ಶಾಸಕರೇ ಬಂದು ಉದ್ಘಾಟಿಸಬೇಕು, ರಸ್ತೆಗೆ ಬೇಲಿ ಹಾಕಿ, ಬಂಡೆ ಇಟ್ಟ ಕಾಫಿನಾಡಿಗರು
1 min read
ಚಿಕ್ಕಮಗಳೂರು. ಶಾಸಕರೇ ಬಂದು ಉದ್ಘಾಟನೆ ಮಾಡಬೇಕು ಎಂದು ಮೂರು ಕೋಟಿ ವೆಚ್ಚದ ನೂತನ ಕಾಂಕ್ರೀಟ್ ರಸ್ತೆಗೆ ಸ್ಥಳಿಯ ಬಿಜೆಪಿ ಸದಸ್ಯರು ಬೇಲಿ ಹಾಕಿರುವ ಘಟನೆ ಜಿಲ್ಲೆಯ ಕಳಸ ತಾಲೂಕಿನ ಮಾವಿನಹೊಲ, ಮಣ್ಣಿನಪಾಲ್ ಗ್ರಾಮದಲ್ಲಿ ನಡೆದಿದೆ. ಕಳಸ ತಾಲೂಕಿನ ಮಾವಿನಹೊಲ ಹಾಗೂ ಮಣ್ಣಿನಪಾಲ್ ಗ್ರಾಮಗಳು ನಕ್ಸಲ್ ಪೀಡಿತ ಪ್ರದೇಶ. ಇಲ್ಲಿನ ರಸ್ತೆ ತುಂಬಾ ಹಾಳಾಗಿತ್ತು ಎಂದು 2018ರಲ್ಲಿ ರೇವಣ್ಣ ಲೋಕೋಪಯೋಗಿ ಸಚಿವ ಆದ ಸಂದರ್ಭದಲ್ಲಿ 3 ಕೋಟಿ 20 ಲಕ್ಷ ವೆಚ್ಚದಲ್ಲಿ ನಾಲ್ಕು ಕಿ.ಮೀ. ಕಾಂಕ್ರೀಟ್ ರಸ್ತೆ ಮಂಜೂರಾಗಿ ಈಗ ರಸ್ತೆ ಕೂಡ ನಿರ್ಮಾಣವಾಗಿದೆ. ರಸ್ತೆ ಮುಗಿದು ಹತ್ತಿರ-ಹತ್ತಿರ ತಿಂಗಳೇ ಕಳೆದಿದೆ. ಆದರೆ, ಇಲ್ಲಿನ ಬಿಜೆಪಿ ಸದಸ್ಯರು ರಸ್ತೆ ಉದ್ಘಾಟನೆಗೆ ಶಾಸಕ ಎಂ.ಪಿ.ಕುಮಾರಸ್ವಾಮಿಯೇ ಬರಬೇಕು ಎಂದು ರಸ್ತೆಗೆ ಬೇಲಿ ಹಾಕಿದ್ದಾರೆ. ರಸ್ತೆಗೆ ತಂತಿ ಬೇಲಿ ಹಾಕಿರುವ ಸದಸ್ಯರು ಜೆಸಿಬಿ ತರಿಸಿ ರಸ್ತೆ ಮೇಲೆ ಬಂಡೆಯಂತಹಾ ದೊಡ್ಡ-ದೊಡ್ಡ ಕಲ್ಲುಗಳನ್ನ ನಿಲ್ಲಿಸಿದ್ದಾರೆ.
ರಸ್ತೆಯ ಆರಂಭದಲ್ಲಿ ಪೊಲೀಸ್ ಇಲಾಖೆಯ ಬ್ಯಾರೀಕೇಡ್ ಇಟ್ಟು ಬೀಗ ಹಾಕಿದ್ದಾರೆ. ಈ ಮಾರ್ಗ ಬಹುಪಯೋಗಿ ಮಾರ್ಗವಾಗಿದ್ದು ಈ ರಸ್ತೆಯ ಮೇಲೆ ಸ್ಥಳೀಯರು, ಪ್ರವಾಸಿಗರು ಅವಲಂಬಿರಾಗಿದ್ದಾರೆ. ಈ ಮಾರ್ಗ ಬಸರೀಕಟ್ಟೆ ಹಾಗೂ ಬಾಳೆಹೊನ್ನೂರಿಗೂ ಸಂಪರ್ಕ ಕಲ್ಪಿಸಿದೆ. ಈ ಮಾರ್ಗ ಸುಮಾರು 10ಕ್ಕೂ ಹೆಚ್ಚು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ಮಾರ್ಗವಾಗಿದೆ. ಈ ಮಾರ್ಗದಿಂದ ಶಾರ್ಟ್ ಕಟ್ ಎಂದು ಪ್ರವಾಸಿಗರು ಹೆಚ್ಚಾಗಿ ಓಡಾಡುತ್ತಾರೆ. ಹೊರನಾಡು ಅನ್ನಪೂರ್ಣೇಶ್ವರಿ ದೇಗುಲಕ್ಕೂ ಈ ಮಾರ್ಗ ಹತ್ತಿರದ ದಾರಿಯಾಗಿದೆ. ಆದರೆ, ನಿರ್ಮಾಣವಾಗಿ ಸಂಚಾರಕ್ಕೆ ರೆಡಿಯಾಗಿರುವ ಈ ರಸ್ತೆ ಉದ್ಘಾಟನೆಗೆ ಮೂಡಿಗೆರೆ ಶಾಸಕ ಕುಮಾರಸ್ವಾಮಿಯೇ ಬರಬೇಕು ಎಂದು ಕಾದು ರಸ್ತೆಗೆ ಬೇಲಿ ಹಾಕಿರುವುದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆಗೆ ಹಣ ಕೊಟ್ಟಿರುವುದು ಸರ್ಕಾರವೋ ಅಥವ ಶಾಸಕರೋ ಎಂದು ಸ್ಥಳೀಯರು ಬೇಲಿ ಹಾಕಿರುವರ ವಿರುದ್ಧ ಕಿಡಿಕಾರಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g