರಿತ ತ್ಯಾಜ್ಯ ಕಾಲುವೆ, ಕೆರೆ ನೀರು ಸೇರುತ್ತಿದ್ದು, ಕಲುಷಿತಗೊಂಡಿರುವ ನೀರು ಬಳಸುತ್ತಿರುವ ರೈತರು ಅನೇಕ ಆರೋಗ್ಯಕ್ಕೆ ಸಂಬಂಧಿಸಿದ ಅಡ್ಡ ಪರಿಣಾಮಗಳನ್ನು ಎದುರಿಸುತ್ತಿದ್ದು, ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೈಗಾರಿಕಾ ಪ್ರದೇಶಾಭಿವೃದ್ಧಿ ಪ್ರದೇಶದಲ್ಲಿರುವ ಲೈಫ್ ಲೈನ್ ಫೀಡ್ಸ್ ಕಂಪನಿ ತ್ಯಾಜ್ಯವನ್ನು ಶುದ್ಧೀಕರಿಸಿ ಮರು ಬಳಕೆ ಮಾಡುತ್ತಿರುವುದನ್ನು ಹೊರತುಪಿಡಿಸಿದರೆ ಉಳಿದ ಕಂಪನಿಗಳು ತ್ಯಾಜ್ಯ ಶುದ್ಧೀಕರಿಸುವ ಘಟಕವನ್ನು ಸ್ಥಾಪಿಸದ ಪರಿಣಾಮ ರಾಸಾಯನಿಕ ಮಿಶ್ರಿತ ತ್ಯಾಜ್ಯ ನೇರವಾಗಿ ಕೆರೆಗಳನ್ನು ಸೇರುತ್ತಿದ್ದು ಇದರಿಂದ ಹಲವು ಸಮಸ್ಯೆಗಳು ಉದ್ಭವವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
* ಕಾರ್ಖಾನೆಯ ತ್ಯಾಜ್ಯ ನೀರಿನಲ್ಲಿ ಬೆಳೆ
ಕೈಗಾರಿಕಾ ಪ್ರದೇಶದಿಂದ ಹೊರ ಬರುವ ತ್ಯಾಜ್ಯ ರಾಜ ಕಾಲುವೆಯನ್ನು ಸೇರುತ್ತಿದೆ. ಆ ಕಾಲುವೆಯ ಇಕ್ಕೆಲಗಳಲ್ಲಿರುವ ನೂರಾರು ಎಕರೆ ಕೃಷಿ ಜಮೀನಿಗೆ ರೈತರು ಕಲುಷಿತ ನೀರನ್ನೇ ಬಳಸುತ್ತಿದ್ದಾರೆ. ಇದರಿಂದ ಈ ಭಾಗದಲ್ಲಿ ಬೆಳೆ ಹಾನಿ ಜೊತೆಗೆ ಅದೇ ನೀರಲ್ಲಿ ಕೆಲಸ ಮಾಡುವ ರೈತರಿಗೆ ಚರ್ಮ ರೋಗ ಸೇರಿದಂತೆ ಕಾಲು ಊದಿಕೊಳ್ಳುತ್ತಿದೆ ಎಂದು ಸ್ಥಳೀಯರು ಅರೋಪಿಸಿದ್ದಾರೆ.
