ಸಿಬ್ಬಂದಿಯ ನೋವಿಗೆ ಹೆಗಲು ಕೊಟ್ಟ ಕಾಫಿನಾಡ ಪೊಲೀಸರು
1 min read
ಚಿಕ್ಕಮಗಳೂರು.: ನಾಲ್ಕೈದು ತಿಂಗಳ ಹಿಂದೆ ದತ್ತಪೀಠದಲ್ಲಿ ನಡೆದ ದತ್ತಜಯಂತಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ರೀತಿಯಲ್ಲಿ ಬಂದೋಬಸ್ತ್ ಕಲ್ಪಿಸಿದ ಹಿನ್ನೆಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಅವರು ವೈಯಕ್ತಿಕವಾಗಿ ನೀಡಿದ ಹಣವನ್ನ ಪೊಲೀಸರು ಸಿಬ್ಬಂದಿಯ ನೋವಿಗೆ ನೀಡಿ ಕಾಫಿನಾಡ ಪೊಲೀಸರು ಖಾಕಿಯೊಳಗಿನ ಮಾನವೀಯತೆಯನ್ನ ಮೆರೆದಿದ್ದಾರೆ. ನಗರದ ಗ್ರಾಮಾಂತರ ಠಾಣೆಯ ಎ.ಎಸ್.ಐ. ಕರೀಗೌಡ ಅವರ ಪತ್ನಿ ಕಳೆದ ಎರಡ್ಮೂರು ವರ್ಷಗಳಿಂದ ಬ್ರೈನ್ ಟ್ಯೂಮರ್ನಿಂದ ಬಳಲುತ್ತಿದ್ದಾರೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದು, ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಆರೋಗ್ಯದಲ್ಲಿ ಒಂದಷ್ಟು ಸುಧಾರಣೆಯೂ ಆಗಿದೆ. ಹಲವು ಸರ್ಜರಿಗಳ ಬಳಿಕ ಕಿಮಿಯೋಥೆರಪಿ ನಡೆಯುತ್ತಿದೆ. ಕಿಮಿಯೋಥೆರಪಿ ನಡೆಯುವಾಗ ಸಾಕಷ್ಟು ಹಣದ ಅವಶ್ಯಕತೆ ಇರುತ್ತದೆ. ಹಾಗಾಗಿ, ಕಳೆದ ಎರಡ್ಮೂರು ವರ್ಷಗಳಿಂದ ಕರೀಗೌಡರವರ ಹೋರಾಟದ ಬದುಕನ್ನ ಕಂಡ ಗ್ರಾಮಾಂತರ ಠಾಣಾ ಪೊಲೀಸರು ವೈಯಕ್ತಿಕವಾಗಿ ಹಣಕಾಸಿನ ನೆರವು ನೀಡುವುದರ ಜೊತೆ ಕಳೆದ ದತ್ತಜಯಂತಿಯ ಸಂದರ್ಭದಲ್ಲಿ 30 ಸಾವಿರಕ್ಕೂ ಅಧಿಕ ಜನಸಾಮಾನ್ಯರಿದ್ದರೂ ಕೂಡ ಒಂದೇ ಒಂದು ಸಣ್ಣ ಸಮಸ್ಯೆಯಾಗದಂತೆ ದತ್ತಜಯಂತಿಯಲ್ಲಿ ಬಂದೋಬಸ್ತ್ ಕಲ್ಪಿಸಿದ್ದರೆಂಬ ಕಾರಣಕ್ಕೆ ಎಸ್ಪಿ ಅಕ್ಷಯ್ ವೈಯಕ್ತಿಕವಾಗಿ ಗ್ರಾಮಾಂತರ ಠಾಣಾ ಸಿಬ್ಬಂದಿಗಳಿಗೆ ನೀಡಿದ ಬಹುಮಾನದ ಮೊತ್ತವನ್ನೂ ಕರೀಗೌಡರ ಪತ್ನಿಯ ಚಿಕಿತ್ಸೆಗೆ ನೀಡಿದ್ದಾರೆ. ಇದೊಂದೇ ಅಲ್ಲದೆ, ಕಳೆದ ವರ್ಷ ನಗರದ ಸೆನ್ ಸ್ಟೇಷನ್ನಲ್ಲಿ ಸಿಬ್ಬಂದಿಯೊಬ್ಬರು ಕೂಡ ಆನ್ ಡ್ಯೂಟಿಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದರು. ಅವರಿಗೂ ಬ್ರೈನ್ ಟ್ಯೂಮರ್ ಖಚಿತವಾಗಿತ್ತು. ಒಂದು ವರ್ಷಗಳ ಕಾಲ ನಿರಂತರ ಸರ್ಜರಿ ಬಳಿಕ ದೇಹ ಕೂಡ ಸಂಪೂರ್ಣ ಪ್ಯಾರಲೈಸ್ ಆಗಿತ್ತು. ಕುಟುಂಬಸ್ಥರು ಹಣಕ್ಕಾಗಿ ತೀವ್ರ ಪರದಾಡಿದ್ದರು. ಬೆಳಗಾದರೆ ಸರ್ಜರಿ ಮಾಡಬೇಕಿತ್ತು. ಆದರೆ ಕೈಯಲ್ಲಿ ಹಣ ಇಲ್ಲ. ಆಗ ಅವರ ಬ್ಯಾಚ್ಮೇಟ್ಗೆ ವಿಷಯ ತಿಳಿದು ಬೆಳಗಾಗುವಷ್ಟರಲ್ಲಿ ಎಲ್ಲರೂ ಸೇರಿ ಒಂದು ಲಕ್ಷ ಹಣ ನೀಡಿ ಸರ್ಜರಿ ಮಾಡಿಸಿದ್ದಾರೆ. ಆಗಲೂ ಎಸ್ಪಿ ಅಕ್ಷಯ್ ಅವರು ಪರಿಸ್ಥಿತಿ ಮನಗಂಡು ಇಲಾಖೆಯಿಂದ ಬಾಕಿ ಉಳಿದಿದ್ದ ಅವರ ಎಲ್ಲಾ ಬಿಲ್ ಕ್ಲಿಯರ್ ಮಾಡಿಸಿಕೊಟ್ಟಿದ್ದಾರೆ. ಸರ್ಜರಿ ಬಳಿಕ ಮತ್ತೆ ಎಲ್ಲಾ ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಸೇರಿ ಸುಮಾರು ಮೂರು ಲಕ್ಷದಷ್ಟು ಹಣವನ್ನ ಆ ಕುಟುಂಬಕ್ಕೆ ನೀಡಿದ್ದಾರೆ.
ಕೆಲಸದ ಒತ್ತಡ ಹಾಗೂ ಅಸಮಾಧಾನದ ಮಧ್ಯೆಯೂ ಸಿಬ್ಬಂದಿಗಳ ನೋವಿಗೆ ಹೆಗಲಾಗಿರೋ ಸಿಬ್ಬಂದಿಗಳಿಗೆ ಎಸ್ಪಿ ಅಕ್ಷಯ್ ಕೂಡ ಶ್ಲಾಘಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g