ಜಾತಿಯ ವಿಷ ಬೀಜ ಬಿತ್ತಿ, ಹಣ, ಹೆಂಡ, ತೋಳ್ಬಲದಿಂದ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು-ಬಿ.ಎಸ್.ಯಡಿಯೂರಪ್ಪ
1 min readಚಿಕ್ಕಮಗಳೂರು : ಜಾತಿಯ ವಿಷ ಬೀಜ ಬಿತ್ತಿ, ಹಣ, ಹೆಂಡ, ತೋಳ್ಬಲದಿಂದ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಮಾಜಿ ಮುಖ್ಯ ಮಂತ್ರಿ, ಬಿಜೆಪಿ ಧುರೀಣ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು.
ಅವರು ಗುರುವಾರ ನಗರದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು. ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ನಾನೇ ಮುಖ್ಯಮಂತ್ರಿ ಎಂದು ತಿರುಕನ ಕನಸು ಕಾಣುತ್ತಿದ್ದಾರೆ. ಅದು ಸಾಧ್ಯವಿಲ್ಲ ಎನ್ನುವುದು ಅವರಿಗೂ ಗೊತ್ತಿದೆ. ರಾಜ್ಯದಲ್ಲಿ ಜಗತ್ತು ಮೆಚ್ಚಿದ ನಮ್ಮ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರು ಪ್ರವಾಸ ಆರಂಭಿಸಿದ್ದಾರೆ. ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ಸಂಕಲ್ಪ ಮಾಡಿದ್ದಾರೆ. ಅವರ ಆಶೀರ್ವಾದದಿಂದ ಈ ಕ್ಷೇತ್ರ ಹಾಗೂ ರಾಜ್ಯವನ್ನು ಮಾದರಿಯನ್ನಾಗಿ ಮಾಡುವಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಲಿಂಗಾಯಿತ ವಿರೋದಿ ಎಂದು ಬಿಂಬಿಸುವ ಕಾಂಗ್ರೆಸ್ ಪ್ರಯತ್ನ ನಡೆಯುವುದಿಲ್ಲ : ಸಿ.ಟಿ. ರವಿ
ಕ್ಷೇತ್ರವನ್ನು ಅಭಿವೃದ್ಧಿಪಡಿಸದ ನೀವು ಸಿದ್ದಾಂತದ ರಾಜಕಾರಣ ಮಾಡುವ ನನ್ನನ್ನು ಜಾತಿವಾದಿ ಎಂದು ಬಿಂಬಿಸಲು ಹೊರಟಿದ್ದೀರಿ ನಿಮ್ಮ ಆಟ ನಡೆಯುವುದಿಲ್ಲ ಎಂದು ಶಾಸಕ ಸಿಟಿ ರವಿ ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದರು.
ಅವರು ಗುರುವಾರ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ನಗರದ ವಿಜಯಪುರ ಗಣಪತಿ ಪೆಂಡಾಲ್ ಮೈದಾನದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮಾತಿನುದ್ದಕ್ಕೂ ತಮ್ಮನ್ನು ಲಿಂಗಾಯಿತ ವಿರೋಧಿ ಎಂದು ಬಿಂಬಿಸುವ ಕಾಂಗ್ರೆಸ್ ಪ್ರಯತ್ನದ ವಿರುದ್ಧ ತರಾಟೆಗೆ ತೆಗೆದುಕೊಂಡ ರವಿ, ನಾನು ಚಿಕ್ಕಮಗಳೂರಿನ ಮಗ ನಾನು ಏನು ಎಂಬುದನ್ನು ಇಲ್ಲಿನ ಜನ ನೋಡಿದ್ದಾರೆ ಇಲ್ಲಿ ನಿಮ್ಮ ಬೇಳೆ ಬೇಯುವುದಿಲ್ಲ ಎನ್ನುವ ಕಾರಣಕ್ಕೆ ಜಾತಿವಾದದ ಬಣ್ಣ ಕಟ್ಟಲು ಹೊರಟಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡರು.
