ವಸ್ತ್ರಸಂಹಿತೆ ಪಾಲನೆ ಅಗತ್ಯ: ಕಟೀಲ್
1 min read
ಮೂಡಿಗೆರೆ: ಶಾಲೆ, ಕಾಲೇಜುಗಳಲ್ಲಿ ಶ್ರೀಮಂತ, ಬಡವ, ಜಾತಿ, ಬೇಧ, ಭಾವ ಯಾವುದೂ ಇರಬಾರದೆಂದು ಸಮವಸ್ತ್ರ ಮಾಡಲಾಗಿದೆ. ಅದನ್ನು ಪ್ರತಿ ವಿದ್ಯಾರ್ಥಿಗಳು ಪಾಲಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ಕಟೀಲ್ ಹೇಳಿದರು.
ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ವಿದ್ಯಾರ್ಥಿಗಳು ಹಿಜಾಬ್ ಮುಖ್ಯವೋ ಅಥವಾ ಶಿಕ್ಷಣ ಮುಖ್ಯವೋ ಎಂಬುದನ್ನು ಅವರೇ ಅರ್ಥ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಎಲ್ಲೆಡೆ ಹಿಜಾಬ್ ಸದ್ದು ನಡೆಯುತ್ತಿದೆ. ದೇಶದಲ್ಲಿ ಸಂವಿಧಾನ, ನಿಯಮ, ಕಾನೂನು ಇದೆ. ಅದನ್ನು ಪಾಲನೆ ಮಾಡುವುದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ. ಧರ್ಮ, ಸಂಸ್ಕøತಿ, ಪರಂಪರೆಯನ್ನು ಮನೆ, ಮಂದಿರದಲ್ಲಿ ಆಚರಿಸುವುದರಲ್ಲಿ ತಮ್ಮ ವಿರೋಧವಿಲ್ಲ. ಆದರೆ ಪವಿತ್ರವಾದ ಶಿಕ್ಷಣ ಕ್ಷೇತ್ರದಲ್ಲಿ ಇವುಗಳನ್ನೆಲ್ಲಾ ತರುವುದು ಸರಿಯಲ್ಲವೆಂದು ನುಡಿದರು.
ಶಿವಮೊಗ್ಗದಲ್ಲಿ ನಡೆದ ಹರ್ಷನ ಹತ್ಯೆ ಖಂಡನೀಯ. ಈಗಾಗಲೇ ಇಬ್ಬರು ಆರೋಪಿಯನ್ನು ಬಂಧಿಸಲಾಗಿದೆ. ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆಂಬ ಮಾಹಿತಿಯನ್ನು ಪೊಲೀಸ್ ಇಲಾಖೆಯಿಂದ ಪಡೆದುಕೊಳ್ಳಲಾಗಿದೆ. ಕೃತ್ಯದ ಹಿಂದೆ ರಾಷ್ಟ್ರಮಟ್ಟದ ಕಾಣದ ಕೈಗಳ ಕೈವಾಡವಿರುವ ಶಂಕೆಯಿದೆ ಎಂದರು.
