ಪ್ರಕೃತಿ ಮಡಿಲಲ್ಲಿ ಮೋಜು-ಮಸ್ತಿಗಾಗಿ ರೋಪ್ ವೇ, ಇದು ಮೂರ್ಖತನದ ಪರಮಾವಧಿ : ಕಾಫಿನಾಡಿಗರು ಕಿಡಿ
1 min read
ಚಿಕ್ಕಮಗಳೂರು: ರಾಜ್ಯದ ಆಕರ್ಷಣಿಯ ಕೇಂದ್ರ ಬಿಂದು, ಜಿಲ್ಲೆಯ ಹೆಮ್ಮೆಯಾಗಿರುವಂತಹಾ ತಾಲೂಕಿನ ಮುಳ್ಳಯ್ಯನಗರಿಯಲ್ಲಿ ರೋಪ್ ನಿರ್ಮಾಣ ಮಾಡುವುದು ಮೂರ್ಖತನದ ಪರಮಾವಧಿ ಎಂದು ಜಿಲ್ಲೆಯ ಪರಿಸರವಾದಿಗಳು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮೊನ್ನೆ ನಡೆದ ಬಜೆಟ್ನಲ್ಲಿ ಸರ್ಕಾರ ಪ್ರವಾಸೋಧ್ಯಮವನ್ನ ಉತ್ತೇಜಿಸುವ ಸಲುವಾಗಿ ತಾಲೂಕಿನ ಮುಳ್ಳಯ್ಯನಗಿರಿಯಲ್ಲಿ ರೋಪ್ ವೇ ನಿರ್ಮಿಸುವುದಾಗಿ ಘೋಷಿಸಿದೆ. ಆದರೆ, ಸರ್ಕಾರದ ಈ ನಡೆಗೆ ಪ್ರಕೃತಿ ಪ್ರಿಯರು, ಪ್ರಕೃತಿಯ ಮಹತ್ವ ಅರಿತವರು ಹಾಗೂ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿ ಮುಳ್ಳಯ್ಯನಗಿರಿಗೆ ರೋಪ್ ವೇ ಬೇಡವೇ ಬೇಡ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.
ಮುಳ್ಳಯ್ಯನಗಿರಿ ಕೇವಲ ಬೆಟ್ಟಗುಡ್ಡವಷ್ಟೆ ಅಲ್ಲ. ಅದು ಜಿಲ್ಲೆಯ ದೇಶ-ರಾಜ್ಯ-ಜಿಲ್ಲೆಯ ಹೆಮ್ಮೆ. ಅಪರೂಪದ ಸೌಂದರ್ಯ. ಆ ಸೌಂದರ್ಯವನ್ನ ನಾವೇ ಉಳಿಸಿ-ಬೆಳೆಸಬೇಕೋ ವಿನಃ ಹಾಲು-ತುಪ್ಪ ಬಿಡಬಾರದು. ಇರೋದನ್ನ ಕಳೆದುಕೊಳ್ಳುವುದು ಸುಲಭ. ಗಳಿಸೋದು ಕಷ್ಟ. ಅಸರಲ್ಲೂ ಪ್ರಕೃತಿಯನ್ನ ಕಳೆದುಕೊಂಡರೇ ಮತ್ತೆ ಗಳಿಸೋದು ಅಸಾಧ್ಯ. ಆದರೆ ಸರ್ಕಾರ ಆ ಸೌಂದರ್ಯವನ್ನ ಹಾಳು ಮಾಡುವ ಶಂಕುಸ್ಥಾಪನೆಗೆ ಮುಂದಾದಂತಿದೆ. ಹಾಗಾಗಿ, ಸರ್ಕಾರ ಕೂಡಲೇ ಮುಳ್ಳಯ್ಯನಗಿರಿಯಲ್ಲಿ ರೋಪ್ ವೇ ಯೋಜನೆಯನ್ನ ಕೂಡಲೇ ಕೈ ಬಿಡಬೇಕೆಂದು ಒತ್ತಾಯಿಸಿದ್ದಾರೆ. ಯಾಕಂದರೆ, ಒಂದು ವೇಳೆ ಮುಳ್ಳಯ್ಯನಗಿರಿಯಲ್ಲಿ ರೋಪ್ ವೇ ನಿರ್ಮಾಣ ಮಾಡಿದ್ದೇ ಆದಲ್ಲಿ ಭವಿಷ್ಯದ ಪೀಳಿಗೆಗೆ ಮುಳ್ಳಯ್ಯನಗಿರಿ ಮುಳ್ಳಯ್ಯನಗಿರಿಯಾಗಿ ಉಳಿಯೋದಿಲ್ಲ ಅನ್ನೋದು ಪರಿಸರವಾದಿಗಳು ಹಾಗೂ ಜಿಲ್ಲೆಯ ಜನರ ಆತಂಕ.
