ಭಕ್ತರ ಮನೆ ಪಾದ ಕಾಣಿಕೆಯಲ್ಲಿ ಇಂಜಿನಿಯರ್ ಕಾಲೇಜು ಸ್ಥಾಪನೆ : ಗುಣನಾಥ ಸ್ವಾಮೀಜಿ
1 min readಸುಶಿಕ್ಷಿತ ಸಮಾಜ ನಿರ್ಮಾಣವೂ ಮಠಾಧೀಶರ ಕರ್ತವ್ಯ ಎಂದು ನೂರಾರು ಶಿಕ್ಷಣ ಸಂಸ್ಥೆಗಳನ್ನು, ಹತ್ತಾರು ಆಸ್ಪತ್ರೆಗಳನ್ನು ತೆರೆದವರು, ಜನ ಸಾಮಾನ್ಯರು ಸಂಸ್ಕೃತ ಕಲಿಯಬೇಕು ಆ ಮೂಲಕ ಹಿಂದೂ ಧರ್ಮದ ಸಾರವನ್ನು ಶಾಲಾ ಕಾಲೇಜುಗಳನ್ನು ತೆರೆದ ಪೂಜ್ಯ ಬಾಲ ಗಂಗಾಧರನಾಥ ಮಹಾಸ್ವಾಮಿಗಳಾಗಿದ್ದು, ಅವರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವದ ಕಾರ್ಯಕ್ರಮದಲ್ಲಿ ನಾವೆಲ್ಲರೂ ಸಂಭ್ರಮದಿಂದ ಪಾಲ್ಗೊಳ್ಳಬೇಕು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.
ಜಯಪುರದಲ್ಲಿ ನಡೆದ ಸುವರ್ಣ ಸಂಭ್ರಮ ಕಾರ್ಯಕ್ರಮದ ಮೇಗುಂದಾ ಹೋಬಳಿ ಸಭೆಯಲ್ಲಿ ಮಾತನಾಡಿ, 2000 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ 71 ನೇ ಜಗದ್ಗುರುಗಳು ಶ್ರೀ ಬಾಲಗಂಗಾಧರನಾಥರು, ದಿನ ಪತ್ರಿಕೆ ಜಾಹಿರಾತು ನೋಡಿ, ಮಹಾ ಸಂಸ್ಥಾನದ ಪೀಠಾಧೀಶರಾದ ಪೂಜ್ಯರು, ಜಾತಿಮತಗಳ ಭೇದವೆಣಿಸದೆ ಸಮಾಜದ ಉದ್ದಾರಕ್ಕಾಗಿ ರಾಜ್ಯದಾದ್ಯಂತ 507 ಸಂಸ್ಥೆಗಳನ್ನು ಆರಂಭಿಸಿದರು.ಅಂಧ ಮಕ್ಕಳಶಾಲೆ, ಮೆಡಿಕಲ್, ಸಂಸ್ಕೃತ, ಪದವಿ, ಬಿಎಡ್, ಇಂಜಿನಿಯರಿಂಗ್ ಸೇರಿದಂತೆ ಇತರೆ ಕಾಲೇಜುಗಳನ್ನು ತೆರೆದಿದ್ದು, ಇಂದು ಒಂದೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಸಂಸ್ಥೆಗಳಲ್ಲಿ ಕಲಿಯುತ್ತಿದ್ದಾರೆ.