ಮುಂಬೈನಲ್ಲಿ ಇಂತಹ ಘಟನೆ ನಡೆದಾಗ ಹಂತಕರನ್ನು ಧಮನ ಮಾಡಲಾಗಿತ್ತು. ಅದೇ ರೀತಿಯಲ್ಲಿ ಆರೋಪಿಗಳ ಅಟ್ಟಹಾಸ ಬಗ್ಗುಬಡಿಯಲು ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ ತಮ್ಮ ಆಡಳಿತ ಪಕ್ಷದ ವೈಫಲ್ಯ ಹಾಗೂ ಸಾರ್ವಜನಿಕರ ಕುಂದು ಕೊರತೆ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡುವುದನ್ನು ಬಿಟ್ಟು, ಕೆಲಸಕ್ಕೆ ಬಾರದ ವಿಚಾರವನ್ನೇ ಚರ್ಚಿಸಿ ಕಾಲಹರಣ ಮಾಡುವ ಮೂಲಕ ರಾಜ್ಯದ ಜನತೆಗೆ ದ್ರೋಹ ಬಗೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ನವರಿಗೆ ನಾಯಕತ್ವದಲ್ಲೇ ಗೊಂದಲವಿದೆ. ಹಿಜಾಬ್ ಬಗ್ಗೆ ಚರ್ಚಿಸಲು ಹೋದರೆ ಕಾಂಗ್ರೆಸ್ ಸೋಲುತ್ತೆ. ಬಿಜೆಪಿ ಪಕ್ಷದ ಆಡಳಿತದಲ್ಲಿ ಪೈಫಲ್ಯತೆ ಸಿಗದೇ ಈಗ ಈಶ್ವರಪ್ಪ ಅವರ ವಿಚಾರ ತೆಗೆದುಕೊಂಡಿದ್ದಾರೆಂದು ಹೇಳಿದರು.
ಕಾಂಗ್ರೆಸ್ ಪಕ್ಷ ರಾಜ್ಯದ ಜನರ ಸಮಸ್ಯೆ ನಿವಾರಣೆ ಕುರಿತು ಚರ್ಚೆಬೇಕಾಗಿಲ್ಲ. ಬದಲಾಗಿ ಟೀಕೆಯಲ್ಲಿಯೇ ಸಮಯ ವ್ಯರ್ಥ ಮಾಡುತ್ತಿದ್ದಾರೆ. ಇದನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆಂದು ತಿಳಿಸಿದರು.
ವಿಸ್ತಾರಕ್ ಯೋಜನೆ:
ಪಕ್ಷದ ಸಂಘಟನೆ ಬಲಪಡಿಸಲು ವಿಸ್ತಾರಕ್ ಯೋಜನೆ ರಾಜ್ಯದಲ್ಲಿ ನಡೆಯುತ್ತಿದೆ. ಈಗಾಗಲೇ ಶೇ.50 ರಷ್ಟು ಕಾರ್ಯ ನಡೆದಿದೆ. ಒಂದು ಕಮಿಟಿಯಲ್ಲಿ ಕನಿಷ್ಟ 6 ಕಾರ್ಯಕರ್ತರಿರುತ್ತಾರೆ. ಅವರು 3 ದಿನ ತಮ್ಮ ಶಕ್ತಿ ಕೇಂದ್ರದಲ್ಲಿ ಎಲ್ಲಾ ಕೆಲಸ ಬಿಟ್ಟು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಉತ್ತಮ ಕಾರ್ಯಗಳನ್ನು ಮನೆ ಮನೆಗೆ ಮುಟ್ಟಿಸುವ ಕೆಲಸ ಮಾಡುತ್ತಾರೆಂದು ಹೇಳಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಎಸ್.ರಘು, ಪಟ್ಟಣಪಂಚಾಯಿತಿ ಅಧ್ಯಕ್ಷ ಧರ್ಮಪಾಲ್, ಉಪಾಧ್ಯಕ್ಷ ಕೆ.ಸುಧೀರ್, ಸದಸ್ಯರಾದ ಪಿ.ಜಿ.ಅನುಕುಮಾರ್, ಮನೋಜ್, ಆಶಾ ಮೋಹನ್, ಮಂಜು ಪಟೇಲ್, ಸಂದರ್ಶ, ಕಮಲಮ್ಮ, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎನ್.ಜಯಂತ್, ಮನೋಜ್ ಹಳೇಕೋಟೆ, ಸುರೇಂದ್ರ, ನಯನ ತಳವಾರ, ಉಮಾಶಂಕರ್ ಇದ್ದರು.
ಮೂಡಿಗೆರೆ ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರನ್ನು ಬಿಜೆಪಿ ಮುಖಂಡರು ಸನ್ಮಾನಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g