ಮುಳ್ಳಯ್ಯನಗಿರಿಯ ಯಾವ ಗುಡ್ಡದಲ್ಲಿ ನಿಂತು ನೋಡಿದರೂ ಕಣ್ಣು ಹಾಯಿಸದಲೆಲ್ಲಾ ಹಚ್ಚ ಹಸಿರಿನ ಸೊಬಗೇ ಕಾಣುತ್ತೆ. ಇಲ್ಲಿನ ಬೆಟ್ಟಗುಡ್ಡಗಳ ಸಾಲು ಕಣ್ಣಿನ ದೃಷ್ಠಿ ಮುಗಿದರೂ ಮುಗಿಯಲ್ಲ. ಇಲ್ಲಿನ ಸೌಂದರ್ಯವನ್ನ ಎಷ್ಟು ಹಾಡಿ-ಹೊಗಳಿದರು ಕಡಿಮೆಯೇ. ಬರೆಯೋಕೆ ಪುಟ ಸಾಲದು. ಹೇಳೋಕೆ ಪದ ಸಾಲದಂತಹಾ ಸುಂದರ ಸೊಬಗು. ಇಂಹತಾ ಪ್ರಕೃತಿಯ ಮಡಿಲಲ್ಲಿ ಸರ್ಕಾರ ರೋಪ್ ವೇ ನಿರ್ಮಾಣ ಮಾಡ ಹೊರಟಿರೋದು ಮೂರ್ಖತನದ ಪರಮಾವಧಿ ಎಂದು ಪರಿಸರವಾದಿಗಳು ಹಾಗೂ ಪ್ರಕೃತಿಯ ಮಹತ್ವ ಅರಿತಿರೋ ಸ್ಥಳಿಯರು ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆಪ್ರವಾಸೋದ್ಯಮ ಅಭಿವೃದ್ಧಿಯ ಹೆಸರಲ್ಲಿ ಇಲ್ಲಿನ ಬೆಟ್ಟಗುಡ್ಡಗಳನ್ನ ಅಗೆದರೇ ಈ ಸೌಂದರ್ಯ ಭವಿಷ್ಯದ ಪೀಳಿಗೆಗೆ ಉಳಿಯಲ್ಲ. ಹಾಗಾಗಿ, ಪರಿಸರವಾದಿಗಳು ಹಾಗೂ ಕೆಲ ಸ್ಥಳಿಯರು ಮುಳ್ಳಯ್ಯನಗಿರಿಯಲ್ಲಿ ರೋಪ್ವೇ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ವಿಶ್ವದ 25 ಪಾರಂಪರಿಕ ಸುಂದರ ತಾಣಗಳಲ್ಲಿ ಪಶ್ಚಿಮಘಟ್ಟಗಳೂ ಕೂಡ ಒಂದು. ದೇಶದ ಆರು ರಾಜ್ಯಗಳಲ್ಲಿ ಹಾದುಹೋಗಿರೋ ವೆಸ್ಟ್ರನ್ ಗಾಡ್ಸ್ನಲ್ಲಿ ರಾಜ್ಯದ್ದು ಬಹುಪಾಲು. ಅದರಲ್ಲಿ ಕಾಫಿನಾಡು ಕೂಡ. ಆದರೆ, ಜಗತ್ತಿನ ಅದ್ಭುತಗಳಲ್ಲಿ ಒಂದಾಗಿರೋ ಇಂತಹಾ ಸೌಂದರ್ಯದ ಬುಡದಲ್ಲಿ ಜೆಸಿಬಿ, ಇಟಾಚಿಗಳು ತನ್ನ ಅಬ್ಬರ ತೋರಿದರೆ ಪ್ರಕೃತಿ ಮಂಕಾಗುತ್ತದೆ. ಸಾಲದಕ್ಕೆ ಮುಳ್ಳಯ್ಯನಗಿರಿಯಲ್ಲಿ ಮೂರ್ನಾಲ್ಕು ನದಿಗಳ ಉಗಮ ಸ್ಥಾನವಿದೆ. ವರ್ಷಪೂರ್ತಿ ನೀರನ್ನ ಹಿಡಿದಿಟ್ಟುಕೊಂಡು ಹರಿಸೋ ಶೋಲಾ ಕಾಡುಗಳು ಇವೆ. ಲಕ್ಷಾಂತರ ಪ್ರಾಣಿ-ಪಕ್ಷಿಗಳ ಆವಾಸ ಸ್ಥಾನ ಕೂಡ. ಅಪರೂಪದ ಸಸ್ಯಪ್ರಭೇದವೂ ಯತೇಚ್ಛವಾಗಿದೆ. ಇಂತಹಾ ಜಾಗದಲ್ಲಿ ಮೋಜು-ಮಸ್ತಿಗೆಂದು ಪ್ರವಾಸೋಧ್ಯಮ ಅಭಿವೃದ್ಧಿಯ ಹೆಸರಲ್ಲಿ ರೋಪ್ವೇ ನಿರ್ಮಾಣಕ್ಕೆ ಸ್ಥಳಿಯರ ವಿರೋಧವಿದೆ. ಸಾವಿರಾರು ಕೋಟಿ ಸುರಿದರು ಇಲ್ಲಿನ ಒಂದು ಬೆಟ್ಟ ನಿರ್ಮಿಸಲು ಸಾಧ್ಯವಿಲ್ಲ, ಹೀಗಿರುವಾಗ ಪ್ರಕೃತಿಯ ವರವಾಗಿರೋ ಇಲ್ಲಿನ ನೈಸರ್ಗಿಕ ಬೆಟ್ಟಗಳನ್ನ ಅಗೆದು ರೋಪ್ ವೇ ಮಾಡುವುದು ಎಷ್ಟು ಸರಿ ಎಂದು ಸ್ಥಳಿಯರು ಪ್ರಶ್ನಿಸಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g