ಸವಲತ್ತಿಗಾಗಿ ಕಿವುಡ-ಮೂಕರ ಪ್ರತಿಭಟನೆ
1 min readಚಿಕ್ಕಮಗಳೂರು: ಸರ್ಕಾರಿ ಸೌಲಭ್ಯ ಒದಗಿಸಿಕೊಡುವಂತೆ ಒತ್ತಾಯಿಸಿ ಕಿವುಡ ಮತ್ತು ಮೂಕರು ಬುಧವಾರ ನಗರದ ಆಜಾದ್ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಹಿರಿಯರ ಹೆಸರಿನಲ್ಲಿರುವ ಜಮೀನು, ನಿವೇಶನ ನಮ್ಮ ಹೆಸರಿಗೆ ಬರಬೇಕು. ಗ್ರಾಮದಲ್ಲಿ ನಿವೇಶನ ಹಂಚುವಾಗ ನಮಗೂ ಆದ್ಯತೆ ಕೊಡಬೇಕು. ಅಂಗವಿಕಲರಿಗೆ, ಬುದ್ದಿಮಾಂಧ್ಯರಿಗೆ ಪೆನ್ಶೆನ್ ಕೊಡುವಂತೆ ಕಿವುಡ ಮತ್ತು ಮೂಕರಿಗೂ ನೀಡುವುದು, ಜೀವನೋಪಾಯಕ್ಕೆ ಅಂಗಡಿ ತೆರೆಯಲು ಸಾಲಮಂಜೂರು ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಮೂಕರು ಹೆಚ್ಚು ವಿದ್ಯಾಭ್ಯಾಸ ಮಾಡಿದ್ದು, ಅವರಿಗೆ ಸರ್ಕಾರಿ ನೌಕರಿ ದೊರೆಕಿಲ್ಲ, ಅವರಿಗೂ ನೌಕರಿ ಸಿಗುವಂತೆ ನೋಡಿಕೊಳ್ಳಬೇಕು. ಈ ಹಿಂದೆ ಬೇಡಿಕೆ ಈಡೇರಿಸಲು ಒತ್ತಾಯಿಸಿ ಪಾದಯಾತ್ರೆ ನಡೆಸಿದ್ದು, ಸಮಸ್ಯೆಗೆ ಸರ್ಕಾರ ಸ್ಪಂದಿಸಿಲ್ಲ, ಹಲವು ಕೆಲಸ ಕಾರ್ಯಗಳಿಗೆ ವಿವಿಧ ಕಚೇರಿಗಳಿಗೆ ತೆರಳಿದರೆ ಸಂಹವನ ಕೊರತೆ ಉಂಟಾಗಿದ್ದು, ಸಮಸ್ಯೆ ಅರ್ಥ ಮಾಡಿಕೊಳ್ಳುತ್ತಿಲ್ಲವೆಂದು ಮನವಿಯಲ್ಲಿ ತಿಳಿಸಿದ್ದಾರೆ.
ವಿಕಲಚೇತನ ಇಲಾಖೆಯವರು ಸಭೆ, ಸಮಾರಂಭ ನಡೆಸುವಾಗ ಶ್ರವಣಮಾಂಧ್ಯ ಅಥವಾ ಕಿವುಡ ಮತ್ತು ಮೂಕರ ಸಂಘದ ಪದಾಧಿಕಾರಿಗಳನ್ನು ಆಹ್ವಾನಿಸದೆ ನಿರ್ಲಕ್ಷ್ಯ ತೋರಲಾಗುತ್ತಿದೆ. ವಿಕಲ ಚೇತನ ಸಬಲೀಕರಣ ಇಲಾಖೆಯಿಂದ ಸಹಾಯ, ಸಹಕಾರದ ಕೊರತೆ ಉಂಟಾಗುತ್ತಿದೆ ಎಂದು ಹೇಳಿದ್ದಾರೆ.
ಯುಡಿಐಡಿ ಕಾರ್ಡ್ ಮಾಡಿಸುವಾಗ ಶೇ.ಪ್ರಮಾಣ ಎಷ್ಟಿದೆ ಎಂದು ತಿಳಿದುಕೊಂಡು ಪ್ರಮಾಣೀಕರಿಸಬೇಕು. ಕಿವುಡ ಮತ್ತು ಮೂಕರ ಕಲ್ಯಾಣಾಭಿವೃದ್ಧಿಗೆ ಬಗ್ಗೆ ಅಧಿವೇಶನದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿಲ್ಲ, ವಿಕಲಚೇತನರ ವಿವಾಹ ಪ್ರೋತ್ಸಾಹಧನ ಯೋಜನೆಯಡಿ ನೀಡಲಾಗುತ್ತಿರುವ 50ಸಾವಿರ ಪ್ರೋತ್ಸಾಹಧನವನ್ನು ಕಿವುಡ ಮತ್ತು ಮೂಕರಿಗೂ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕಿವುಡರ ಶಾಲೆಗಳಲ್ಲಿ ಶಿಕ್ಷಕರಿಗೆ ಸನ್ನೆ ಭಾಷೆಯಲ್ಲಿ ಶಿಕ್ಷಣದ ತರಬೇತಿ ಕೊಡಬೇಕು. ಉದ್ಯೋಗದಲ್ಲಿ ಮೀಸಲು ನೀಡುವುದರೊಂದಿಗೆ ವಂಚನೆ ತಡೆಗಟ್ಟಿ ಶೇ.75ರಷ್ಟಿರುವ ಕಿವುಡುತನ ಹೊಂದಿದವರಿಗೆ ಮಾತ್ರ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ, ಕಿವುಡ ಮತ್ತು ಮೂಕರಿಗೆ ದೊರಕಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟು ಎಲ್ಲಾ ನಾಗರಿಕರಂತೆ ಜೀವನ ನಡೆಸಲು ಅವಕಾಶಮಾಡಿಕೊಡಬೇಕೆಂದು ಆಗ್ರಹಿಸಿದರು.
ಚಿಕ್ಕಮಗಳೂರು ಜಿಲ್ಲಾ ಕಿವುಡರ ಸಂಘದ ಉಪಗೌರವಾಧ್ಯಕ್ಷ ಎಚ್.ಎಸ್.ದೇವರಾಜ್, ಅಧ್ಯಕ್ಷ ಡಿ.ಎಂ.ಪ್ರದೀಪ್, ಪ್ರಧಾನಕಾರ್ಯದರ್ಶಿ ಜಿ.ಎಸ್.ಸ್ವಾಮಿ, ಖಜಾಂಚಿ ಎಚ್.ಎಸ್.ಸಂತೋಷ್, ಸದಸ್ಯರಾದ ಎಚ್.ಎಸ್.ವಿಶ್ವನಾಥ, ಎಂ.ಚಿನ್ನೇಜಿರಾವ್, ಟಿ.ಎಂ.ದಿಲೀಪ್, ಬಿ.ಓ.ನವೀನ್, ಕೆ.ಎಸ್.ಬಸವರಾಜ್ ಇದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g