ನಾನೇ ಬಿಜೆಪಿ ಕಟ್ಟಿದ್ದು ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಹಾಸ್ಪದ ಸಿ.ಎಚ್.ಲೋಕೇಶ್
1 min readಚಿಕ್ಕಮಗಳೂರು: ಸಿ.ಟಿ.ರವಿ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮಾತನಾಡಲು ವಿಷಯಗಳಿಲ್ಲದೆ ಜಾತಿ ಜಾತಿಗಳನ್ನು ಎತ್ತಿಕಟ್ಟಿ ಸಮಾಜದಲ್ಲಿ ಕೆಡುಕುಂಟು ಮಾಡುವ ದುರುದ್ದೇಶದಿಂದ ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ.ತಮ್ಮಯ್ಯ ಸ್ಪರ್ಧೆಗಿಳಿದಿರುವುದು ಅಸಹ್ಯಕರ ಎಂದು ಸಿಡಿಎ ಮಾಜಿ ಅಧ್ಯಕ್ಷ ಬಿಜೆಪಿ ಮುಖಂಡ ಸಿ.ಎಚ್.ಲೋಕೇಶ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ-ಲಿಂಗಾಯತ ಮುಖಂಡರು, ಮತದಾರರು ಬಿಜೆಪಿ ಜೊತೆಗಿದ್ದಾರೆ. ತಮ್ಮಯ್ಯ ಜಾತಿಯನ್ನು ಎತ್ತಿ ಕಟ್ಟಿ ಚುನಾವಣೆಯನ್ನು ಗೆಲ್ಲಬೇಕು ಎಂದುಕೊಂಡಿದ್ದರೆ ಕೂಡಲೇ ಅದನ್ನು ಬಿಡಬೇಕು. ಜಾತಿ ಸಂಘರ್ಷವನ್ನು ಈ ಕ್ಷೇತ್ರದಲ್ಲಿ ತಂದಿಡುವುದು ಬೇಡ. ಶಾಂತಿ ಸಹಬಾಳ್ವೆಯಿಂದ ಬದುಕುತ್ತಿದ್ದೇವೆ. ಅಭಿವೃದ್ಧಿ ವಿಷಯದ ಮೇಲೆ ರಾಜಕಾರಣ ಮಾಡಿ, ನೀವು ಗೆದ್ದರೆ ಏನು ಮಾಡುತ್ತೇವೆಂದು ಹೇಳಿಕೊಳ್ಳುವುದು ಬಿಟ್ಟು ಕೀಳು ಮಟ್ಟದ ರಾಜಕಾರಣ ಬಿಡಬೇಕು ಎಂದರು.ತಮ್ಮಯ್ಯ ಎಲ್ಲಾ ಕಡೆ ಪ್ರಚಾರದ ವೇಳೆ ಬಿಜೆಪಿಯನ್ನು ಕಟ್ಟಿದ್ದೇ ತಾವು ಎನ್ನುವ ರೀತಿ ಬಿಂಬಿಸುತ್ತಿದ್ದಾರೆ. ಜೆಡಿಎಸ್, ಕಾಂಗ್ರೆಸ್ ನಂತರ ಬಿಜೆಪಿ ಸೇರಿದರು. ಆದರೆ ಪಕ್ಷದ ಬಾವುಟ, ಬಂಟಿಂಗ್ ಕಟ್ಟಲಿಲ್ಲ. ಯಾವುದೇ ಹೋರಾಟದಲ್ಲಿ ಭಾಗಿಯಾಗಲಿಲ್ಲ. ನಮ್ಮಂತೆ ಜೈಲಿಗೆ ಹೋಗಲಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗ ಅವರು ಪಕ್ಷಕ್ಕೆ ಬಂದಿದ್ದರು. ಆದರೆ ಇಂದು ತಮ್ಮಯ್ಯ ನಾನೇ ಬಿಜೆಪಿ ಕಟ್ಟಿದ್ದು ಎಂದು ಹೇಳಿಕೊಳ್ಳುತ್ತಿರುವುದು ಹಾಸ್ಯಹಾಸ್ಪದ ಎಂದರು.
