ಮಗ ರಾತ್ರಿ ಹೊತ್ತು ನಿದ್ದೆ ಮಾಡುವಂತೆ ಮಾಡಪ್ಪ : ಕಾಣಿಕೆ ಹುಂಡಿಯಲ್ಲಿ ವಿಭಿನ್ನ ಪತ್ರ
1 min read
ಚಿಕ್ಕಮಗಳೂರು.: ಭಕ್ತರು ಕಾಣಿಕೆ ಹುಂಡಿಗೆ ಚಿನ್ನ-ಬೆಳ್ಳಿಯ ವಡವೆಗಳು, ಮುಖವಾಡ, ಬಳೆ, ಉಂಗುರು ಚೈನು, ಹಣ ಹೀಗೆ ನಾನಾ ರೀತಿಯ ವಸ್ತುಗಳನ್ನ ಹಾಕಿ ಹರಕೆ ತೀರಿಸುತ್ತಾರೆ. ಆದರೆ, ಭಕ್ತನೋರ್ವ ಕಾಣಿಕೆ ಹುಂಡಿಯಲ್ಲಿ ಮಗ ರಾತ್ರಿ ಹೊತ್ತು ಬೇಗ ಮಲಗುವಂತೆ ಮಾಡು ಭಗವಂತ ಎಂದು ಪತ್ರ ಬರೆದು ಕಾಣಿಕೆ ಹುಂಡಿಯಲ್ಲಿ ಹಾಕಿರುವ ಅಪರೂಪದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಕಳಸ ತಾಲೂಕಿನಲ್ಲಿರುವ ದಕ್ಷಿಣ ಕಾಶಿ ಎಂದೇ ಖ್ಯಾತಿಯಾಗಿರುವ ಕಳಸ ಕಳಸೇಶ್ವರ ಸ್ವಾಮಿ ಹಾಗೂ ಪರಿವಾರ ದೇವರುಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಡೆಯಿತು. ಕಾಣಿಕು ಹುಂಡಿಯಲ್ಲಿ ಭಕ್ತನೋರ್ವ ಮಗನ ಇಡೀ ಬದುಕನ್ನೇ ಬದಲಿಸಪ್ಪಾ ಎಂದು ಪತ್ರ ಬರೆದು ಕಾಣಿಕೆ ಹುಂಡಿಗೆ ಹಾಕಿ ಬೇಡಿಕೊಂಡಿದ್ದಾನೆ.
ಪತ್ರದಲ್ಲಿ, ಮಗನ ಹೆಸರು ಬರೆದಿರುವ ಅಪ್ಪ, ಮಗನ ಕುಡಿತ ಚಟ ಬಿಡಿಸಿ ಒಳ್ಳೆಯ ಬುದ್ಧಿ ಕೊಡು. ಬೇಗ ಕೆಲಸ ಸಿಗುವಂತೆ ಮಾಡು. ಅವನ ಕುಡಿತದ ಚಟ ಹೋಗಲಾಡಿಸು. ಅವನು ಭಾರೀ ಮುಂಗೋಪಿ. ಅದನ್ನೂ ಕಡಿಮೆ ಮಾಡು. ಚಂಚಲ ಸ್ವಭಾವ ತೊಲಗಿಸು. ರಾತ್ರಿ ಹೊತ್ತು ಬೇಗ ಮಲಗುವಂತೆ ಮಾಡು, ಅವನಿಗಿರುವ ಭಯವನ್ನ ಹೋಗಲಾಡಿಸಿ ಧೈರ್ಯ ತುಂಬು, ಹೆಂಡತಿ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳುವಂತೆ ಬುದ್ಧಿಕೊಡು. ಮೊಮ್ಮಕ್ಕಳಿಗೂ ವಯಸ್ಸಿಗೆ ತಕ್ಕಂತೆ ಬುದ್ಧಿ ಕೊಡು. ಮಗಳ ಸಂಸಾರವನ್ನೂ ಚೆನ್ನಾಗಿ ಕಾಪಾಡು ತಂದೆ ಎಂದು ಬರೆದಿದ್ದಾನೆ. ಪತ್ರವನ್ನ ನೋಡಿದ ಅಧಿಕಾರಿಗಳು ನಸುನಕ್ಕು ಪತ್ರವನ್ನ ತೆಗೆದಿಟ್ಟು ಹಣ ಏಣಿಕೆ ಕಾರ್ಯ ಮುಂದುವರೆಸಿದ್ದಾರೆ.
ಕಾಣಿಕೆ ಹುಂಡಿಯಲ್ಲಿ ಕಳೆದ ಐದು ತಿಂಗಳಲ್ಲಿ 19 ಲಕ್ಷದ 66 ಸಾವಿರದ 573 ರೂಪಾಯಿ ಹಣ ಸಂಗ್ರಹವಾಗಿದೆ. ಕೊರೋನಾ ಕಾರಣದಿಂದಾಗಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ತೀರಾ ಇಳಿಮುಖವಾಗಿತ್ತು. ಇದರಿಂದ ದೇವಸ್ಥಾನದ ಆದಾಯಕ್ಕೂ ಪೆಟ್ಟು ಬಿದ್ದಿತ್ತು. ಇದೀಗ, ಕೊರೋನಾ ನಿಯಾಮವಳಿಗಳು ಬಹುತೇಕ ರದ್ದುಗೊಂಡಿದ್ದು ಜನಜೀವನ ಎಂದಿನಂತೆ ಆರಂಭವಾಗುತ್ತಿದೆ. ಈಗೀಗ, ದೇವಸ್ಥಾನಕ್ಕೆ ಬರುತ್ತಿರುವ ಭಕ್ತರ ಸಂಖ್ಯೆಯೂ ಹೆಚ್ಚಾಗಿದ್ದು ಆದಾಯದಲ್ಲೂ ಏರಿಕೆ ಕಂಡಿದೆ. ದೇವಸ್ಥಾನದ ಆದಾಯದಲ್ಲಿ ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚಿನ ಕಾಣಿಕೆ ಹಣ ಸಂಗ್ರಹವಾಗಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g