ಎಲ್ಲ ಜಾತಿಯ ಜನ ಪ್ರೀತಿಯಿಂದ ಕೊಟ್ಟ ಮತಗಳಿಂದಲೇ ನಾನು ನಾಲ್ಕು ಬಾರಿ ಗೆದ್ದು ಬಂದಿದ್ದೇನೆ. ಈ ಕ್ಷೇತ್ರದಲ್ಲಿ ನನ್ನ ವಿರುದ್ಧ ಎಲ್ಲೆಲ್ಲಿ ಗಲಾಟೆಯ ನಾಟಕ ಆಡಿಸುತ್ತಿರೋ ಅಲ್ಲೆಲ್ಲ ಬಿಜೆಪಿ ಹಿಂದಿಗಿ0ತಲೂ ಹೆಚ್ಚಿನ ಮತವನ್ನು ಈ ಬಾರಿ ಪಡೆಯಲಿದೆ ಇದು ನಿಮಗೆ ಸವಾಲು ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ಕಳಸಾಪುರ, ಅಲ್ಲಂಪುರ ಕೆಂಪನಹಳ್ಳಿ ಇತರೆ ಕಡೆಗಳಲ್ಲಿ ಗಲಾಟೆಯ ನಾಟಕವಾಡಿದಿರಿ, ಆ ಎಲ್ಲಾ ಕಡೆಗಳಲ್ಲೂ ಜನ ಬಿಜೆಪಿಗೆ ದಾಖಲೆಯ ಪ್ರಮಾಣದ ಮತ ಕೊಟ್ಟಿದ್ದಾರೆ. ನಾವು ಎಲ್ಲಿಯೂ ಗಲಾಟೆ ಮಾಡಿಸದೆ, ಸುಳ್ಳು, ಮೋಸ, ಮನೆಹಾಳು ಮಾಡುವ ರಾಜಕಾರಣ ಮಾಡದೆ ಇರುವ ಕಾರಣಕ್ಕೆ ಜನ ಪ್ರೀತಿಯಿಂದ ನಮ್ಮನ್ನು ಗೆಲ್ಲಿಸಿದ್ದಾರೆ ಎಂದು ಕಾಂಗ್ರೆಸ್ಗೆ ತಿವಿದರು.
ನಾನು ಭೀತಿ ಹಾಗೂ ಜಾತಿ ರಾಜಕಾರಣ ಮಾಡಿದ್ದರೆ ಕ್ಷೇತ್ರದ ಜನರು ನನ್ನ ಬಗ್ಗೆ ಈ ಮಟ್ಟದ ಪ್ರೀತಿ ತೋರುತ್ತಿರಲಿಲ್ಲ. ಭಯ ಹುಟ್ಟಿಸುವ ರಾಜಕಾರಣ ನಮ್ಮ ಜಾಯಮಾನದಲ್ಲೇ ಇಲ್ಲ. ನಾವು ಸಿದ್ಧಾಂತದ ರಾಜಕಾರಣದಿಂದ ಬಂದಿರುವುದೇ ಇದಕ್ಕೆ ಕಾರಣ. ಬಸವಣ್ಣ, ಕನಕದಾಸರ ತತ್ವದಲ್ಲಿ ನಂಬಿಕೆ ಇಟ್ಟು ಯಾರೇ ಬಂದರೂ ಒಂದೇ ರೀತಿ ಪ್ರೀತಿ ತೋರಿಸಿದ್ದೇನೆ, 2018, 2013, 2011 ರಲ್ಲೂ ಇದೇ ರೀತಿ ನನ್ನ ವಿರುದ್ಧ ಜಾತಿ ರಾಜಕಾರಣದ ಬಣ್ಣ ಕಟ್ಟುವ ಕೆಲಸ ಕಾಂಗ್ರೆಸ್ಸಿಗರು ಮಾಡಿದ್ದರು ಆದರೂ ಜನ ನಮಗೆ ಪ್ರೀತಿಯಿಂದಲೇ ಮತ ಕೊಟ್ಟರು ಈ ಬಾರಿಯೂ ಒಂದು ಲಕ್ಷ ಮತಗಳ ಸಂಖ್ಯೆಯನ್ನು ನಾವು ದಾಟಲಿದ್ದೇವೆ ಇದು ನಮ್ಮ ಸಂಕಲ್ಪ ಎಂದರು.
