ಹಣ ಡಬಲ್ ಮಾಡಿಕೊಡುತ್ತೇವೆ ಎಂದು ವಂಚಿಸಿದ ಮೂವರ ಬಂಧನ
1 min read
ಅಜ್ಜಂಪುರ: ಹಣ ದ್ವಿಗುಣಗೊಳಿಸಿಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಐದು ಲಕ್ಷ ರು. ಪಡೆದು ವಂಚಿಸಿದ್ದ ಮೂವರು ಖತರ್ನಾಕ್ ಖದೀಮರು ಅಜ್ಜಂಪುರ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಬೀರೂರು ಬಿ.ಕೋಡಿಹಳ್ಳಿಯ ಶಶಿಕುಮಾರ ( 23), ಶಿವಮೊಗ್ಗ ಗೋಪಾಳದ ದಾಮೋದರ್ (36), ಸಾಗರದ ಹುಲಿದೇವರ ಮನೆಯ ಚಲುವ (19) ಸೆರೆಸಿಕ್ಕ ಆರೋಪಿಗಳು.
ಶಿವಮೊಗ್ಗ ಅಶೋಕ್ ನಗರದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಶಣ್ಮುಖಪ್ಪ ಎಂಬುವವರನ್ನು ಪರಿಚಯಿಸಿಕೊಂಡಿದ್ದ ಆರೋಪಿಗಳು, ತಮಗೆ 5 ಲಕ್ಷ ರು. ನೀಡಿದರೆ 10 ಲಕ್ಷ ನೀಡುವುದಾಗಿ ಹೇಳಿ ನಂಬಿಸಿ ಅವರಿಂದ 5 ಲಕ್ಷ ಹಣ ಪಡೆದಿದ್ದರು. ಬಳಿಕ ಆರೋಪಿಗಳು ಒಂದು ರಟ್ಟಿನ ಬಾಕ್ಸ್ ನಲ್ಲಿ ಮೇಲೆ ಕೆಳಗೆ ನೂರು ರು. ಹಣದ ಕಂತೆ ಇಟ್ಟು, ಮಧ್ಯದಲ್ಲಿ ಅದೇ ಆಕಾರದ ಕಾಗದದ ನೋಟುಗಳನ್ನು ತುಂಬಿ ಕೊಟ್ಟಿದ್ದರು. ಹಣ ಪಡೆದ ಶಿಕ್ಷಕ ಶಣ್ಮುಖಪ್ಪ ಅವರು ಮನೆಗೆ ಹೋಗಿ ಹಣ ಪರೀಕ್ಷಿಸಿದಾಗ ತಾವು ಮೋಸ ಹೋಗಿರುವುದು ತಿಳಿದಿದೆ. ತಕ್ಷಣವೇ ಈ ಕುರಿತು ಅಜ್ಜಂಪುರ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಪೊಲೀಸರು ಬೀರೂರಿನ ಕೋಡಿಹಳ್ಳಿ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಮೂವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಬಂಧಿತರಿಂದ 5 ಲಕ್ಷ ರು. ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆಯಲ್ಲಿ ಪಿಐ ಲಿಂಗರಾಜ್, ಪಿಎಸ್ ಐ ತಿಪ್ಪೇಶ್, ಸಿಬ್ಬಂದಿಯಾದ ಶಾಹಿದ್, ಅಫ್ರಿದಿ, ನವೀನ್ ಪಾಲ್ಗೊಂಡಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g