ಪುರಸಭೆಯ 2022-23ನೇ ಸಾಲಿಗೆ ರೂ.65 ಲಕ್ಷ ಉಳಿತಾಯ ಬಜೆಟ್
1 min read
ಬೀರೂರು : ಬೀರೂರು ಪುರಸಭೆಗೆ 2022-23ನೇ ಸಾಲಿನಲ್ಲಿ ರೂ.65 ಲಕ್ಷ ಉಳಿತಾಯದ ಬಜೆಟ್ನ್ನು ಪುರಸಭೆ ಅಧ್ಯಕ್ಷ ಎಂ.ಪಿ.ಸುದರ್ಶನ್ ಗುರುವಾರ ಮಂಡಿಸಿದರು.
ಕೆಮ್ಮಣ್ಣುಗುಂಡಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ, ಬೀರೂರು ಪಟ್ಟಣದ ಅಭಿವೃದ್ದಿಗಾಗಿ ಮತ್ತು ಜಾರಿಯಲ್ಲಿರುವ ಯುಜಿಡಿ ಮತ್ತು ಕುಡಿಯುವ ನೀರು ಸರಬರಾಜು ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡಲಾಗಿದ್ದು, ಒಟ್ಟಾರೆ ಎಲ್ಲಾ ಬಾಬುಗಳಿಂದ ಒಟ್ಟು ರೂ.25.05 ಕೋಟಿ ಆದಾಯ ನಿರೀಕ್ಷಿಸಲಾಗಿದ್ದು, ರೂ.24.40 ಕೋಟಿ ಗಳ ವೆಚ್ಚ ಅಂದಾಜು ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಪುರಸಭೆಯಲ್ಲಿ 2022-23ನೇ ಸಾಲಿಗೆ ರೂ.8.48 ಕೋಟಿ ಆರಂಭಿಕ ಶಿಲ್ಕು ಇದ್ದು, ರಾಜಸ್ವ ಆದಾಯಗಳಿಂದ ರೂ.7.35 ಕೋಟಿ, ಬಂಡವಾಳ ಆದಾಯಗಳಿಂದ ರೂ.5.25 ಕೋಟಿ, ವಿಶೇಷ ವಸೂಲಾತಿಯಿಂದ ರೂ.3.97 ಕೋಟಿ ಆದಾಯ ನಿರೀಕ್ಷಿಸಲಾಗಿದೆ. ರಾಜಸ್ವ ವೆಚ್ಚಗಳಲ್ಲಿ ರೂ.7.49 ಕೋಟಿ, ಬಂಡವಾಳ ವೆಚ್ಚಗಳಲ್ಲಿ ರೂ.10.10 ಕೋಟಿ, ವಿಶೇಷ ಪಾವತಿಗಳಲ್ಲಿ ರೂ.6.80 ಕೋಟಿ ಬಳಕೆಯಾಗಲಿದೆ. ಅಂತಿಮವಾಗಿ ರೂ.65 ಲಕ್ಷ ಉಳಿತಾಯವಾಗಲಿದೆ ಎಂದು ತಿಳಿಸಿದರು.
ಪ್ರಮುಖವಾಗಿ ಆಸ್ತಿ ತೆರಿಗೆಯಿಂದ ರೂ.1.20 ಕೋಟಿ, ಮಳಿಗೆ ಬಾಡಿಗೆಯಿಂದ ರೂ.25 ಲಕ್ಷ, ನೀರು ಸರಬರಾಜು ಸಂಪರ್ಕದಿಂದ ರೂ.55 ಲಕ್ಷ ಆದಾಯ ನಿರೀಕ್ಷಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಎಸ್.ಎಫ್.ಸಿ ವೇತನ ಅನುದಾನ ರೂ.2 ಕೋಟಿ, ವಿದ್ಯುತ್ ಅನುದಾನ ರೂ.1.78 ಕೋಟಿ, ಕಲ್ಯಾಣ ಕಾರ್ಯಕ್ರಮಗಳಿಗಾಗಿ ರೂ.15 ಲಕ್ಷ, ಎಸ್.ಎಫ್.ಸಿ ಮುಕ್ತನಿಧಿಯಿಂದ ರೂ.41 ಲಕ್ಷ, ಎಸ್.ಎಫ್.ಸಿ ವಿಶೇಷ ಅನುದಾನದಲ್ಲಿ ರೂ.1 ಕೋಟಿ, 15ನೇ ಹಣಕಾಸು ಅನುದಾನದಲ್ಲಿ ರೂ.1.05 ಕೋಟಿ ಆದಾಯದ ಅಂದಾಜಿಸಲಾಗಿದೆ.
