15 ಸಾವಿರಕ್ಕೂ ಹೆಚ್ಚು ಭಕ್ತರಿಂದ ದೇವಿರಮ್ಮದೇವಿಯ ದರ್ಶನ
1 min readಚಿಕ್ಕಮಗಳೂರು : ವರ್ಷಕ್ಕೊಮ್ಮೆ ಮಾತ್ರ ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಬೆಟ್ಟ ದಲ್ಲಿ ನೆಲಸಿರೋ ಬಿಂಡಿಗ ದೇವಿರಮ್ಮ ದರ್ಶನ ನೀಡೋದು, ಹಾಗಾಗಿ ಇಂದು ರಾಜ್ಯದ ನಾನಾ ಭಾಗದಿಂದ 15 ಸಾವಿರಕ್ಕೂ ಹೆಚ್ಚು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದ್ರು..
ಸಮುದ್ರ ಮಟ್ಟದಿಂದ 3800 ಅಡಿ ಎತ್ತರದಲ್ಲಿರೋ ದೇವಿರಮ್ಮ ನೋಡಲು ಈ ದಿನಕ್ಕಾಗಿಯೇ ಭಕ್ತಗಣ ಚಾತಕ ಪಕ್ಷಿಯಂತೆ ಕಾಯ್ತಾ ಇರುತ್ತೆ. ಚಿಕ್ಕಮಗಳೂರು ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಬಿಂಡಿಗ ದೇವಿರಮ್ಮ ದರ್ಶನವನ್ನ ಪ್ರತಿವರ್ಷ ಭಕ್ತರು ಮಿಸ್ಗಾದೆ ದರ್ಶನ ಮಾಡ್ತಾರೆ. ದೇವಿ ದರ್ಶನ ಮಾಡಲು ಬರುವ ಭಕ್ತರು ಸುಮಾರು 8 ಕೀಲೋ ಮೀಟರ್ ದೂರವನ್ನ ನಡೆದೇ ಕ್ರಮಿಸಬೇಕು. ಬೆಟ್ಟ-ಗುಡ್ಡಗಳ ಸಾಲಿನಲ್ಲಿ, ಮಂಜಿನ ನಡುವೆ ಬರಿಗಾಲಿನಲ್ಲಿ ಕಲ್ಲು ಮುಳ್ಳಿನ ದುರ್ಗಮ ಹಾದಿಯಲ್ಲಿ ಹೆಜ್ಜೆಯನ್ನ ಹಾಕಬೇಕು. ಅದೆಷ್ಟೇ ಕಷ್ಟವಾದ್ರೂ ಕೇರ್ ಮಾಡದ ಭಕ್ತರು, ಮುಂಜಾನೆ 3 ಗಂಟೆಯಿಂದಲೇ ನಡೆಯಲು ಶುರುಮಾಡುತ್ತಾರೆ. ಕೆಲವರು ತುಂಬಾ ಸುಲಭವಾಗಿ ಬೆಟ್ಟವನ್ನ ಏರಿದ್ರೆ, ಹಲವರು ಈ ಬೆಟ್ಟವನ್ನ ಏರಬೇಕಾದ್ರೆ ಪಡೋ ಕಷ್ಟ ನಿಜಕ್ಕೂ ಆ ದೇವಿಗೆ ಪ್ರೀತಿ. ಆದ್ರೂ ಸಾವರಿಸಿಕೊಂಡು ಛಲಬಿಡದೇ, ಸುಸ್ತಾದ್ರೂ ಕೇರ್ ಮಾಡದೇ ಸಾಗೋ ಜನ್ರಿಗೆ, ಬೆಟ್ಟದ ಮೇಲಿರೋ ದೇವಿಯನ್ನ ಕಂಡಾಗ ಅನುಭವಿಸಿದ ದಣಿವೆಲ್ಲಾ ಕ್ಷಣಮಾತ್ರದಲ್ಲಿ ಮಾಯವಾಗುತ್ತದೆ.
