ವಾಹನ ಪಾರ್ಕಿಂಗ್ ಶುಲ್ಕ ರದ್ದುಪಡಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ
1 min readಚಿಕ್ಕಮಗಳೂರು: ನಗರದ ಮಹಾತ್ಮಗಾಂಧಿ ರಸ್ತೆಯಲ್ಲಿ ನಿಲುಗಡೆಯಾಗುವ ವಾಹನ ಪಾರ್ಕಿಂಗ್ ಶುಲ್ಕ ರದ್ದುಪಡಿಸಬೇಕೆಂದು ಒತ್ತಾಯಿಸಿ ವರ್ತಕರ ಸಂಘ ಮತ್ತು ಕಿಸಾನ್ಕಾಂಗ್ರೆಸ್ ವತಿಯಿಂದ ಪ್ರತ್ಯೇಕವಾಗಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಎಂ.ಜಿ.ರಸ್ತೆಯಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸಲು ಮುಂದಾಗಿರುವ ಕ್ರಮವನ್ನು ವಿರೋಧಿಸಿ ಕಿಸಾನ್ ಕಾಂಗ್ರೆಸ್ ಮತ್ತು ಕಿಸಾನ್ಸೆಲ್ ವಿಭಾಗದವರು ನಗರಸಭೆ ಎದುರು ಪ್ರತಿಭಟಿಸಿ ಮುತ್ತಿಗೆಹಾಕಲು ಯತ್ನಿಸಿದರು. ಬಿಜೆಪಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ ಪಾರ್ಕಿಂಗ್ ಶುಲ್ಕ ವಿಧಿಸುವುದನ್ನು ಕೈಬಿಡುವಂತೆ ಒತ್ತಾಯಿಸಿದರು. ನಗರಸಭೆ ಕಛೇರಿಯೊಳಗೆ ನುಗ್ಗಲು ಮುಂದಾದ ಪ್ರತಿಭಟನಾನಿರತನ್ನು ಪೊಲೀಸರು ತಡೆದಾಗ ಪೊಲೀಸರೊಂದಿಗೆ ಪ್ರತಿಭಟನಾಕಾರರು ಮಾತಿನ ಚಕಮಕಿ ನಡೆಯಿತು.
ಸ್ಥಳಕ್ಕಾಗಮಿಸಿದ ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್, ಅವರೊಂದಿಗೆ ವಾಗ್ವಾದ ನಡೆಸಿದ ಪ್ರತಿಭಟನಾಕಾರರು ನಗರದ ಎಲ್ಲಾ ರಸ್ತೆಗಳೂ ಗುಂಡಿ-ಗೊಟರಿನಿ0ದ ಕೂಡಿದ್ದರೂ ಅತ್ತ ತಿರುಗಿ ನೋಡದ ನಗರಸಭೆ ಕಂದಾಯ, ಕಸದ ಶುಲ್ಕ ಹೆಚ್ಚಳ ಸೇರಿದಂತೆ ಅನೇಕ ಜನವಿರೋಧಿ ನೀತಿಗಳ ಮೂಲಕ ಸರ್ವಾಧಿಕಾರಿಯಂತೆ ವರ್ತಿಸುತ್ತಿದೆ ಎಂದು ಆರೋಪಿಸಿದರು.
ಎಂ.ಜಿ.ರಸ್ತೆಯಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸಿದರೆ ಮೊದಲೇ ವ್ಯಾಪಾರವಿಲ್ಲದೇ ಕಂಗೆಟ್ಟಿರುವ ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೀದಿಗೆ ಬೀಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ನಗರದ ಅನೇಕ ರಸ್ತೆಗಳಲ್ಲಿ ಬೀದಿ ದೀಪಗಳು ಉರಿಯುತ್ತಿಲ್ಲ. ಅವುಗಳು ಉರಿಯಲು ಇನ್ನೆಷ್ಟು ವರ್ಷಬೇಕೆಂದು ಆಯುಕ್ತರನ್ನು ಪ್ರಶ್ನಿಸಿದರು. ಆಯುಕ್ತರು ಮಾತನಾಡಿ ನಗರದಲ್ಲಿ ಇದೀಗ ನಡೆಯುತ್ತಿರುವ ಯುಜಿಡಿ ಕಾಮಗಾರಿ ಮುಗಿದ ನಂತರ ರಸ್ತೆ ಸರಿಪಡಿಸುವುದು ಸೇರಿದಂತೆ ಉಳಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ಬೀದಿ ದೀಪಗಳಿಗೆ ಎಲ್ಇಡಿ ಲೈಟ್ಗಳನ್ನು ಅಳವಡಿಸಲಾಗುವುದು ಎಂದರು. ನ.೧ ರಿಂದ ಪಾರ್ಕಿಂಗ್ ಶುಲ್ಕ ವಿಧಿಸುವುದನ್ನು ಶಾಸಕರ ಸೂಚನೆ ಮೇರೆಗೆ ಮುಂದೂಡಲಾಗಿದ್ದು ವ್ಯಾಪಕ ಚರ್ಚೆ ನಂತರ ಮುಂದಿನ ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅರೇನಳ್ಳಿ ಪ್ರಕಾಶ್, ಉಪಾಧ್ಯಕ್ಷರಾದ ಬಲರಾಮ್, ದಿನೇಶ್ ಮತ್ತಾವರ, ಕಾರ್ಯದರ್ಶಿ ಸೋಮಶೇಖರ್, ಕಾಂಗ್ರೆಸ್ ಕಿಸಾನ್ ಸೆಲ್ನ ರಾಜ್ಯ ಸಂಚಾಲಕ ಸಿ.ಎನ್.ಅಕ್ಮಲ್, ರಾಜ್ಯ ಕಾರ್ಯದರ್ಶಿ ಆದಿತ್ಯಗೌಡ, ರಿಜ್ವಾನ್, ಜಬ್ಬಿ, ಜಮೀರ್, ನೂರ್ ಅಹ್ಮದ್, ಸಾದಿಕ್, ಎನ್.ಎಸ್.ಯು.ಐ. ಅಧ್ಯಕ್ಷ ಆದಿಲ್, ಪ್ರಶಾಂತ್ ಇದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g