ಪ್ರತ್ಯೇಕ ಹಾಲು ಒಕ್ಕೂಟಕ್ಕೆ ಆಗ್ರಹಿಸಿ ತರೀಕೆರೆಯಿಂದ ಹಾಸನಕ್ಕೆ ಪಾದಯಾತ್ರೆ_ಸಿ.ಟಿ ರವಿ
1 min read
ಚಿಕ್ಕಮಗಳೂರು: ಮುಂದಿನ ಮಾರ್ಚ್ ಒಳಗಾಗಿ ಚಿಕ್ಕಮಗಳೂರಿಗೆ ಪ್ರತ್ಯೇಕ ಹಾಲು ಒಕ್ಕೂಟವನ್ನು ಬಿಟ್ಟುಕೊಡುವ ನಿರ್ಣಯವನ್ನು ಹಾಸನ ಹಾಲು ಒಕ್ಕೂಟದವರು ಮಾಡದಿದ್ದಲ್ಲಿ ತರೀಕೆರೆಯಿಂದ ಹಾಸನಕ್ಕೆ ಪಾದಯಾತ್ರೆ ಹಮ್ಮಿಕೊಂಡು ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.
ತಾಲೂಕಿನ ಕೆ.ಬಿ.ಹಾಳ್ ಗ್ರಾಮದಲ್ಲಿ ಈ ಕುರಿತು ಮಾತನಾಡಿದ ಶಾಸಕ ಸಿ.ಟಿ ರವಿ, ಚಿಕ್ಕಮಗಳೂರಿನಲ್ಲಿ ಹಾಲು ಒಕ್ಕೂಟ ಸ್ಥಾಪಿಸುವ ಸಂಬಂಧ ಹಾಸನ ಹಾಲು ಒಕ್ಕೂಟ ಒಂದು ನಿರ್ಣಯ ಮಾಡಬೇಕಿದೆ. ಈ ಬಗ್ಗೆ ಹತ್ತಾರು ಬಾರಿ ಒಕ್ಕೂಟದ ಅಧ್ಯಕ್ಷ ಎಚ್.ಡಿ.ರೇವಣ್ಣ ಅವರಲ್ಲಿ ಮನವಿ ಮಾಡಿದ್ದೇವೆ. ಅವರು ಒಪ್ಪಿಗೆ ನೀಡಿ ಸುಮ್ಮನಾಗಿದ್ದಾರೆ ಈಗ ಹೋರಾಟ ಮಾಡಿ ಅದನ್ನು ಮಾಡಿಸುತ್ತೇವೆ ಎಂದರು.
ಮಾರ್ಚ್ನಲ್ಲಿ ಮಂಡನೆಯಾಗುವ ಬಜೆಟ್ ಒಳಗಾಗಿ ಅವರು ನಿರ್ಣಯ ಮಾಡಿ ಚಿಕ್ಕಮಗಳೂರಿಗೆ ಬಿಟ್ಟುಕೊಡದಿದಲ್ಲಿ ತರೀಕೆರೆಯಿಂದ ನಾವು ಪಾದಯಾತ್ರೆ ಮಾಡಿ ಹಾಸನಕ್ಕೆ ಹೋಗಿ ನಿರ್ಣಯ ಮಾಡಿಕೊಡುವವರೆಗೆ ಹೋರಾಟವನ್ನು ಮುಂದುವರಿಸುತ್ತೇವೆ. ಕೆಬಿಹಾಳ್ ಗ್ರಾಮದಿಂದಲೇ ಹೋರಾಟಕ್ಕೆ ಕಾವು ಸಿಗಬೇಕು. ಮುಖ್ಯಮಂತ್ರಿಗಳಿಗೂ ಈ ವಿಚಾರವನ್ನೂ ಬಜೆಟ್ನಲ್ಲಿ ಘೋಷಣೆ ಮಾಡಬೇಕು ಎಂದು ಮನವಿ ಮಾಡಿದ್ದೇನೆ ಎಂದರು.
ಕೆ.ಬಿ.ಹಾಳ್ ಗ್ರಾಮಕ್ಕೆ ಸುವರ್ಣಗ್ರಾಮ, ಶಾಸಕರ ನಿಧಿ, ಕನಕಭವನ, ಮಡಿವಾಳ ಸಮಾಜದ ಸಮುದಾಯಭವನ, ಶಿವ, ಲಕ್ಷ್ಮಿ, ದುರ್ಗಾಂಭ ದೇವಸ್ಥಾನದ ವರೆಗೆ, ಬಸ್ ನಿಲ್ದಾಣ, ಆಟೋ ನಿಲ್ದಾಣ ಸೇರಿ 52 ಲಕ್ಷ ರೂ.ಗಳನ್ನು ಕೊಡಲಾಗಿದೆ. ಗ್ರಾಮವಿಕಾಸದಲ್ಲಿ 1 ಕೋಟಿ ರೂ. ಮಂಜೂರು ಮಾಡಿದ್ದೇವೆ ಎಂದರು.
ಹತ್ತಾರು ಬಾರಿ ದೆಹಲಿಗೆ ಹೋಗಿ ಪಟ್ಟು ಹಿಡಿದು 630 ಕೊಟಿ ರೂ. ನಲ್ಲಿ ಚಿಕ್ಕಮಗಳೂರು ಮೆಡಿಕಲ್ ಕಾಲೇಜು, ಸೂಪರ್ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಿಸಿ ಕಾಮಗಾರಿ ನಡೆಯುತ್ತಿದೆ. 1281 ಕೋಟಿ ರೂ.ನಲ್ಲಿ ಚಿಕ್ಕಮಗಳೂರು, ಕಡೂರು, ತರೀಕೆರೆ ತಾಲ್ಲೂಕಿನ ಎಲ್ಲಾ ಕೆರಗಳನ್ನು ತುಂಬಿಸುವ ಯೋಜನೆಯ ಕಾಮಗಾರಿಗೆ ಚಾಲನೆ ಕೊಡಿಸಿದ್ದೇವೆ. ಕರಗಡ ಯೋಜನೆಯಿಂದ 4 ಕೆರೆ ತುಂಬಿದೆ. 5 ನೇ ಕೆರೆಗೆ ನೀರು ಬರುತ್ತಿದೆ. ರಣಘಟ್ಟ ಯೋಜನೆಯಲ್ಲಿ ಹಳೇಬೀಡು ಮತ್ತು ಬೆಳವಾಡಿ ಕೆರೆ ಸೇರಿಸಿ ಅನುದಾನ ಮಂಜೂರು ಮಾಡಿಸಿ ಕೆಲಸ ಆರಂಭಿಸಲಾಗಿದೆ. ಮುಂದಿನ 15 ದಿನಗಳಲ್ಲಿ ಮನೆ ಮನೆಗೆ ನೀರುಕೊಡುವ 400 ಕೋಟಿ ರೂ.ನ ಜಲಜೀವನ್ ಯೋಜನೆಗೆ ಅನುಮೋದನೆ ಸಿಗಲಿದೆ ಎಂದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g