ಬಫರ್ ಝೋನ್, ಪರಿಸರ ಸೂಕ್ಷ್ಮ ವಲಯ ಯೋಜನೆಗೆ ವಿರೋಧ, ದಯಾಮರಣಕ್ಕೆ ಅನುಮತಿ ಕೋರಿ ರಾಷ್ಟ್ರಪತಿಗೆ ಪತ್ರ
1 min read
ಎನ್.ಆರ್.ಪುರ: ಮಲೆನಾಡಿನಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಭದ್ರಾ ಹುಲಿ ಯೋಜನೆಯ ಬಫರ್ ಝೋನ್ ಹಾಗೂ ಪರಿಸರ ಸೂಕ್ಷ್ಮ ವಲಯ ಯೋಜನೆಗೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಜನರು ತೀವ್ರ ವಿರೋಧ ವ್ಯಕ್ತಪಡಿಸಿ ಹಲವು ಹಳ್ಳಿಯ ನೂರಾರು ಜನರು ರಾಷ್ಟ್ರಪತಿಗೆ ಪತ್ರ ರವಾನಿಸಿದ್ದಾರೆ.
ನರಸಿಂಗರಾಜಪುರ ತಾಲೂಕಿನ ಸಾರ್ಯ, ಸಾಲೂರು, ಹೆನ್ನಂಗಿ, ಬೆಳ್ಳಂಗಿ, ಅಳೆಹಳ್ಳಿ, ಆಡುವಳ್ಳಿ, ಕೊಳಲೆ, ಮುದುಗುಣಿ, ಬಾಳೆಗದ್ದೆ, ನಂದಿಗಾವೆ, ಬೈರಾಪುರ ಗ್ರಾಮಗಳನ್ನು ಭದ್ರಾ ಹುಲಿ ಯೋಜನೆಯ ಬಫರ್ ಯೋಜನೆಗೆ ಸೇರಿಸುವುದನ್ನು ವಿರೋಧಿಸಿರುವ ಗ್ರಾಮಸ್ಥರು ಸಾಮೂಹಿಕ ದಯಾ ಮರಣಕ್ಕೆ ಒಪ್ಪಿಗೆ ನೀಡುವಂತೆ ಕೋರಿ ಬುಧವಾರ ರಾಷ್ಟ್ರಪತಿಗಳಿಗೆ ಪೋಸ್ಟ್ ಮೂಲಕ ಪತ್ರ ರವಾನಿಸಿದ್ದಾರೆ.
51 ಗ್ರಾಮಗಳು ಭದ್ರಾ ಹುಲಿ ಯೋಜನೆಯ ಬಫರ್ ಝೋನ್ ಹಾಗೂ ಪರಿಸರ ಸೂಕ್ಷ್ಮ ವಲಯಗಳ ವ್ಯಾಪ್ತಿಗೆ ಬರುತ್ತವೆ. ಇದರಿಂದ ನರಸಿಂಹರಾಜಪುರ ತಾಲೂಕಿನ ಜನರು ಒಕ್ಕಲೇಳಬೇಕಿದೆ. 8000 ಕ್ಕೂ ಹೆಚ್ಚಿನ ಕುಟುಂಬಗಳು ಈ ವ್ಯಾಪ್ತಿಗೆ ಬರುತ್ತವೆ. ಹುಲಿ ಯೋಜನೆಯನ್ನು ವಿರೋಧಿಸಿ ಈ ಹಿಂದೆ ದೊಡ್ಡಮಟ್ಟದ ಪ್ರತಿಭಟನೆ ನಡೆಸಿದ್ದೇವೆ. ಸರ್ಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ನಮ್ಮ ನೋವಿಗೆ ಸ್ಪಂದಿಸುತ್ತಿಲ್ಲ. ಯೋಜನೆ ಜಾರಿಯಾದರೆ ಮನುಷ್ಯ ಹಾಗೂ ವನ್ಯಜೀವಿಗಳ ನಡುವೆ ಭಾರೀ ಸಂಘರ್ಷ ಎದುರಾಗಲಿದೆ. ಈ ಹಿಂದೆಯೂ ಇಂತಹ ಹಲವಾರು ಯೋಜನೆಗಳಲ್ಲಿ ಒಕ್ಕಲೆಬ್ಬಿಸಿದ್ದ ಜನರಿಗೆ ಈ ಯೋಜನೆಯ ವ್ಯಾಪ್ತಿಗೆ ಒಳಪಡುವ ಗ್ರಾಮಗಳಲ್ಲಿ ಪುನರ್ ವಸತಿ ಕಲ್ಪಿಸಲಾಗಿತ್ತು. ಈಗ ಮತ್ತೊಮ್ಮೆ ಒಕ್ಕಲೆಬ್ಬಿಸಲು ಮುಂದಾಗಿದೆ. ಸರ್ಕಾರ ಯೋಜನೆ ಕುರಿತಾಗಿ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡು ನಮ್ಮನ್ನು ಅತಂತ್ರ ಸ್ಥಿತಿಗೆ ತಂದು ನಿಲ್ಲಿಸಿದೆ. ಈ ಯೋಜನೆ ತಡೆಹಿಡಿಯಬೇಕು ಇಲ್ಲವೇ ನಮಗೆ ಸಾಮೂಹಿಕ ದಯಾಮರಣಕ್ಕೆ ಒಪ್ಪಿಗೆ ಸೂಚಿಸಬೇಕು ಎಂದು ರಾಷ್ಟ್ರಪತಿಗಳಿಗೆ ರವಾನಿಸಿದ ಪತ್ರದಲ್ಲಿ ಬರೆಯಲಾಗಿದೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g