ಯುಗಾದಿ ದಿನದಂದೇ ವರದಕ್ಷಿಣೆ ಕಿರುಕುಳಕ್ಕೆ ನವವಿವಾಹಿತೆ ಬಲಿ?,
1 min read
ಚಿಕ್ಕಮಗಳೂರು : ಯುಗಾದಿ ದಿನದಂದೇ ವರದಕ್ಷಿಣೆ ಕಿರುಕುಳಕ್ಕೆ ನವವಿವಾಹಿತೆ ಬಲಿಯಾಗಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಾರಬೈಲ್ ಗ್ರಾಮದಲ್ಲಿ ನಡೆದಿದೆ. ಸಂತೋಷ-ನೆಮ್ಮದಿ ತರಬೇಕಿದ್ದ ಯುಗಾದಿ ನವವಿವಾಹಿತೆ ಪೋಷಕರ ಬಾಳಲ್ಲಿ ಸೂತಕ ತಂದೊಡ್ಡಿದೆ.ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿರೋ ನವವಿವಾಹಿತೆ ಹೆಸರು ಗಾನವಿ. ಅಂದಕ್ಕೂ ಸೆಡ್ಡು ಹೊಡೆಯೋ ಹಾಗೇ ಇದ್ದಳು ಈ ಗಾನವಿ. ಗಾನವಿ ಬಾಳು ಒಬ್ಬ ಗಿಡುಗನ ಕೈಗೆ ಸಿಕ್ಕಿ ಅರಳುವ ಮುನ್ನವೇ ಬಾಡಿ ಹೋಗಿದೆ. ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ಬನ್ನೂರು ಗ್ರಾಮದ ಗಾನವಿಯನ್ನ ಒಂದು ವರ್ಷದ ಹಿಂದೆಯಷ್ಟೇ ಮೂಡಿಗೆರೆ ತಾಲೂಕಿನ ಕಾರಬೈಲ್ ಗ್ರಾಮದ ನಂದಿಪ್ ಎಂಬಾತನಿಗೆ ಮದುವೆ ಮಾಡಿ ಕೊಡಲಾಗಿತ್ತು. ಎಂಎ ಓದಿಕೊಂಡಿದ್ದ ಗಾನವಿ, ಬೆಂಗಳೂರಿನಲ್ಲಿ ಕೆಲಸ ಕೂಡ ಮಾಡ್ತಿದ್ದಳು. ಆದರೆ ಮದುವೆ ನಿಶ್ಚಯ ಆದಮೇಲೆ ಕೆಲಸಕ್ಕೆ ಗುಡ್ ಬೈ ಹೇಳಿ, ಮುಂದೆ ಒಳ್ಳೆಯ ಜೀವನ ಸಿಗುತ್ತದೆ ಅನ್ನೋ ಕನಸನ್ನ ಕಟ್ಟಿಕೊಂಡಿದ್ದಳು. ಒಳ್ಳೆ ಹುಡುಗ ಅಂತಾ ಗಾನವಿ ಪೋಷಕರು ಅದ್ದೂರಿಯಾಗಿಯೇ ಮದುವೆ ಮಾಡಿಕೊಟ್ಟರು. ಆದರೆ ಬರೀ ಮೂರೇ ತಿಂಗಳಲ್ಲಿ ನಂದೀಪನ ಅಸಲಿ ಮುಖ ಬಯಲಾಗ ತೊಡಗಿತು. ಪ್ರತಿನಿತ್ಯ ಹಣಕ್ಕಾಗಿ ಪೀಡಿಸುತ್ತಿದ್ದ ಪತಿರಾಯ, ಮದುವೆ ಸಮಯದಲ್ಲಿ ಕೊಟ್ಟಿರೋ ವರದಕ್ಷಿಣೆ ಸಾಕಾಗಿಲ್ಲ ಅಂತಾ ಪೀಡಿಸುತ್ತಿದ್ನಂತೆ. ಮಗಳನ್ನ ಕೊಟ್ಟಾಗಿದೆ, ಇನ್ ಏನ್ ಮಾಡೋದು ಅಂತ ಹೇಳಿ ಕಳೆದ ನಾಲ್ಕು ತಿಂಗಳ ಹಿಂದೆ 2 ಲಕ್ಷ ಹಣವನ್ನ ನಂದೀಪನಿಗೆ ಗಾನವಿ ಪೋಷಕರು ನೀಡಿದ್ದಾರೆ. ಆದರು ಸುಮ್ಮನಾಗದ ಧನಪಿಶಾಚಿಗಳು, ಹಣಕ್ಕಾಗಿ ಬರೀ ಪೀಡಿಸೋದು ಮಾತ್ರವಲ್ಲ, ದೈಹಿಕವಾಗಿ ಗಾನವಿ ಮೇಲೆ ಹಲ್ಲೆ ಮಾಡುತ್ತಿದ್ದಾರಂತೆ. ಹೀಗಾಗಿ ಗಂಡ, ಆತನ ಮನೆಯವರಿಂದ ಬೇಸತ್ತ ಗಾನವಿ ಕಳೆದ ಮೂರು ತಿಂಗಳ ಕಾಲ ತವರು ಮನೆಗೆ ಹೋಗಿ ನಾನ್ ಬಿಲ್ ಕುಲ್ ಗಂಡನ ಮನೆಗೆ ಹೋಗಲ್ಲ, ನನ್ನ ಸಾಯಿಸ್ತಾರೆ ಅಂತಾ ತವರು ಮನೆಗೆ ಹೋಗಿದ್ದಾಳೆ. ಅಲ್ಲಿಗೆ ಹೋದರು ಬಿಡದ ಪಾಪಿ ನಂದೀಪ, ಇನ್ನಮೇಲೆ ಸರಿಯಾಗಿ ನೋಡ್ಕೋಳ್ತೀನಿ ಅಂತಾ ಕರೆದುಕೊಂಡು ಬಂದಿದನಂತೆ.
