ಸ್ಪಂದನಾ ಶೀಲ ಹೃದಯವಿದ್ದಾಗ ಹೆಣ್ಣಿನ ಮೇಲಿನ ದಬ್ಬಾಳಿಕೆ ಕಡಿಮೆಯಾಗಲಿದೆ
1 min readಚಿಕ್ಕಮಗಳೂರು-ಸ್ಪಂದನಾ ಶೀಲ ಹೃದಯ, ಮಾನವೀಯತೆ ಸ್ವಭಾವವನ್ನು ಬೆಳೆಸಿಕೊಂಡಲ್ಲಿ ಸಮಾಜದಲ್ಲಿ ಹೆಣ್ಣಿನ ಮೇಲಾಗುತ್ತಿರುವ ದಬ್ಬಾಳಿಕೆಗಳು ಕಡಿಮೆಯಾಗಲಿವೆ ಎಂದು ಬಸವತತ್ವ ಪೀಠದ ಪೀಠಾಧ್ಯಕ್ಷರಾದ ಡಾ.ಬಸವ ಮರುಳ ಸಿದ್ದ ಸ್ವಾಮೀಜಿ ಅಭಿಪ್ರಾಯಿಸಿದರು.
ನಗರದ ಬಸವಮಂದಿರದಲ್ಲಿ ಆಯೋಜಿಸಿದ್ದ 9ನೇ ಶಿವಾನುಗೋಷ್ಟಿ ಅಲ್ಲಮಪ್ರಭು ದೇವರ ಸ್ಮರಣೆ ಮಹಿಳಾ ದಿನದ ವಿಶೇಷ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು 12 ನೇ ಶತಮಾನದಲ್ಲಿ ಅನೇಕ ಶಿವಶರಣರು ತಮ್ಮದೇ ವಚನ, ತತ್ವ ಸಿದ್ದಾಂತಗಳ ಮೂಲಕ ಜನತೆಯನ್ನು ಬಡಿದೆಚ್ಚರಿಸುವ ಕೆಲಸ ಮಾಡಿದ್ದು ಆ ಸಾಲಿನಲ್ಲಿ ಅಲ್ಲಮ ಪ್ರಭು ದೇವರು ಕೂಡ ಒಬ್ಬರು ಎಂದು ಸ್ಮರಿಸಿದರು. ಅಂದಿನ ಕಾಲದಲ್ಲಿ ಮಹಿಳೆಯರಿಗೆ ವಿಶೇಷ ಪೂಜ್ಯನೀಯ ಭಾವನೆಯಿತ್ತು, ಆದರೆ ಇಂದಿನ ದಿನಮಾನಗಳಲ್ಲಿ ಮಹಿಳೆಯರ ಮೇಲೆ ಹಲ್ಲೆ, ದೌರ್ಜನ್ಯಗಳಾಗುತ್ತಿವೆ. ಹೆಣ್ಣನ್ನು ಗೌರವಿಸಿ ಪೂಜ್ಯನೀಯ ಭಾವನೆಯಿಂದ ಕಾಣಬೇಕು, ಸ್ಪಂದನಾ ಶೀಲ, ಮಾನವೀಯತೆಯನ್ನು ಮೈಗೊಡಿಸಿಕೊಂಡು ಹೆಣ್ಣಿನ ಮೇಲಿನ ದಬ್ಬಾಳಿಕೆ ಕಡಿಯಾಗಲಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಅಪಾರ ಸಾಧನೆ ತೋರುತ್ತಿದ್ದಾರೆ ಅವರ ಸಾಧನೆಯನ್ನು ಗುರುತಿಸಿ, ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.
