ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳಿಂದ ಆಹ್ವಾನ ಪತ್ರಿಕೆ ಬಿಡುಗಡೆ
1 min readಚಿಕ್ಕಮಗಳೂರು: ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಬಿಡುಗಡೆ ಮಾಡಿದರು. ಸಾಣೇಹಳ್ಳಿಯಲ್ಲಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸರ್ವಾಧ್ಯಕ್ಷತೆಯಲ್ಲಿ 2024 ಫೆಬ್ರವರಿ 2, 3 ರಂದು ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಚಿತ್ರದುರ್ಗ ಮತ್ತು ಚಿಕ್ಕಮಗಳೂರಿನ ಪ್ರಥಮ ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ 2023 ಡಿಸೆಂಬರ್ 30-31 ರಂದು ನಡೆಯಬೇಕಿತ್ತು. ಕಾರಣಾಂತರಗಳಿಂದ ಅದನ್ನು ಮುಂದೂಡಲಾಗಿತ್ತು. ಸಮಿತಿಯ ಪದಾಧಿಕಾರಿಗಳು ಚರ್ಚಿಸಿ 2024 ಫೆಬ್ರವರಿ 2 ರ ಶುಕ್ರವಾರ ಮತ್ತು 3 ಶನಿವಾರ ನಡೆಸಲು ನಿರ್ಣಯಿಸಲಾಗಿದೆ. 2 ರ ಬೆಳಗ್ಗೆ 9 ಗಂಟೆಯಿಂದ ಪ್ರಾರಂಭವಾಗುವ ಸಮ್ಮೇಳನವು 3 ರ ರಾತ್ರಿ 9 ರವರೆಗೆ ನಿರಂತರವಾಗಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಜರುಗಲಿವೆ.
ಸಾಣೇಹಳ್ಳಿ ಶ್ರೀಮಠದ ಪಟ್ಟಾಧ್ಯಕ್ಷರಾಗಿರುವ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವುದು ವಿಶೇಷವಾಗಿದೆ. ಪೂಜ್ಯರ ಸಾಹಿತ್ಯ ಸೇವೆ ಅಪಾರ. ಅವರಿಂದ 6 ನಾಟಕಗಳು, 2 ಸ್ವತಂತ್ರ ವಚನ ಸಂಗ್ರಹ, 52 ವೈಚಾರಿಕ ಪ್ರಬಂಧ ಕೃತಿಗಳು, 1ಪ್ರವಾಸ ಕಥನ, 65 ಸಂಪಾದನಾ ಕೃತಿಗಳು ಒಟ್ಟು 126 ಕೃತಿಗಳು ಕನ್ನಡ ಸಾಹಿತ್ಯ ಭಂಡಾರವನ್ನು ಸೇರಿ ಶ್ರೀಮಂತಗೊಳಿಸಿವೆ.