ಪ್ರತಿವರ್ಷ ಈ ಕ್ಷೇತ್ರಕ್ಕೆ ರಾಜ್ಯ-ಹೊರರಾಜ್ಯದಿಂದ ಒಂದು ಲಕ್ಷಕ್ಕೂ ಅಧಿಕ ಭಕ್ತರು ಬಂದು ದರ್ಶನ ಮಾಡಿಕೊಂಡು ಪುನೀತರಾಗುತ್ತಾರೆ. ಆದ್ರೆ ಈ ವರ್ಷ ಕೊರೊನಾ ಸೋಂಕು ಕಡಿಮೆಯಾಗಿದ್ರೂ ಮುನ್ನೆಚ್ಚರಿಕೆಯಿಂದ ಜಿಲ್ಲಾಡಳಿತ ಬೆಟ್ಟವೇರಲು ಹೊರಗಡೆಯಿಂದ ಬರುವ ಭಕ್ತರಿಗೆ ನಿರ್ಬಂಧ ಹೇರಿತ್ತು. ಕೇವಲ ಅಕ್ಕಪಕ್ಕದ ಗ್ರಾಮಸ್ಥರಿಗಷ್ಟೇ ಅವಕಾಶ ಕಲ್ಪಿಸಲಾಗಿತ್ತು, ಆದ್ರೂ ದೇವಿಯ ದರ್ಶನವನ್ನ ಮಾಡಬೇಕೆಂದು ಈ ಬಾರಿ 25ಸಾವಿರಕ್ಕೂ ಹೆಚ್ಚು ಜನರು ಪೊಲೀಸರ ಕಣ್ತಪ್ಪಿಸಿ ಬೆಟ್ಟವನ್ನೇರಿ ದೇವಿಯ ದರ್ಶನವನ್ನ ಮಾಡಿದ್ರು. ಕೊರೆಯುವ ಚಳಿಯನ್ನ, ಮೈಮೇಲೆ ಬೀಳೋ ಇಬ್ಬನಿಯನ್ನ, ಜಾರೋ ಗುಡ್ಡವನ್ನೂ ಲೆಕ್ಕಿಸದೇ ಸಾವಿರಾರು ಭಕ್ತರು ದೇವಿಯ ದರ್ಶನ ಮಾಡಿ ಸಂತಸಪಟ್ರು. ಇನ್ನೂ ಪ್ರತಿವರ್ಷದಂತೆ ಈ ವರ್ಷವೂ ಕೂಡ ಬರಿಗಾಲಲ್ಲಿ ಬೆಟ್ಟವೇರಿ, ದೇವಿ ದರ್ಶನ ಮಾಡೋದನ್ನ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಮಿಸ್ ಮಾಡಿಕೊಳ್ಳಲಿಲ್ಲ.
ಚಿಕ್ಕಮಗಳೂರು ಎಸ್ಪಿ ಅಕ್ಷಯ್ ಕೂಡ ಇದೇ ಮೊದಲ ಬಾರಿಗೆ ಬೆಟ್ಟವನ್ನೇರಿ ಗಮನ ಸೆಳೆದ್ರು. ಇನ್ನೂ ಹರಕೆ ಕಟ್ಟಿಕೊಂಡೋರು ಬೆಟ್ಟ ಹತ್ತುವಾಗ ಎಷ್ಟೇ ಕಷ್ಟವಾದ್ರು ಅವರ ಶಕ್ತಿಗನುಸಾರವಾಗಿ ಸೌದೆಯನ್ನ ಹೊತ್ತೊಯ್ಯುತ್ತಾರೆ. ಇದರ ಜೊತೆಗೆ, ಸೀರೆ, ತುಪ್ಪ, ಬೆಣ್ಣೆ, ಕಾಯಿ, ಬಾಳೆಹಣ್ಣನ್ನ ದೇವಿಗೆ ಸಮರ್ಪಿಸ್ತಾರೆ. ವ್ರತದ ಮೂಲಕ ಹರಕೆ ಕಟ್ಟಿ ಉಪವಾಸವಿದ್ದೋರು ದೇವರಿಗೆ ಪೂಜೆ ಸಲ್ಲಿಸಿದ ಬಳಿಕ ಬೆಟ್ಟದಲ್ಲಿ ಸಂಜೆ ದೀಪ ಬೆಳಗಿದ ನಂತರವೇ ಊಟ ಮಾಡೋದು. ಇಂದು ಸಂಜೆ ಭಕ್ತರು ತಂದ ಸೌದೆ, ಎಣ್ಣೆ, ಬೆಣ್ಣೆ, ಸೀರೆ, ರವಕೆಗಳಿಗೆ ಅಗ್ನಿ ಸ್ಪರ್ಶ ಮಾಡಿದ ಮೇಲೆ ಚಿಕ್ಕಮಗಳೂರಿನ ಸುತ್ತಮುತ್ತಲಿನ ಜನ ಆ ಜ್ಯೋತಿಯನ್ನೇ ನೋಡಿದ ಬಳಿಕ ಅದಕ್ಕೆ ಆರತಿ ಮಾಡಿ ದೀಪಾವಳಿಯನ್ನ ಆಚರಿಸುತ್ತಾರೆ. ಒಟ್ನಲ್ಲಿ ಪ್ರತಿವರ್ಷ ಎಲ್ಲರಿಗೂ ದೇವಿಯ ದರ್ಶನ ಮಾಡಲು ತಾ ಮುಂದು ನಾ ಮುಂದು ಅಂತಾ ಬರ್ತಿದ್ರು, ಆದ್ರೆ ಈ ಬಾರಿ ಜಿಲ್ಲಾಡಳಿತ ನಿರ್ಬಂಧ ಹೇರಿದ್ರೂ 25 ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ದರ್ಶನ ಮಾಡಿದ್ದು ವಿಶೇಷ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g