ಮನೆ ಕುಸಿದು ವ್ಯಕ್ತಿ ಸಾವು- ಕೂದಲೆಳೆ ಅಂತರದಲ್ಲಿ ಮತ್ತೊಂದು ಕುಟುಂಬ ಪಾರು
1 min readಚಿಕ್ಕಮಗಳೂರು : ಭಾರೀ ಮಳೆಯಿಂದ ಮಲಗಿದ್ದ ವ್ಯಕ್ತಿ ಮೇಲೆ ಮನೆಯ ಗೋಡೆ ಕುಸಿದು ಬಿದ್ದು ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರೋ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಯಗಟಿಪುರ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನ ಯಗಟಿಪುರ ಸಮೀಪದ ಭೋವಿ ಕಾಲೋನಿಯ 45 ವರ್ಷದ ಮಂಜುನಾಥ್ ಎಂದು ಗುರುತಿಸಲಾಗಿದೆ. ಮೃತ ಮಂಜುನಾಥ್ ಮದುವೆ ಆಗಿರಲಿಲ್ಲ. ಏಕಾಂಗಿಯಾಗಿ ಬದುಕುತ್ತಿದ್ದರು. ಮನೆ ಕೂಡ ಹಳೇ ಕಾಲದ ಮನೆಯಾಗಿದ್ದು ಮಳೆ-ಗಾಳಿಗೆ ಶೀಥ ಹೆಚ್ಚಾಗಿ ಮಲಗಿದ್ದ ವೇಳೆ ಮೈಮೇಲೆ ಬಿದ್ದು ಮಂಜುನಾಥ್ ಸಾವನ್ನಪ್ಪಿದ್ದಾರೆ. ಅನೇಕ ಬಾರಿ ಮನೆ ಶಿಥಿಲಗೊಂಡಿರೋ ಕುರಿತು ಗ್ರಾಮ ಪಂಚಾಯತ್ ನಲ್ಲಿ ಮನವಿ ಸಲ್ಲಿಸಿದ್ರೂ ಪ್ರಯೋಜನವಾಗಿಲ್ಲ. ನಿನ್ನೆ ರಾತ್ರಿ ಸುರಿದ ಧಾರಕಾರ ಮಳೆಯಿಂದ ಮನೆ ಗೋಡೆ ಕುಸಿದು ಮಂಜುನಾಥ್ ಸಾವನ್ನಪ್ಪಿರೋದು ಅವರ ಸಂಬಂಧಿಕರನ್ನ ಇದೀಗ ದುಃಖದ ಮಡುವಿನಲ್ಲಿ ದೂಡುವಂತಾಗಿದೆ. ಕಡೂರು ಭಾಗದಲ್ಲಿ ಕಳೆದ 15 ದಿನಗಳಿಂದಲೂ ಭಾರೀ ಮಳೆ ಸುರಿಯುತ್ತಿದೆ. ಇಡೀ ದಿನ ಬಿಡುವು ನೀಡುವ ವರುಣದೇವ ರಾತ್ರಿಯಾಗುತ್ತಿದ್ದಂತೆ ಧಾರಾಕಾರವಾಗಿ ಸುರಿಯುತ್ತಿದ್ದಾನೆ. ಇದರಿಂದ ಕಡೂರು ಭಾಗದಲ್ಲಿ ಹೊಲ-ಗದ್ದೆ, ತೋಟಗಳು ಜಲಾವೃತಗೊಂಡಿವೆ. ಕಳೆದ ಎರಡ್ಮೂರು ದಿನಗಳಿಂದ ಮಳೆ ಪ್ರಮಾಣ ತಗ್ಗಿದೆ. ಆದರೆ, ಭಾರೀ ಮಳೆಯಿಂದ ತೇವಾಂಶಗೊಂಡಿದ್ದ ಮನೆಯ ಗೋಡೆ ಕುಸಿದು ಈ ದುರ್ಘಟನೆ ಸಂಭವಿಸಿದೆ. ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರಮಕ್ಕಿ ಗ್ರಾಮದಲ್ಲೂ ಮಳೆಯಿಂದ ದಿಢೀರನೆ ಮನೆ ಕುಸಿದಿದೆ. ಆದರೆ, ಅದೃಷ್ಟವಶಾತ್ ಮನೆಯಲ್ಲಿದ್ದವರು ಸಾವಿನಿಂದ ಪಾರಾಗಿದ್ದಾರೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ದೀಪ ಎಂಬುವರಿಗೆ ಸೇರಿದ ಮನೆ. ಇದ್ದ ಒಂದು ಸೂರು ಮಳೆಗೆ ಕುಸಿದಿರೋದ್ರಿಂದ ದೀಪ ಕುಟುಂಬ ಕಂಗಾಲಾಗಿದೆ. ಈ ಮಧ್ಯೆ ಮಲೆನಾಡಲ್ಲಿ ಮಳೆ ಅಬ್ಬರ ಜೋರಾಗಿದೆ. ಜಿಲ್ಲೆಯ ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಮೂಡಿಗೆರೆ ಭಾಗದ ಮಳೆ ಪ್ರಮಾಣ ಸಂಪೂರ್ಣ ತಗ್ಗಿದೆ. ಆದರೆ, ಇಂದು ಸಂಜೆ ಕಳಸ ಭಾಗದಲ್ಲಿ ಸಂಜೆ ಸುಮಾರು ಒಂದು ಗಂಟೆಗಳ ಕಾಲ ಧಾರಾಕಾರ ಮಳೆ ಸುರಿದಿದೆ. ಭಾರೀ ಮಳೆಯಿಂದ ಅಡಿಕೆ-ಕಾಫಿ ತೋಟಕ್ಕೆ ನೀರು ನುಗ್ಗಿದ್ದು, ರಸ್ತೆಯೂ ಕಾಣದಂತೆ ರಸ್ತೆಯಲ್ಲಿ ಭಾರೀ ನೀರು ಹರಿದಿದೆ. ಇದ್ದಕಿದ್ದಂತೆ ಆರಂಭವಾದ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.ಬೆಳಕಿನ ಸಮಯದಲ್ಲಿ ಬಿಡುವು ಕೊಡುವ ವರುಣ ರಾತ್ರಿಯಾಗುತ್ತಲ್ಲೇ ಹೊಂಚುಹಾಕಿ ಮನಸೋ ಇಚ್ಚೆ ಸುರಿಯುತ್ತಿದ್ದಾನೆ. ಹೀಗಾಗಿ ಜನರಿಗೆ ರಾತ್ರಿ ಮನೆಯಲ್ಲಿ ನೆಮ್ಮದಿಯಾಗಿ ಮಲಗಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಮಲೆನಾಡು ಪ್ರದೇಶದಲ್ಲೂ ಕೂಡ ಮಳೆಯ ಅಬ್ಬರ ಜೋರಾಗಿದ್ದು ಮೂಡಿಗೆರೆ ತಾಲೂಕಿನ ದೇವರಮಕ್ಕಿಯ ಪ್ರೇಮ ಎಂಬುವವರ ಮನೆ ಕೂಡ ಕುಸಿದುಬಿದ್ದಿದ್ದು, ಮನೆಯಲ್ಲಿದ್ದವರು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾರೆ..
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅನ್ನೋದು ಸಾಮಾನ್ಯ ಆದ್ರೆ ಇದೀಗ ನವೆಂಬರ್ ಕಳೀತಾ ಬಂದ್ರೂ ತಗ್ಗದ ವರುಣನ ಪ್ರತಾಪದಿಂದ ಜನರು ಬೆಚ್ಚಿ ಬಿದ್ದಿದ್ದಾರೆ. ಮಲೆನಾಡು, ಬಯಲು ಸೀಮೆ ಭಾಗದಲ್ಲಿ ಬಿಟ್ಟುಬಿಡದೇ ಮಳೆ ಅಬ್ಬರಿಸುತ್ತಿರೋದ್ರಿಂದ ಒಂದ್ಕಡೆ ಮನೆ ಕುಸಿತವಾಗ್ತಿದೆ, ಇನ್ನೊಂದೆಡೆ ಜನರ ಪ್ರಾಣಪಕ್ಷಿಯೂ ಹಾರಿಹೋಗ್ತಿದೆ..
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g