ಎಲ್ಲಾ ಸರಿ ಹೋಗುತ್ತದೆ ಅಂತಾ ಗಾನವಿ ಪೋಷಕರು ಅಂದುಕೊಳ್ಳುವಾಗಲೇ ನಂದೀಪ್ ಮನೆಯವರೆಲ್ಲರೂ ಸೇರಿ ಮತ್ತೆ ಹಣ ತರುವಂತೆ ಕಿರುಕುಳ ನೀಡಿ, ದೈಹಿಕವಾಗಿ ಹಲ್ಲೆ ಮಾಡಿದ್ದಾರೆ. ಇದನ್ನ ಗಾನವಿ ಮೊಬೈಲ್ ನಲ್ಲಿ ಚಿತ್ರೀಕರಿಸಿಟ್ಟುಕೊಂಡಿರೋದು ಗೊತ್ತಾದ ಮೇಲೆ ಆಕೆಯಿಂದ ಮೊಬೈಲ್ ಕಿತ್ತಿಟ್ಟುಕೊಂಡು, ಕಳೆದ ಶನಿವಾರ ಇಲಿ ಪಾಶಣವನ್ನ ಪತಿ ನಂದೀಪ್, ಅತ್ತೆ ಮಾವ ಎಲ್ಲರೂ ಸೇರಿ ಗಾನವಿಗೆ ತಿನ್ನಿಸಿದ್ದಾರೆ. ಕೊನೆಗೆ ಆಕೆ ಸುಸ್ತಾದ ಮೇಲೆ ಆಸ್ಪತ್ರೆಗೆ ಕರೆದುಕೊಂಡು ಬರುವ ನಾಟಕವಾಡಿದ್ದಾರೆ, ಮೂರು ದಿನ ಆದ ಮೇಲೆ ಗಾನವಿ ಮನೆಯವರಿಗೆ ವಿಚಾರ ತಿಳಿಸಿ, ಗಾನವಿಗೆ ಜಾಂಡೀಸ್ ಆಸ್ಪತ್ರೆಗೆ ಅಡ್ಮೀಟ್ ಮಾಡಿದ್ದೇವೆ ಅಂತಾ ಹೇಳಿದ್ದಾರೆ. ಮನೆಯಲ್ಲಿ ನಡೆದ ವಿಚಾರವನ್ನೆಲ್ಲಾ ಗಾನವಿ ಪೋಷಕರಿಗೆ ತಿಳಿಸಿದ್ದಾಳೆ, ಅಷ್ಟರಲ್ಲಿ ಆಸ್ಪತ್ರೆಯಿಂದ ಜೂಟ್ ಹೇಳಿದ ಪತಿ ನಂದೀಪ್ ಹಾಗೂ ಮಾವ ಚಂದ್ರೇಗೌಡನನ್ನ ಮೂಡಿಗೆರೆ ಪೊಲೀಸರು ಬಂಧಿಸಿದ್ದಾರೆ.
ಗಾನವಿ ಮದುವೆಗೂ ಮುನ್ನ ಹುಡುಗಿಯೊಬ್ಬಳನ್ನ ಲವ್ ಮಾಡಿದ್ದ ನಂದೀಪ, ಆಕೆಯನ್ನ ಕೂಡ ಕೊಲೆ ಮಾಡಲು ಪ್ರಯತ್ನ ಪಟ್ಟಿದ್ದ. ಹಾಗಾಗೀ ಆತನ ಮೇಲೆ ಪೊಲೀಸ್ ಠಾಣೆಯಲ್ಲಿ ಹಾಫ್ ಮರ್ಡರ್ ಕೇಸ್ ಕೂಡ ಬುಕ್ಕಾಗಿದೆ. ಆದರೆ ಈ ಎಲ್ಲಾ ವಿಚಾರಗಳು ಗೊತ್ತಿಲ್ಲದೇ ಗಾನವಿ, ನಂದೀಪನನ್ನ ಕೈ ಹಿಡಿದಿದ್ದಳು. ಚೆನ್ನಾಗಿ ಓದಿಕೊಂಡಿದ್ದರು ಕೆಲಸಕ್ಕೂ ಗುಡ್ ಬೈ ಹೇಳಿ, ಸುಂದರ ಭವಿಷ್ಯದ ಕನಸನ್ನ ಕಂಡಿದ್ದಳು. ಆದರೆ ಸುಂದರ ಭವಿಷ್ಯದ ಕನಸನ್ನ ಕಂಡ ಸುಂದರಿ, ಗಿಡುಗನ ತೆಕ್ಕೆಗೆ ಸಿಕ್ಕ ಪರಿಣಾಮ ಇದೀಗ ತನ್ನ ಪ್ರಾಣವನ್ನೇ ಬಿಡಬೇಕಾಗಿದೆ. ಸಂತೋಷ-ನೆಮ್ಮದಿಯನ್ನ ತರಬೇಕಾಗಿದ್ದ ಯುಗಾದಿ ಗಾನವಿ ಪೋಷಕರು, ಸಂಬಂಧಿಕರಿಗೆ ಸೂತಕದ ಛಾಯೆ ಆಗಿ ಆವರಿಸಿದ್ದು ಮಾತ್ರ ನಿಜಕ್ಕೂ ದುರಂತವೇ ಸರಿ..
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g