ವೆಚ್ಚಗಳಲ್ಲಿ ಕಟ್ಟಡ ನಿರ್ಮಾಕ್ಕಾಗಿ ರೂ.45 ಲಕ್ಷ, ಸ್ವಾಗತ ಕಮಾನು ಕಾಂಪೌಂಡ್ ತಡೆಗೋಡೆ ನಿರ್ಮಾಣ ರೂ.40 ಲಕ್ಷ, ಸಾರ್ವಜನಿಕ ಶೌಚಾಲಯ ಕಟ್ಟಡಗಳಿಗಾಗಿ ರೂ.25 ಲಕ್ಷ, ಸ್ಮಶಾನ ಅಭಿವೃದ್ದಿಗಾಗಿ ರೂ.25 ಲಕ್ಷ, ನೈರ್ಮಲ್ಯ ವಾಹನ ಹಾಗೂ ಸಲಕರಣೆ ಖರೀದಿಗಾಗಿ ರೂ.80 ಲಕ್ಷ, ಘನತ್ಯಾಜ್ಯ ವಸ್ತು ನಿರ್ವಹಣೆ ಘಟಕದ ಅಭಿವೃದ್ದಿಗೆ ರೂ.50 ಲಕ್ಷ, ನೀರು ಸರಬರಾಜು ಕಟ್ಟಡಗಳ ನಿರ್ಮಾಣ ಮತ್ತು ಸರಬರಾಜು ಅಭಿವೃದ್ದಿ ಕಾಮಗಾರಿ ಮತ್ತು ಯಂತ್ರೋಪಕರಣ ಖರೀದಿಗೆ ರೂ.1.50 ಕೋಟಿ, ಪಾರ್ಕ್ ಅಭಿವೃದ್ದಿಗಾಗಿ ರೂ.30 ಲಕ್ಷ, ಪುರಸಭೆ ಅಧಿಕಾರಿ ಮತ್ತು ಸಿಬ್ಬಂದಿಗಳ ವೇತನ ಮತ್ತು ಭತ್ಯೆಗೆ ರೂ.2.03 ಕೋಟಿ, ವಿದ್ಯುತ್ ಶುಲ್ಕ, ಬೀದಿದೀಪ, ನೀರು ಸರಬರಾಜಿಗೆ ರೂ.1.78 ಕೋಟಿ, ನೈರ್ಮಲ್ಯ ಹೊರಗುತ್ತಿಗೆ ನಿರ್ವಹಣೆ, ವಾಹನ ಬಾಡಿಗೆ. ಎಪೇರಿ ಮತ್ತು ಇಂಧನ ವೆಚ್ಚಕ್ಕಾಗಿ ರೂ.85 ಲಕ್ಷ, ನೀರು ಸರಬರಾಜು ಹೊರಗುತ್ತಿಗೆ ನಿರ್ವಹಣೆ, ಪಂಪ್ಹೌಸ್ ದುರಸ್ಥಿ ಮತ್ತು ನಿರ್ವಹಣೆಗೆ ರೂ.89 ಲಕ್ಷ, ವಿಮೆ ಪ್ರಾಣಭತ್ಯೆ, ಜಾಹಿರಾತು, ಕಚೇರಿ ಇತರೆ ವೆಚ್ಚಗಳಿಗಾಗಿ ರೂ.72.50 ಲಕ್ಷ ವೆಚ್ಚದ ಅಂದಾಜಿದೆ ಎಂದು ಪೂರಕ ಮಾಹಿತಿ ಒದಗಿಸಿದರು.
ಒಟ್ಟಾರೆ ಪುರಸಭೆಗೆ 2022-23 ನೇ ಸಾಲಿಗೆ ಪಟ್ಟಣದ ಸರ್ವತೋಮುಖ ಅಭಿವೃದ್ದಿ ಕಾರ್ಯಗಳು ಸೇರಿದಂತೆ ರೂ.65 ಲಕ್ಷ ಉಳಿತಾಯ ಬಜೆಟ್ನ ವರದಿಯನ್ನು ಮಂಡಿಸಿದರು.
ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷೆ ಮೀನಾಕ್ಷಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ರಾಜು, ಮುಖ್ಯಾಧಿಕಾರಿ ಕಲಾವತಿ ಮತ್ತು ಎಲ್ಲಾ ಸದಸ್ಯರು, ಸದಸ್ಯೆಯರು ಹಾಗೂ ಪುರಸಭೆ ಸಿಬ್ಬಂದಿ ಇದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g