ನಗರಸಭೆ ಮಾಜಿ ಅಧ್ಯಕ್ಷರೂ, ವಿಧಾನ ಪರಿಷತ್ತಿನ ಹಾಲಿ ಸದಸ್ಯರಾಗಿರುವ ಎಸ್.ಎಲ್.ಬೋಜೇಗೌಡ ಅವರು ಜೆಡಿಎಸ್ ಕಾರ್ಯಕರ್ತರನ್ನು ಕೂರಿಸಿಕೊಂಡು ಕಾಂಗ್ರೆಸ್ಗೆ ಮತ ಹಾಕುವಂತೆ ಹೇಳುವುದು. ಅದರ ಜೊತೆಗೆ ಅವರಿಂದ ತರಾಟೆಗೆ ತೆಗೆಸಿಕೊಂಡಿದ್ದನ್ನು ಸಾಮಾಜಿಕ ಜಾಲ ತಾಣಗಳಲ್ಲಿ ನೋಡುತ್ತಿದ್ದೇವೆ. ಚುನಾವಣೆ ಸಮಯದಲ್ಲಿ ಸಿ.ಟಿ.ರವಿ ಅಭಿವೃದ್ಧಿ ಸಹಿಸದೆ ಅವರ ಪಕ್ಷದ ಅಭ್ಯರ್ಥಿ ಹಲವಾರು ವರ್ಷಗಳಿಂದ ಪಕ್ಷದಲ್ಲಿದ್ದು, ದೇವಾಂಗ ಸಮಾಜಕ್ಕೆ ಸೇರಿದ ಪ್ರಭಾವಿ ನಾಯಕ ನೀನೇ ಮುಂದಿನ ಅಭ್ಯರ್ಥಿ ಎಂದು ಆತನಿಂದ ಹಲವಾರು ಕೋಟಿ ರೂ. ಖರ್ಚು ಮಾಡಿಸಿ ಅವರನ್ನ ಚುನಾವಣೆಯಲ್ಲಿ ನಿವೃತ್ತಿಯನ್ನೂ ಮಾಡಿಸದೆ. ಅಭ್ಯರ್ಥಿ ಇರುವಾಗಲೇ ಕಾಂಗ್ರೆಸ್ಗೆ ಮತ ಕೇಳುತ್ತಿರುವುದು ಅವರ ಸ್ವಾರ್ಥ ರಾಜಕಾರಣವನ್ನು ಎತ್ತಿ ತೋರಿಸುತ್ತಿದೆ ಎಂದರು.
ಕಳೆದ ಬಾರಿ ಚುನಾವಣೆಯಲ್ಲಿ ಬಿ.ಎಚ್.ಹರೀಶ್ ರನ್ನು ಜೆಡಿಎಸ್ ಅಭ್ಯರ್ಥಿ ಮಾಡಿ ಅವರ ಆಸ್ತಿ ಮಾರಾಟ ಮಾಡಿಕೊಳ್ಳುವಂತಾಗಿತ್ತು. ಈ ಚುನಾವಣೆಯಲ್ಲೂ ಈ ರೀತಿ ಕುತಂತ್ರ ಮಾಡುತ್ತಿರುವುದು ಅವರ ರಾಜಕಾರಣಕ್ಕೆ ಹಿಡಿದ ಕೈಗನ್ನಡಿ ಎಂದರು.
ಮೂಡಿಗೆರೆಯಲ್ಲಿ ನಿಂಗಯ್ಯ ಅವರ ಬೆನ್ನಿಗೆ ಚೂರಿ ಹಾಕಿದರು, ಕಳೆದ ಬಾರಿ ಚುನಾವಣೆಯಲ್ಲಿ ಕಡೂರಿನಲ್ಲಿ ದತ್ತ ಅವರಿಗೆ ಅನ್ಯಾಯ ಮಾಡಿದರು. ನೇರಾ ನೇರ ತಮ್ಮ ಪಕ್ಷದ ಅಭ್ಯರ್ಥಿ ವಿರುದ್ಧ ಪ್ರಚಾರ ಮಾಡಿದರು. ಚಿಕ್ಕಮಗಳೂರು ಜಿಲ್ಲೆಯಲ್ಲಿ ಜೆಡಿಎಸ್ ವಿಸರ್ಜನೆ ಮಾಡಿ ಕಾಂಗ್ರೆಸ್ ಜೊತೆ ವಿಲೀನಗೊಳಿಸಿಬಿಡಿ, ಪಾಪದ ಅಭ್ಯರ್ಥಿಗಳು ಮನೆ, ಮಠ ಮಾರಿಕೊಳ್ಳುವುದು ತಪ್ಪುತ್ತದೆ ಎಂದರು.ಸಿ.ಟಿ.ರವಿ ಅವರನ್ನು ಜನರು ಮುಂದಿನ ಮುಖ್ಯಮಂತ್ರಿ, ಅವರ ಗೆಲುವು ಖಚಿತ ಎಂದು ಜನರು ಹೇಳುತ್ತಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಕಡೆ ಮುಖ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಅವರನ್ನು ಸೋಲಿಸಬೇಕೆಂದು ದೊಡ್ಡ ಷಡ್ಯಂತ್ರ ನಡೆಸಿದ್ದಾರೆ. ಜನತಾ ದಳದ ಕಾರ್ಯಕರ್ತರು ಈ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮುಖಂಡರಿಗೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರುಗಳಾದ ಪ್ರದೀಪ್ ಪೈ, ಶ್ರೀನಿವಾಸ್, ಕೃಷ್ಣಮೂರ್ತಿ, ನಾಗರಾಜ್, ಹಂಪಯ್ಯ ಇದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g