* ಕರೆಗೆ ಸೇರುತ್ತಿರುವ ಕಲುಷಿತ ನೀರು
ಕಾರ್ಖಾನೆಗಳಿಂದ ಹರಿದು ಬರುವ ತ್ಯಾಜ್ಯಯುಕ್ತ ನೀರು ಕಾಲುವೆಯ ಮೂಲಕ ಗೌಡಗೆರೆಯನ್ನು ಸೇರುತ್ತಿದೆ. ಈ ಕೆರೆಯ ನೀರನ್ನು ದನಕರುಗಳು ಕುಡಿಯುವುದರ ಜೊತೆಗೆ ಜನರು ಬಟ್ಟೆ ತೊಳೆಯಲು ಮತ್ತು ಕೃಷಿ ಜಮೀನಿಗೆ ಬಳಸುತ್ತಿದ್ದಾರೆ. ಕಲುಷಿತ ನೀರು ಕೆರೆ ಸೇರಿದ್ದರ ಪರಿಣಾಮ ಮೀನುಗಳು ಪೂರ್ಣ ಸತ್ತಿದ್ದು, ಕೆರೆ ಗುತ್ತಿಗೆ ಪಡೆದವರು ಅಪಾರ ಹಾನಿ ಅನುಭವಿಸಿದ್ದಾರೆ
ಗೌಡಗೆರೆಯ ಮೂಲಕ ಹಾದು ಹೋಗಿರುವ ಕಾಲುವೆ ಮೂಲಕ ಕಲುಷಿತ ನೀರು ಅಂಬಳೆ ಮತ್ತು ಕೋಡಿಹಳ್ಳಿ ಜನರ ಜೀವನಾಡಿಯಾಗಿರುವ ದೊಡ್ಡ ಕೆರೆಯನ್ನು ಸೇರುತ್ತಿದೆ. ಕೈಗಾರಿಕೆ ಪ್ರದೆಶದಿಂದ ಕಾಲುವೆ ಸೇರುತ್ತಿರುವ ರಾಸಾಯನಿಕ ಮಿಶ್ರಿತ ವಿಷಯುಕ್ತ ನೀರು ಕುಡಿದು ಗೌಡನಹಳ್ಳಿಯ ಚಂದ್ರಗೌಡ ಅವರಿಗೆ ಸೇರಿದ್ದ ಸಿಂದಿ ಹೋರಿ, ಅಂಬಳೆಯ ಪುಟ್ಟೇಗೌಡ ಅವರಿಗೆ ಸೇರಿದ್ದ ಎತ್ತು ಸೇರಿದಂತೆ ಅನೇಕ ದನಕರುಗಳು ಕೆಲ ದಿನಗಳ ಹಿಂದಷ್ಟೆ ಸಾವು ಕಂಡಿವೆ. ಕಾಲುವೆಯ ನೀರು ಬಳಸುತ್ತಿದ್ದ ಅಂಬಳೆಯ ಶೇಖರ್ ಎಂಬುವವರು ನೀರಿನಲ್ಲಿ ಇಳಿದು ಕೆಲಸ ಮಾಡುತ್ತಿದ್ದ ಪರಿಣಾಮ ಅವರ ಕಾಲುಗಳು ಊದಿಕೊಂಡಿವೆ.
* ಅಧಿಕಾರಿಗಳಿಗೆ ದೂರು ನೀಡಿದ್ರು ನೋ ಯ್ಯೂಸ್..!
ಈ ಬಗ್ಗೆ ಗೌಡನಹಳ್ಳಿ, ಅಂಬಳೆ ಗ್ರಾಮಸ್ಥರು ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಜಿಲ್ಲಾಧಿಕಾರಿಗಳು ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಗೌಡನಹಳ್ಳಿ, ಅಂಬಳೆ, ಕೋಡಿಹಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೈಗಾರಿಕಾ ಪ್ರದೇಶಗಳಲ್ಲಿ ರಾಸಾಯನಿಕ ಮಿಶ್ರಿತ ತ್ಯಾಜ್ಯವನ್ನು ಹಿಂಗಿಸಲು ಅಥವಾ ಶುದ್ಧೀಕರಿಸಲು ಕೈಗಾರಿಕೆಗಳು ಕ್ರಮ ಜರುಗಿಸದ ಕಾರಣದಿಂದ ತುಂಬಾ ತೊಂದರೆಯಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದು ಸಾಕಾಗಿದೆ. ಅಧಿಕಾರಿಗಳು ನಿರ್ಲಕ್ಷ್ಯತನ ತೋರುತ್ತಿದ್ದಾರೆ.
-ದೊಡ್ಡೇಗೌಡ, ಅಂಬಳೆ ಗ್ರಾಮ ಪಂಚಾಯಿತಿ ಸದಸ್ಯ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g