ಮನೆಹಾಳು ಮಾಡಿದ ರಾಜಕಾರಣಿ ಎಂದು ಯಾರೊಬ್ಬರಿಂದಲೂ ನಾವು ಹೇಳಿಸಿಕೊಂಡಿಲ್ಲ. ಕೆಲವು ಸಂದರ್ಭದಲ್ಲಿ ಯಾವುದೇ ಮುಲಾಜಿಲ್ಲದೆ ಮಾತನಾಡಿದ್ದೇನೆ. ಅದು ತಾತ್ವಿಕ ಮತ್ತು ವಾಸ್ತವಿಕ ನೆಲಗಟ್ಟಿನ ರಾಜಕಾರಣ. ಈ ಕಾರಣಕ್ಕೆ ನಿಷ್ಟುರವಾಗಿ ಮಾತನಾಡಿದ್ದೇನೆ. ಆದರೆ ಎಲ್ಲಿಯೂ ಅಧಿಕಾರದ ದರ್ಪ ತೋರಿಸಿಲ್ಲ, ಜನರನ್ನು ಮರೆತು ರಾಜಕಾರಣ ಮಾಡಿಲ್ಲ ಎಂದರು.
ದತ್ತಪೀಠ ಅಧಿಕಾರಕ್ಕೆ ಹಿಡಿದ ಹೋರಾಟವಲ್ಲ ಅದರಲ್ಲಿ ಸತ್ಯ ಮತ್ತು ನ್ಯಾಯ ಇತ್ತು. ಈಗ ನಾವು ದತ್ತಪೀಠಕ್ಕೂ ನ್ಯಾಯ ಕೊಡಿಸಿದ್ದೇವೆ. ನಾನು ಶಾಸಕನಾಗುವ ಮೊದಲು ಸಿಟಿಆರ್ ಗೆದ್ದರೆ ಊರಿಗೆ ಬೆಂಕಿ ಹತ್ತಿಕೊಳ್ಳುತ್ತದೆ ಎಂದು ಅಪಪ್ರಚಾರ ಮಾಡಿದರು. ಆದರೆ ಚಿಕ್ಕಮಗಳೂರು ಈಗ ನೆಮ್ಮದಿ ಅಷ್ಟೇ ಅಲ್ಲ, ಆಕ್ಸಿಜನ್ ಕೊಡುವುದಷ್ಟೇ ಅಲ್ಲ, ರಾಜ್ಯದಲ್ಲೇ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಥಳವಾಗಿ ಪರಿವರ್ತನೆಯಾಗಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬಗ್ಗೆ ಈಗ ಮೊಸಳೆ ಕಣ್ಣೀರು ಸುರಿಸುತ್ತಿರುವ ಕಾಂಗ್ರೆಸ್ಸಿಗರು ೧೯೭೦ರಲ್ಲಿ ಯಡಿಯೂರಪ್ಪ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಸತ್ತುಹೋದ ಎಂದು ಹೇಳಿದ್ದರು. ಈಗ ನೀವು ಹುಳಿ ಇಡುವ ಪ್ರಯತ್ನ ಮಾಡುತ್ತಿದ್ದಾರೆ.
ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಮುಖಂಡರುಗಳಾದ ಚನ್ನಬಸಪ್ಪ, ಸಿ.ಆರ್.ಪ್ರೇಂ ಕುಮಾರ್, ಟಿ.ರಾಜಶೇಖರ್, ಮಧುಕುಮಾರ ರಾಜ ಅರಸ್, ಈಶ್ವರಳ್ಳಿ ಮಹೇಶ್ ಇನ್ನಿತರರು ಇದ್ದರು. ಟಿ.ರಾಜಶೇಖರ್ ಸ್ವಾಗತಿಸಿ, ವಿಜಯಕುಮಾರ್ ವಂದಿಸಿದರು.
ಬೃಹತ್ ಮೆರವಣಿಗೆ
ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಇತರೆ ಮುಖಂಡರನ್ನು ಬೃಹತ್ ಬೈಕ್ ಜಾಥಾದೊಂದಿಗೆ ನಗರದ ಬೋಳರಾಮೇಶ್ವರ ದೇವಸ್ಥಾನದಿಂದ ವಿಜಯಪುರ ಗಣಪತಿ ಪೆಂಡಾಲ್ ವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g