ಲಾರಿ ಚಾಲಕನಿಗೆ ಥಳಿಸಿ ದರೋಡೆ, ಮೂವರ ಬಂಧನ
1 min read
ಕಡೂರು: ರಾತ್ರಿವೇಳೆ ವಿಶ್ರಾಂತಿ ಪಡೆಯುತ್ತಿದ್ದ ಲಾರಿ ಚಾಲಕನಿಗೆ ಥಳಿಸಿ ಹಣ, ಮೊಬೈಲ್ ಕಸಿದು ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಕಡೂರು ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಶಿವಮೊಗ್ಗದ ಲಾರಿ ಚಾಲಕ ನಿಸಾರ್ ಅಹಮದ್ ಜನವರಿ 18 ರಂದು ಹುಣಸೂರು ಪಟ್ಟಣದಲ್ಲಿ ಟಿಂಬರ್ ಲೋಡ್ ಇಳಿಸಿ ವಾಪಸ್ ಶಿವಮೊಗ್ಗ ಕಡೆಗೆ ಬರುತ್ತಿದ್ದರು.
ಮಾರ್ಗಮಧ್ಯೆ ಕಡೂರು ಸಮೀಪ ನಿದ್ದೆ ಅವರಿಸಿದ್ದರಿಂದ ಕುಪ್ಪಾಳು ಹತ್ತಿರದ ಟೀ ಅಂಗಡಿಯೊಂದರ ಪಕ್ಕದಲ್ಲಿದ್ದ ಖಾಲಿ ಜಾಗದಲ್ಲಿ ಲಾರಿ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಬೆಳಗಿನ ಜಾವ 4-15 ರ ಸಮಯದಲ್ಲಿ ಲಾರಿಯ ಒಳಗೆ ನುಗ್ಗಿದ ಮೂವರು ಅಪರಿಚಿತರು ನಿಸಾರ್ ಅಹಮದ್ ಗೆ ಥಳಿಸಿ, ಚಾಕು ತೋರಿಸಿ ಬೆದರಿಸಿ, ಅವರ ಬಳಿಯಿದ್ದ 27,300 ರು. ನಗದು ಹಾಗೂ ಒಪ್ಪೋ ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ಚಾಲಕ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಆರೋಪಿಗಳ ಪತ್ತೆ ಸಂಬಂಧ ಚಿಕ್ಕಮಗಳೂರು ಎಸ್ಪಿ ಎಮ್.ಎಸ್.ಅಕ್ಷಯ್ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧಿಕ್ಷಕರಾದ ಶೃತಿ, ತರೀಕೆರೆ ಉಪವಿಭಾಗದ ಪೊಲೀಸ್ ಅಧೀಕ್ಷಕ ಏಗನಗೌಡರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಕಡೂರು ಹಾಗೂ ಸಖರಾಯಪಟ್ಟಣ ಪೊಲೀಸ್ ಅಧಿಕಾರಿಗಳಿದ್ದ ತಂಡ ಆರೋಪಿಗಳು ಸುಲಿಗೆ ಮಾಡಿದ್ದ ಮೊಬೈಲ್ ಫೋನಿನ ಸಿಡಿಆರ್ ಮತ್ತು ಐಎಂಇಐ ನಂಬರಿನ ಜಾಡು ಹಿಡಿದು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ತುಮಕೂರು ಜಿಲ್ಲೆಯ ಮೋಹನ್, ಮಂಡ್ಯದ ಕೆ.ಆರ್.ಪೇಟೆಯ ಭರತ್, ಬೆಂಗಳೂರಿನ ಸೂರಜ್ ಕುಮಾರ್ ಮಿಶ್ರಾ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರೆಲ್ಲರೂ 20 ವರ್ಷ ವಯಸ್ಸಿನವರು. ಆರೋಪಿಗಳಿಂದ ಬಟನ್ ಚಾಕು, ಚಾಲಕನಿಂದ ಸುಲಿಗೆ ಮಾಡಿದ್ದ ಮೊಬೈಲ್ , 5000 ರು.ನಗದು ಮತ್ತು ಕೃತ್ಯಕ್ಕೆ ಉಪಯೋಗಿಸಿದ್ದ ಪಲ್ಸರ್ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ. ತ್ವರಿತವಾಗಿ ಆರೋಪಿಗಳನ್ನು ಪತ್ತೆ ಹಚ್ಚಿ ದರೋಡೆ ಪ್ರಕರಣವನ್ನು ಬೇಧಿಸಿದ ಪೊಲೀಸರ ತಂಡದ ಕಾರ್ಯದಕ್ಷತೆಗೆ ಎಸ್ಪಿ ಅಕ್ಷಯ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g