ಅರಣ್ಯ ಸಮಸ್ಯೆ ಇತ್ಯರ್ಥಕ್ಕೆ ವಿಶೇಷ ಸಭೆ: ಕೆ.ಎಸ್ ಈಶ್ವರಪ್ಪ
1 min read
ಚಿಕ್ಕಮಗಳೂರು: ಅರಣ್ಯ ಸಮಸ್ಯೆ ಕುರಿತು ಚರ್ಚೆ ನಡೆಸಲು ಬೆಂಗಳೂರಿನಲ್ಲಿ ಸಚಿವರು, ಮುಖ್ಯಕಾರ್ಯದರ್ಶಿ ಹಾಗೂ ಈ ಜಿಲ್ಲೆಯ ಶಾಸಕರನ್ನೊಳಗೊಂಡ ವಿಶೇಷ ಸಭೆಯನ್ನು ಕರೆಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅನುಪಾಲನಾ ವರದಿ ಮೇಲಿನ ಚರ್ಚೆಯಲ್ಲಿ ಅರಣ್ಯ ಹಕ್ಕು ಸೆಕ್ಷನ್ 4(1) ಅಧಿಸೂಚನೆ ವಿಷಯ ಪ್ರಸ್ತಾಪವಾದಾಗ ಶೃಂಗೇರಿ ಕ್ಷೇತ್ರದಲ್ಲಿ ಜನರು ಎತ್ತಂಗಡಿ ಭೀತಿ ಎದುರಿಸುತ್ತಿದ್ದಾರೆಂದು ಸಭೆಯ ಗಮನಕ್ಕೆ ತಂದರು.
ಜಿಲ್ಲೆಯಲ್ಲಿ 199 ಪ್ರಕರಣದಲ್ಲಿ ಚಿಕ್ಕಮಗಳೂರು ಅರಣ್ಯ ವಿಭಾಗದಲ್ಲಿ 285, ಕೊಪ್ಪದಲ್ಲಿ 3374
ಆಕ್ಷೇಪರಣೆ ಸೇರಿದಂತೆ ಒಟ್ಟು 3659 ಅರ್ಜಿಗಳು ಸ್ವೀಕೃತಗೊಂಡಿದ್ದು, ಎಲ್ಲಾ ಪ್ರಕರಣಕ್ಕೆ ನೋಟೀಸ್ ನೀಡಲಾಗಿದೆ. 40 ಪ್ರಕರಣಗಳ ವಿಚಾರ ನಡೆಸಿ, 26 ಪ್ರಕರಣಗಳಲ್ಲಿ ಕಲಂ 17 ರಂತೆ ಅಂತಿಮ ಅಧಿಸೂಚನೆಗೆ ಸರ್ಕಾರದ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಉಳಿದ 14 ಪ್ರಕರಣಗಳಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಪರಿಶೀಲನಾ ಹಂತದಲ್ಲಿದೆ ಉಳಿದಂತೆ 159 ಪ್ರಕರಣಗಳಲ್ಲಿ ವಿಚಾರಣೆ ಹಂತದಲ್ಲಿವೆ ಎಂದು ಫಾರೆಸ್ಟ್ ಸಟ್ಲ್ಮೆಂಟ್ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಮಾತನಾಡಿ, ಒಟ್ಟು 1.47 ಲಕ್ಷ ಹೆಕ್ಟೇರ್ ಡೀಮ್ಡ್ ಅರಣ್ಯವನ್ನು 59ಸಾವಿರ ಹೆಕ್ಟೇರ್ಗೆ ಕಡಿತಗೊಳಿಸಲಾಗಿದೆ. ಅರಣ್ಯದೊಳಗಿರುವ ಮನೆಗಳು ಸ್ಥಳಾಂತರ ಪ್ರಕ್ರಿಯೆ ಬಳಿಕವೇ ತೆರವುಗೊಳಿಸಲು ನ್ಯಾಯಾಲಯ ಸೂಚಿಸಿದೆ ಎಂದು ಹೇಳಿದಾಗ, ಡೀಮ್ಡ್ ಅರಣ್ಯ ಮರುಪರಿಶೀಲನೆ ಆಗಬೇಕಿದೆ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಒತ್ತಾಯಿಸಿದರು.
ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಸ್ವ-ಇಚ್ಚೆಯಿಂದ ಹೊರಹೋಗಲು 425 ಕಟುಂಬಗಳ ಅರ್ಜಿ ಸಲ್ಲಿಸಿದ್ದು, ಈವರೆಗೆ 142 ಕುಟುಂಬಗಳಿಗೆ 54 ಕೋಟಿರೂ ಪರಿಹಾರ ವಿತರಿಸಲಾಗಿದೆ. 295.34 ಎಕರೆ ಜಮೀನು ವಶಕ್ಕೆ ಪಡೆದುಕೊಳ್ಳಲಾಗಿದೆ ಬಾಕಿ ಉಳಿದ 283ಕುಟುಂಬಗಳಲ್ಲಿ ಫೆ.2ರಲ್ಲಿ 12 ಕುಟುಂಬಗಳಿಗೆ 6.72 ಕೋಟಿ ರೂ. ವಿತರಿಸಲು ಜಿಲ್ಲಾಮಟ್ಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g