ಹುಡುಗಿಯನ್ನ ದಪ್ಪ ಮಾಡಿ, ಮದುವೆ ಫಿಕ್ಸ್ ಮಾಡು, ದೇವರಿಗೆ ಪತ್ರ ಬರೆದ ಅನಾಮಧೇಯ…!
1 min read
ಚಿಕ್ಕಮಗಳೂರು. ದೇವರಿಗೆ ಒಳ್ಳೆ ಬುದ್ಧಿ-ವಿಧ್ಯೆ-ಜ್ಞಾನ-ಸುಖ-ಶಾಂತಿ-ನೆಮ್ಮದಿ-ಅಂತಸ್ತು-ಆರೋಗ್ಯ ಕೊಡಪ್ಪಾ ಅಂತ ಕೇಳಿಕೊಳ್ತಾರೆ. ಆದರೆ, ಭಕ್ತನೋರ್ವ ಸಂಬಳ ತಂದು ನನ್ನ ಕೈಗೆ ಕೊಡು, ಹುಡುಗಿನ ದಪ್ಪ ಮಾಡು, ಮದುವೆನ ಫಿಕ್ಸ್ ಮಾಡು ಅಂತ ಪತ್ರ ಬರೆದು ಕಾಣಿಕೆ ಹುಂಡಿಯಲ್ಲಿ ಹಾಕಿರೋ ಘಟನೆ ಜಿಲ್ಲೆಯ ಕಳಸ ತಾಲೂಕಿನಲ್ಲಿ ನಡೆದಿದೆ. ಕಳಸ ತಾಲೂಕಿನ ಇತಿಹಾಸ ಪ್ರಸಿದ್ಧ ಕಳಸೇಶ್ವರ ಸ್ವಾಮಿ ದೇಗುಲದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಡೆಯಿತು. ಹುಂಡಿಯಲ್ಲಿ ಸುಮಾರು 18 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿತ್ತು. ಆದರೆ, ಹಣದ ಜೊತೆ ಅಂಧಭಕ್ತನೋರ್ವ ದೇವರಿಗೆ ಬರೆದ ಪತ್ರ ಕಂಡು ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಹಾಗೂ ಅಧಿಕಾರಿಗಳು ನಸು ನಕ್ಕಿದ್ದಾರೆ. ಪತ್ರದಲ್ಲಿ ಹತ್ತಾರು ವಿಷಯಗಳ ಬಗ್ಗೆ ನೋವು ತೋಡಿಕೊಂಡಿರೋ ಭಕ್ತ ಸಂಬಳ ತಂದು ಇಂತವರಿಗೆ ಕೊಡಲಿ, ಹುಡುಗಿಯನ್ನ ದಪ್ಪ ಮಾಡಿ ಪುಷ್ಠಿಯಾಗಿ ಕಾಣುವಂತೆ ಮಾಡು, ಯಾವುದೇ ವಿಘ್ನವಿಲ್ಲದೆ ಮದುವೆ ಮಾಡಿಸು ಎಂದು ಬರೆದಿರೋದು ನಗೆಪಾಟಲಿಗೀಡಾಗಿದೆ.
ಪತ್ರದಲ್ಲಿ ಮಂಜುಳ ಅತ್ತೆ-ಮಾವನ ಜೊತೆ ಪ್ರೀತಿಯಿಂದ ಇರುವಂತೆ ಮಾಡು. ಮಂಜುಳ ಮನಸ್ಸಿನಲ್ಲಿ ರಾಜಮ್ಮ, ಬಸವರಾಜುನನ್ನ ಒಳ್ಳೆಯವರಾಗಿಸು. ದೇವರಾಜುಗೆ ಕೈತುಂಬಾ ಸಂಬಳ ಸಿಗುವ ಸರ್ಕಾರಿ ಕೆಲಸ ಕೊಡಿಸು. ನಮ್ಮ ಋಣದ ಬಾಧೆ ಹಾಗೂ ಸಾಲದ ಭಾದೆಯನ್ನ ಬೇಗ ತೀರಿಸು, ರಮೇಶ-ಮಂಜುಳ ಒಪ್ಪಿಕೊಂಡಿರುವ ಒಂದು ಲಕ್ಷ ರೂಪಾಯಿ ಹಣವನ್ನ ಬೇಗ ಕೊಡುವಂತೆ ಮಾಡು, ರಾಮಕೃಷ್ಣ-ಅರುಣ ಇಬ್ಬರೂ ಹಣವನ್ನ ಬೇಗ ಕೊಡುವಂತೆ ಮಾಡು ಎಂದೆಲ್ಲಾ ಕೇಳಿಕೊಂಡಿದ್ದಾರೆ. ಈ ಹುಚ್ಚು ಭಕ್ತನ ಸಮಸ್ಯೆಗಳ ಪಟ್ಟಿಗೆ ಅಧಿಕಾರಿಗಳು ಶಾಕ್ ಆಗಿದ್ದಾರೆ. ಈ ದೇವಾಲಯದಲ್ಲಿ ಈ ರೀತಿಯ ಪತ್ರ ಇದೇ ಮೊದಲಲ್ಲ. ಕಳೆದ ಒಂದೆರಡು ವರ್ಷಗಳ ಹಿಂದೆಯೂ ಇದೇ ರೀತಿ ಪತ್ರ ಪತ್ತೆಯಾಗಿತ್ತು. ಆಗಲೂ ಕೂಡ ಭಕ್ತನೋರ್ವ ಪ್ರೀತಿ-ಪ್ರೇಮ, ಹಣ-ಕೆಲಸದ ಬಗ್ಗೆಯೇ ಪತ್ರ ಬರೆದಿದ್ದನು. ದೇವರಿಗೆ ಪತ್ರ ಬರೆದವನ ಮನಸ್ಸಿನ ನೋವು ಏನಿದ್ಯೋ ದೇವರೇ ಬಲ್ಲ. ಅವನ ಬೇಡಿಕೆಗಳನ್ನ ಕಳಸಾದ ಕಳಸೇಶ್ವರ ಈಡೇರಿಸಲಿ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g