ಅರಸೀಕೆರೆ ಕಾಲೇಜು ಉಪನ್ಯಾಸಕಿ ಸುಧಾ ಕಲ್ಯಾಣ ಅಲ್ಲಮ ಪ್ರಭುಗಳ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿ 12 ನೇ ಶತಮಾನವು ಹೊಸಸಂಚಲನ ಸೃಷ್ಟಿಸಿ ವಚನ, ಸಾಹಿತ್ಯಾಕಾರರ ಉಗಮಕ್ಕೆ ದಾರಿಯಾಗಿದ್ದು ಅವಿಸ್ಮರಣೀಯವೆನಿಸಿದೆ. 12 ನೇ ಶತಮಾನದಲ್ಲಿ ರಾಜಪ್ರಭುತ್ವವಿತ್ತು, ಜನತೆ ಧಾರ್ಮಿಕ ಚೌಕಟ್ಟಿನೊಳಗೆ ಸಿಲುಕಿ ಕನಿಷ್ಟ ಸ್ಥಿತಿಯ ಜೀವನ ನಡೆಸುತ್ತಿದ್ದರು, ಬಸವಣ್ಣ, ಅಲ್ಲಮಪ್ರಭು, ಚೆನ್ನಬಸವಣ್ಣ ಸೇರಿದಂತೆ ಅನೇಕ ವಚನಕಾರರು ವಚನ ಸಾಹಿತ್ಯದ ಮೂಲಕ ಜನರನ್ನು ಬಡಿದೆಬ್ಬಿಸುವ ಕೆಲಸ ಮಾಡಿದರು ಎಂದು ತಿಳಿಸಿದರು.
ನಗರಸಭೆ ಸದಸ್ಯ ಇಂದಿರಾಶಂಕರ್ ಮಾತನಾಡಿ ಅಲ್ಲಮಪ್ರಭುಗಳು ಬಳ್ಳಿಗಾವಿಯಲ್ಲಿ ಜನಿಸಿ ಚಿಕ್ಕವಯಸ್ಸಿನಲ್ಲೇ ವಿರಕ್ತಿಹೊಂದಿ ಬನವಾಸಿಯ ಮಧುಕೇಶ್ವರ ದೇವಾಲಯದಲ್ಲಿ ಮದ್ದಳೆ ಸೇವೆ ಮಾಡುತ್ತಿದ್ದರು, ಶಿವಶರಣರ ಸಾಲಿನಲ್ಲಿ ತಮ್ಮದೇ ಆದ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದರು ಇವರ ಕೊಡುಗೆ ಅಪಾರ ಎಂದು ಸ್ಮರಿಸಿರು.
ಸಹಕಾರ ರತ್ಮ ಪ್ರಶಸ್ತಿ ಪುರಸ್ಕøತ ಎಸ್.ವಿ.ಬಸವರಾಜಪ್ಪ ಮಾತನಾಡಿ ಸಹಕಾರಿ ಕ್ಷೇತ್ರದಲ್ಲಿನ ನನ್ನ ಸೇವೆಯನ್ನು ಗುರುತಿಸಿ ಸಹಕಾರಿ ರತ್ನ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ, ಚಿಕ್ಕಂದಿನಲ್ಲೇ ಬಡತನದಲ್ಲಿ ಬೆಳೆದ ನಾನು ವಿವಿಧ ಜಿಲ್ಲೆಗಳಲ್ಲಿ ಖಾಸಗಿಯಾಗಿ ಉದ್ಯೋಗ ಆರಂಭಿಸಿ ಬಳಿಕ ಸಹಕಾರಿ ಕ್ಷೇತ್ರದ ಬಗ್ಗೆ ಒಲವು ಹೆಚ್ಚಿ ಇದರಲ್ಲಿ ಹಲವು ವಿಧದ ಯೋಜನೆ, ವರದಿಗಳನ್ನು ತಯಾರಿಸಿ ಸಹಕಾರಿ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದ್ದೇನೆ ಎಂದು ಸ್ಮರಿಸಿದರು.
ಜಿಲ್ಲೆಯಲ್ಲಿ 30 ಕ್ಕೂ ಹೆಚ್ಚು ಸಹಕಾರಿ ಸಂಸ್ಥೆಯನ್ನು ಹುಟ್ಟುಹಾಕಿದ್ದು ಇಂದಿಗೂ ಮಾರ್ಗದರ್ಶನ ನೀಡುತ್ತಿದೇನೆ ಎಂದು ತಿಳಿಸಿದರು.
ನಗರಸಭೆ ಸದಸ್ಯ ಕವಿತಾಶೇಖರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಮನುಷ್ಯನಲ್ಲಿ ಮಾನವೀಯ ಸಂಬಂಧಗಳು ಕಡಿಮೆಯಾಗುತ್ತಿದ್ದು ಮನುಷ್ಯನ ಭಾಂದವ್ಯವನ್ನು ಗಟ್ಟಿಗೊಳಿಸಲು ಗೋಷ್ಟಿಗಳು ಸಹಕಾರಿಯಾಗಲಿವೆ ಎಂದು ಅಭಿಪ್ರಾಯಿಸಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g