ಪೋಷಕರಿಂದ ನಿರ್ಲಕ್ಷಿತರಾದ ಅಂಧ ಮಕ್ಕಳನ್ನು ಕಂಡು ಅವರಿಗಾಗಿ ರಾಮನಗರದಲ್ಲಿ ಅಂಧರ ಶಾಲೆ ಆರಂಭಿಸಿದ ಮಹಾನ್ ಸಂತರು ಪೂಜ್ಯರು. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಭಕ್ತರ ಮನೆ ಮನೆಗಳಲ್ಲಿ ಪಾದ ಕಾಣಿಕೆಯ ಮೂಲಕ ಸಂಗ್ರಹಿಸಿದ ಒಂದು ಲಕ್ಷದ ಮೂವತ್ತು ಸಾವಿರ ಮೂಲ ಹಣದಲ್ಲಿ ಚಿಕ್ಕಮಗಳೂರಿನಲ್ಲಿ ಎಂಜಿನಿಯರಿಂಗ್ ಕಾಲೇಜು ಆರಂಭಿಸಿದರು. ಜಯಪುರದ ಶಾಲೆಯ ದುಸ್ಥಿತಿ ಕಂಡ ಸ್ವಾಮೀಜಿ ಸುಸಜ್ಜಿತ ಶಾಲೆ ನಿರ್ಮಿಸಿ ಹೋಬಳಿಯ ನೂರಾರು ಮಕ್ಕಳ ಶಿಕ್ಷಣಕ್ಕೆ ಕಾರಣವಾಗಿದ್ದಾರೆ. ಇಂತಹ ಪೂಜ್ಯರ ಪಟ್ಟಾಭಿಷೇಕದ ಸುವರ್ಣ ಮಹೋತ್ಸವದ ಕಾರ್ಯಕ್ರಮ ಶೃಂಗೇರಿಯ ಬಿಜಿಎಸ್ ಆವರಣದಲ್ಲಿ ಡಿ. 27ರಂದು ನಡೆಯಲಿದ್ದು, ಪೂಜ್ಯ ನಿರ್ಮಲಾನಂದನಾಥ ಮಹಾ ಸ್ವಾಮಿಗಳು ಭಾಗವಹಿಸಲಿದ್ದಾರೆ. ನಿಮ್ಮೂರಿನವರಾದ ಜಾಲ್ಮರ ಸುಬ್ರಾವ್ ಪೂಜ್ಯ ಶ್ರೀಗಳ ಜೀವನದ ಕುರಿತು ಮಾಡಿರುವ ಹರಿಕಥೆಯ ಧ್ವನಿ ಸುರುಳಿಯನ್ನು ಬಿಡುಗಡೆ ಮಾಡಲಾಗುತ್ತಿದ್ದು, ಭಕ್ತರು ಶ್ರೀ ಮಠದ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು ಎಂದರು.
ಬಿಜಿಎಸ್ ಗೌರವ ಕಾರ್ಯದರ್ಶಿ ಎ.ಸಿ. ವಜ್ರಪ್ಪ, ಕಾಂಗ್ರೆಸ್ ಮುಖಂಡ ಹೆಚ್.ಎಂ. ಸತೀಶ್, ಕಾಫಿ ಬೆಳೆಗಾರ ಕೌಳಿ ಶ್ರೀನಿವಾಸ ಗೌಡ, ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯ ದರ್ಶಿ ಕಿಬ್ಬಿ ಪ್ರಸನ್ನಕುಮಾರ್, ಬಿಜಿಎಸ್ ಪ್ರಾಂಶು ಪಾಲರುಗಳಾದ ಡಾ. ಮುಸ್ತಾಕ್ ಅಹಮದ್, ಮುರುಳಿಧರ, ಉಪನ್ಯಾಸಕಿ ಗಾಯತ್ರಿದೇವಿ ಇದ್ದರು
ಭೂಮಿ, ನೀರು, ಗಾಳಿ, ಆಕಾಶ ಹಾಗೂ ಅಗ್ನಿ ಒಳಗೊಂಡಿರುವ ಪಂಚ ಭೂತಗಳು ಕಲುಷಿತ ವಾದರೆ ಮಾನವ ಜನಾಂಗಕ್ಕೆ ಉಳಿವಿಲ್ಲ ಎನ್ನುವುದನ್ನು ಅರಿತು, 5 ಕೋಟಿ ವೃಕ್ಷನೆಡುವ ಅಭಿಯಾನವನ್ನು ಶ್ರೀ ಬಾಲಗಂಗಾಧರನಾಥರು ಅಂದೇ ಆರಂಭಿಸಿದರು. ಎತ್ತಿನಗಾಡಿಯ ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆ ಹತ್ತಿರದಲ್ಲಿ ಇಲ್ಲ ಎಂಬ ಕಾರಣಕ್ಕೆ ಸಣ್ಣ ಹಳ್ಳಿಯಲ್ಲೇ ಆಸ್ಪತ್ರೆ ಆರಂಭಿಸಿ, ಮೆಡಿಕಲ್ ಕಾಲೇಜು ಪ್ರಾರಂಭಿಸಿ ಲಕ್ಷಾಂತರ ಜನರಿಗೆ ವೈದ್ಯಕೀಯ ಸೇವೆ ಸಿಗುವಂತೆ ಮಾಡಿದವರು ಪೂಜ್ಯರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g