ಸಮ್ಮೇಳನದಲ್ಲಿ ಸಾಂಸ್ಕೃತಿಕ ರಾಜಕಾರಣ, ರಂಗಭೂಮಿ, ಮಠಗಳ ಕೊಡುಗೆ, ಉಭಯ ಜಿಲ್ಲೆಗಳ ಇತಿಹಾಸ-ಸಾಹಿತ್ಯ, ಕವಿಗೋಷ್ಠಿ ಹೀಗೆ ವಿಭಿನ್ನ ಗೋಷ್ಠಿಗಳು ನಡೆಯಲಿವೆ. ಸಾಂಸ್ಕೃತಿಕ ಸಂಜೆಯಲ್ಲಿ ಎರಡೂ ಜಿಲ್ಲೆಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾದರಗೊಳ್ಳಲಿವೆ. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಕೃತಿಗಳು ಬಿಡುಗಡೆಗೊಳ್ಳಲಿವೆ. ರಾಜ್ಯದ ಪ್ರಸಿದ್ಧ ವಿದ್ವಾಂಸರು, ಸಂಶೋಧಕರು, ಕವಿಗಳು ಭಾಗವಹಿಸುವರು. ಎರಡು ಜಿಲ್ಲೆಗಳ ಭಾರತದ ಸರಕಾರದ ಸಚಿವರುಗಳು, ರಾಜ್ಯದ ಸಚಿವರುಗಳು, ವಿಧಾಸಭಾ, ವಿಧಾನ ಪರಿಷತ್ ಸದಸ್ಯರುಗಳು ಹಾಗೂ ಅಧಿಕಾರಿ ವರ್ಗದವರು ಭಾಗವಹಿಸುವರು. ಸಾಣೇಹಳ್ಳಿಯ ಗ್ರೀಕ್ ಮಾದರಿಯ ಶಿವಕುಮಾರ ಬಯಲು ರಂಗಮಂದಿರ ಮತ್ತು ಶಾಮನೂರು ಶಿವಶಂಕರಪ್ಪ ಒಳಾಂಗಣ ರಂಗಮಂದಿರದಲ್ಲಿ ಎರಡು ದಿನದ ಸಮ್ಮೇಳನದ ಕಾರ್ಯಕ್ರಮಗಳು ಜರುಗಲಿವೆ.
ಅದಕ್ಕೆ ಬೇಕಾದ ಎಲ್ಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಸಮ್ಮೇಳನದಲ್ಲಿ ಭಾಗವಹಿಸುವವರು ಮೊದಲೇ ರಿಜಿಸ್ಟ್ರ್ರೇಶನ್ ಮಾಡಿಸಲು ಅವಕಾಶವಿದೆ. ಅಂಥವರು ಐ ಜಿ ಚಂದ್ರಶೇಖರಯ್ಯ (9481329313) ಅಥವಾ ಆಯಾ ತಾಲ್ಲೂಕಿನ ಕಸಾಪ ಅಧ್ಯಕ್ಷರ ಮೂಲಕವೂ ರಿಜಿಸ್ಟ್ರೇಶನ್ ಮಾಡಿಸಬಹುದು. ಪ್ರತಿನಿಧಿ ಶುಲ್ಕ 200 ರೂ ಆಗಿರುತ್ತದೆ. ಸಮ್ಮೇಳನದಲ್ಲಿ ಪುಸ್ತಕ ಮಾರಾಟ ಮಾಡುವವರಿಗೆ ಮಳಿಗೆಗಳು ಲಭ್ಯವಿರುತ್ತವೆ. ಅವಶ್ಯಕವಿರುವವರು ಮುಂಚಿತವಾಗಿ ಮೇಲಿನ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬೇಕು ಎಂದು ಚಿಕ್ಕಮಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದರು.
ಅಂತರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಎ. ಸಿ. ಚಂದ್ರಪ್ಪ ಕಾರ್ಯದರ್ಶಿಗಳಾದ ಐ ಜಿ. ಚಂದ್ರಶೇಖರಯ್ಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಸಂಚಾಲಕರಾದ ಎಸ್ ಪರಮೇಶ್ ಚಿಕ್ಕನಲ್ಲೂರು, ಸಮ್ಮೇಳನದ ಸಂಚಾಲಕರಾದ ಮರುಳ ಸಿದ್ದಯ್ಯ ಹಾಗೂ ಶಾಂತಕುಮಾರ್ ಗುರುಮೂರ್ತಿ ಅಜ್ಜಂಪುರ ತಾಲ್ಲೂಕು ಅಧ್ಯಕ್ಷರಾದ ಎಚ್.ಆರ್. ಚಂದ್ರಪ್ಪ, ಹಾಗೂ ಸಾಣೆಹಳ್ಳಿಯ ಸಮ್ಮೇಳನದ ವಿವಿಧ ಸಮಿತಿಗಳ ಅಧ್ಯಕ್ಷರು ಸದಸ್ಯರು ಉಪಸ್ಥಿತರಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g