ಮಲ್ಲಿಕಾರ್ಜುನ ಗೌಡ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ
1 min read
ಮೂಡಿಗೆರೆ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿ, ಅಗೌರವ ತೋರಿದ ನ್ಯಾಯಾಧಿಶ ಮಲ್ಲಿಕಾರ್ಜುನಗೌಡ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಾಲೂಕಿನ ಗೋಣಿಬೀಡಿನಲ್ಲಿ ಸಂವಿಧಾನ ಹಿತರಕ್ಷಣಾ ಯುವ ಒಕ್ಕೂಟದ ವತಿಯಿಂದ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಅಂಬೇಡ್ಕರ್ ಬರೆದ ಸಂವಿಧಾನವನ್ನೇ ಓದಿಕೊಂಡು ನ್ಯಾಯಾಧೀಶ ಸ್ಥಾನದ ಹುದ್ದೆಯನ್ನಲಂಕರಿಸಿ ಅಂಬೇಡ್ಕರ್ ಅವರ ಪೋಟೊವನ್ನೇ ತೆಗೆಸಿ ಮಣ್ಣು ತಿನ್ನುವ ಕೆಲಸ ಮಾಡಿರುವುದು ಖಂಡನೀಯ. ಇಂತಹ ತಪ್ಪನ್ನು ನ್ಯಾಯಾಧಿಶರು ಮಾಡಿರುವುದು ಅಸಹ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಬಿ.ಬಿ.ನಿಂಗಯ್ಯ ಮಾತನಾಡಿ, ಅಂಬೇಡ್ಕರ್ ಅವರಿಗೆ ಓರ್ವ ನ್ಯಾಯಾಧೀಶರಿಂದ ಅಗೌರವ ತೋರುವ ದಿನ ಬರುತ್ತದೆ ಎಂದು ಕನಸು, ನನಸಿನಲ್ಲೂ ಕಂಡಿರಲಿಲ್ಲ. ಇಂತಹ ಅಪಮಾನ ಅರಗಿಸಿಕೊಳ್ಳಲು ಸಾಧ್ಯವಿಲ್ಲ. ಕೇವಲ ಮಲ್ಲಿಕಾರ್ಜುನ ಗೌಡ ಮಾತ್ರವಲ್ಲ. ಇದನ್ನು ನೋಡಿಕೊಂಡು ಸುಮ್ಮನೇ ಕುಳಿತಿದ್ದ ರಾಯಚೂರಿನ ಜಿಲ್ಲಾಧಿಕಾರಿ ವಿರುದ್ಧವೂ ಕ್ರಮ ಆಗಬೇಕಿದೆ ಎಂದು ಒತ್ತಾಯಿಸಿದರು.
ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ ಮಾತನಾಡಿ, ಇಂತಹ ಮನಸ್ಥಿತಿ ಉಳ್ಳವರಿಂದ ದಲಿತರಿಗೆ ನ್ಯಾಯಾಲದಲ್ಲಿ ನ್ಯಾಯ ಸಿಗುತ್ತದೆ ಎಂಬ ನಂಬಿಕೆಯೇ ಕಳೆದು ಹೋದಂತಾಗಿದೆ. ಇಂತವರು ನ್ಯಾಯಾಧಿಶರಾಗಲು ಯೋಗ್ಯರಲ್ಲ. ಅವನ್ನು ಕೂಡಲೇ ಬಂಧಿಸಿ, ಸೇವೆಯಿಂದ ವಜಾಗೊಳಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.
ಒಕ್ಕೂಟದ ಅಧ್ಯಕ್ಷ ಸುರೇಂದ್ರ ಉಗ್ಗೇಹಳ್ಳಿ, ಉಪಾಧ್ಯಕ್ಷ ರತನ್ ಊರುಬಗೆ, ಕಾರ್ಯದರ್ಶಿ ಮಹೇಶ್ ಉದುಸೆ, ಮುಖಂಡರಾದ ಕೆ.ಸಿ.ಚಂದ್ರಶೇಖರ್, ಚಂದ್ರು, ಸಂತೋಷ್, ಸುಂದ್ರೇಶ್, ಪರಮೇಶ್, ಪ್ರಕಾಶ್, ಪುನೀತ್ ಮತ್ತಿತರರಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g