ಕೋಡಿ ಬಿದ್ದ ಬೃಹತ್ ಅಯ್ಯನಕೆರೆ, ರೈತರ ಮೊಗದಲ್ಲಿ ಮಂದಹಾಸ
1 min readಏಳು ಗುಡ್ಡಗಳ ಮಧ್ಯೆ ಇರುವ 2000 ಎಕರೆಗೂ ಹೆಚ್ಚು ವಿಸ್ತೀರ್ಣದ ಬೃಹತ್ ಕೆರೆ ತುಂಬಿ ಕೋಡಿ ಬಿದ್ದಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಐತಿಹಾಸಿಕ ಅಯ್ಯನಕೆರೆ ತುಂಬಿ ಕೋಡಿ ಬಿದ್ದಿದೆ. ಕೆರೆ ಸುತ್ತಮುತ್ತಲಿನ ಹತ್ತಾರು ಹಳ್ಳಿಯ ಜನ-ಜಾನುವಾರುಗಳ ನೀರಿನ ಬವಣೆ ತಪ್ಪಿದಂತಾಗಿದೆ. ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿರುವ ಅಯ್ಯನಕೆರೆ, ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಭಾಗದಲ್ಲಿ ಸುರಿದ ಭಾರೀ ಮಳೆಯಿಂದಾಗಿ ತುಂಬಿ ಕೋಡಿ ಬಿದ್ದಿದೆ. ಬಯಲುಸೀಮೆ ಭಾಗದಲ್ಲಿ ಈ ಬಾರಿ ಮಳೆ ಕ್ಷೀಣಿಸಿರುವುದರಿಂದ ಈ ಬಾರಿ ಕೆರೆ ತುಂಬುತ್ತೋ ಇಲ್ವೋ ಎಂದು ರೈತರು ಆತಂಕಕ್ಕೀಡಾಗಿದ್ದರು. ಆದರೆ, ಈ ಬಾರಿ ಘಟ್ಟಪ್ರದೇಶಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಕೆರೆ ತುಂಬಿ ಹರಿದಿದೆ. ಇದೀಗ ಕೆರೆ ತುಂಬಿ ಕೋಡಿ ಬಿದ್ದಿರುವುದು ಕಡೂರು ತಾಲೂಕು ಸೇರಿದಂತೆ ಬಯಲುಸೀಮೆ ಭಾಗದ ಸಾವಿರಾರು ರೈತರಿಗೆ ಸಂತಸ ಮೂಡಿದೆ. ಈ ಭಾಗದ ಸಾವಿರಾರು ರೈತರಿಗೆ ವರದಾನವಾಗಿರೋ ಅಯ್ಯನಕೆರೆ ನೀರು ಅಡಿಕೆ-ಬಾಳೆ-ತೆಂಗು ಸೇರಿದಂತೆ ಇತರೆ ಬೆಳೆಗಳಿಗೂ ಅನುಕೂಲವಾಗಲಿದೆ. ಅಯ್ಯನಕೆರೆ ಕೋಡಿ ಬಿದ್ದ ನೀರು ವೇದಾವತಿ ನದಿಯ ಮೂಲಕ ವಾಣಿವಿಲಾಸ ಜಲಾಶಯಕ್ಕೆ ಹರಿದು ಹೋಗುತ್ತದೆ. ಈ ವರ್ಷ ಆರಂಭಿಕ ಮುಂಗಾರನ್ನು ಕಂಡು ಕಂಗಾಲಾಗಿದ್ದ ಚಿಕ್ಕಮಗಳೂರಿನ ಬಯಲು ಸೀಮೆ ರೈತರು, ಅಯ್ಯನಕೆರೆ ಕೋಡಿ ಬಿದ್ದಿರುವ ಹಿನ್ನೆಲೆ ಸಂತಸಗೊಂಡಿದ್ದಾರೆ. ಅಷ್ಟೇ ಅಲ್ಲದೆ ಅಯ್ಯನಕೆರೆ ಕೋಡಿ ಬಿದ್ದ ಪರಿಣಾಮ ಚಿತ್ರದುರ್ಗ ಭಾಗಕ್ಕೆ ಅಧಿಕ ಪ್ರಮಾಣದಲ್ಲಿ ನೀರು ಹರಿಯುವುದರಿಂದ ವೇದಾವತಿ ನೀರಿನ ಮಟ್ಟವು ಕೂಡ ಹೆಚ್ಚಾಗಲಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g