ಅಕ್ರಮವಾಗಿ ಸಂಗ್ರಹಿಸಿದ್ದ 1.25 ಲಕ್ಷ ಮೌಲ್ಯದ ಸಾಗುವಾನಿ ವಶ
1 min read
ನರಸಿಂಹರಾಜಪುರ: ತಾಲೂಕಿನ ಮುತ್ತಿನಕ್ಕೊಪ್ಪ ಗ್ರಾಪಂ ವ್ಯಾಪ್ತಿಯ ಕುಸಬೂರು ಗ್ರಾಮದ ಆರಂಬಳ್ಳಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಡಿತಲೆ ಮಾಡಿದ್ದ 1.25 ಲಕ್ಷ ರು. ಮೌಲ್ಯದ ಸಾಗುವಾನಿ ತುಂಡುಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದಾಳಿ ವೇಳೆ ಮೂವರು ಆರೋಪಿಗಳು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾರೆ.ಆರೋಪಿಗಳು ರಾತ್ರಿವೇಳೆ ಅರಣ್ಯದಲ್ಲಿ ಸಾಗುವಾನಿ ಮರಗಳನ್ನು ಕಡಿದು ಮಾರಾಟ ಮಾಡಲು ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದರು. ಕುಬಸೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ನಿಂತು ಮರಗಳ್ಳರ ವಾಹನ ಬರುವುದನ್ನು ಕಾಯುತ್ತಿದ್ದರು. ಅದೇ ಸಮಯದಲ್ಲಿ ಸಾಗುವಾನಿ ಮರದ ತುಂಡು ತುಂಬಿದ್ದ ಗೂಡ್ಸ್ ವಾಹನ ಹಾಗೂ ಅದನ್ನು ಹಿಂಬಾಲಿಸಿಕೊಂಡು ಬೈಕ್ ಒಂದು ಬಂದಿದೆ. ಅಧಿಕಾರಿಗಳು ಅಡ್ಡಗಟ್ಟಿದ್ದರೂ ನಿಲ್ಲಿಸದೆ ವೇಗವಾಗಿ ವಾಹನ ಚಲಾಯಿಸಿಕೊಂಡು ಮರಗಳ್ಳರು ಎಸ್ಕೇಪ್ ಆಗಿದ್ದಾರೆ.
ಅರಣ್ಯ ಅಧಿಕಾರಿಗಳು ಪರಾರಿಯಾಗುತ್ತಿದ್ದ ಕಳ್ಳರನ್ನು ತಮ್ಮ ವಾಹನದಲ್ಲಿ ಹಿಂಬಾಲಿಸಿದ್ದಾರೆ. ಈ ವೇಳೆ ಅಧಿಕಾರಿಗಳ ಕಣ್ತಪ್ಪಿಸಿ ದೊಡ್ಡಿನತಲೆ ಗ್ರಾಮದ ಶ್ರೀಪಾಲ್ ಎಂಬುವವರ ತೋಟದಲ್ಲಿ ಸಾಗುವಾನಿ ತುಂಡುಗಳನ್ನು ಇಳಿಸಿದ ಮರಗಳ್ಳರು, ಬೈಕ್ ಅನ್ನು ಅಲ್ಲಿಯೇ ಬಿಟ್ಟು ಗೂಡ್ಸ್ ವಾಹನದಲ್ಲಿ ವೇಗವಾಗಿ ಹೊರಟಿದ್ದಾರೆ. ಅರಣ್ಯ ಇಲಾಖೆಯವರು ಜೀಪಿನಲ್ಲಿ ವಾಹನವನ್ನು ಶಿವಮೊಗ್ಗ ಗಡಿಯವರೆಗೆ ಹಿಂಬಾಲಿಸಿಕೊಂಡು ಹೋದರೂ ಸಿಗದೆ ಪರಾರಿಯಾಗಿದ್ದಾರೆ.
ಆರೋಪಿಗಳು ತೋಟದಲ್ಲಿಇಳಿಸಿದ್ದ ಸಾಗುವಾನಿ ಮರದ ತುಂಡುಗಳು ಹಾಗೂ ಬೈಕ್ ಅನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ದೊಡ್ಡಿನ ತಲೆ ಶ್ರೀಪಾಲ್, ಮಲ್ಲಂದೂರು ಪ್ರದೀಪ್, ಶಂಕರಾಪುರದ ಚೇತನ್ ಎಂಬ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇವರ ಪತ್ತೆಗೆ ಅಧಿಕಾರಿಗಳು ಬಲೆ ಬೀಸಿದ್ದಾರೆ.
ವಲಯ ಅರಣ್ಯಾಧಿಕಾರಿಗಳಾದ ಜಿ.ಟಿ.ರಂಗನಾಥ್ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಗೌಸ್ ಮೊಹಿನುದ್ದೀನ್, ಪರಮೇಶ್ವರ್, ವರುಣ್ ಶೆಟ್ಟಿ, ಅರಣ್ಯ ರಕ್ಷಕರಾದ ಬಲರಾಮೇಗೌಡ, ಜಯಣ್ಣ ಸತೀಶ್, ರವಿಕುಮಾರ್, ವಾಹನ ಚಾಲಕ ಗಣೇಶ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g