ನಗರದಲ್ಲಿ ಉಚಿತ ಆರೋಗ್ಯತಪಾಸಣೆ-ಚಿಕಿತ್ಸಾ ಶಿಬಿರ
1 min readಚಿಕ್ಕಮಗಳೂರು: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಗರದ ಎಐಟಿ ಕಾಲೇಜು ಆವರಣದಲ್ಲಿ ಶಿಬಿರವನ್ನು ಆಯೋಜಿಸಲಾಗಿದ್ದು, ಶಿಬಿರದಲ್ಲಿ ವಿವಿಧ ಪ್ರತಿಷ್ಠಿತ ಆಸ್ಪತ್ರೆಗಳಾದ ಎಐಟಿ ವೈದ್ಯಕೀಯ ಕಾಲೇಜು, ಕಿದ್ವಾಯಿ, ಯನಪೋಯ, ನಿಮ್ಹಾನ್ಸ್, ಬಿಜಿಎಸ್ ಒಕ್ಕಲಿಗ ದಂತವೈದ್ಯ ಕಾಲೇಜು ತಜ್ಞ ವೈದ್ಯರು ಮತ್ತು ಸಿಬ್ಬಂದಿಗಳು ಪಾಲ್ಗೊಳ್ಳಲಿದ್ದಾರೆ. ಅವರುಗಳನ್ನು ಕ್ಷೇತ್ರದ ಶಾಸಕರಾದ ಸಿ.ಟಿ.ರವಿ ಸಂಪರ್ಕಿಸಿ ಆರೋಗ್ಯ ತಪಾಸಣೆ ಶಿಬಿರದ ವ್ಯವಸ್ಥೆಮಾಡಿದ್ದು, ಆರೋಗ್ಯ ತಪಾಸಣೆಗೊಳಗಾಗುವ ಸಾರ್ವಜನಿಕರು ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಈಗಾಗಲೇ ನೋಂದಣಿ ಕಾರ್ಯಆರಂಭಿಸಲಾಗಿದೆ. ವಿಧಾನಸಭಾ ಕ್ಷೇತ್ರದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೋಂದಣಿ ಆರಂಭಿಸಲಾಗಿದೆ ಹಾಗೇ ನಗರದ ಪ್ರದೇಶದ ಪ್ರತೀ ವಾರ್ಡ್ಗಳಲ್ಲಿ ನಗರಸಭೆಯಿಂದ ನೋಂದಣಿ ಕಾರ್ಯ ಆರಂಭವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಹೆಸರು ನೋಂದಾಯಿಸಿಕೊಂಡು ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ತಪಾಸಣಾ ಶಿಬಿರದಲ್ಲಿ 40 ರಿಂದ 50 ಕೌಂಟರ್ಗಳನ್ನು ತೆರೆಯಲಾಗುತ್ತಿದ್ದು, ಯಾವ ವ್ಯಕ್ತಿಗೆ ಯಾವ ಚಿಕಿತ್ಸೆಯ ಅಗತ್ಯವಿದೆ ಎಂಬುದನ್ನು ಗಮನಿಸಿ ಆಯಾ ಕೌಂಟರ್ಗಳಿಗೆ ಕಳುಹಿಸಿಕೊಡÀಲಾಗುವುದು. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರಿಗೆ ಆಯಾ ಆಸ್ಪತ್ರೆಗೆ ಕಳುಹಿಸಿಕೊಟ್ಟು, ಆಯುಷ್ಮಾನ್ ಭಾರತ್ ಯೋಜನೆಯಡಿ ಹೆಚ್ಚಿನ ಚಿಕಿತ್ಸೆ ಕೊಡಿಸಲಾಗುವುದು ಎಂದರು.
ಜಿಲ್ಲೆಯಲ್ಲಿ ಶೇ.60ರಷ್ಟು ಜನರು ತಾವು ಕಾಯಿಲೆಗೆ ಒಳಗಾಗಿದ್ದೇವೆ ಎಂಬುದು ತಿಳಿದಿರುವುದಿಲ್ಲ, ಶೇ.30-40 ರಷ್ಟು ಜನರಿಗೆ ಕಾಯಿಲೆ ಇದೆ. ಚಿಕಿತ್ಸೆ ಪಡೆಯಬೇಕೆಂಬ ತಿಳಿವಳಿಕೆ ಇದ್ದರು ಚಿಕಿತ್ಸೆ ಪಡೆಯಲು ಮುಂದಾಗುವುದಿಲ್ಲ. ಇದರಿಂದ ಅನೇಕರು ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದನ್ನು ತಡೆಗಟ್ಟುವ ಉದ್ದೇಶದಿಂದ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಶಿಬಿರದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸುವ ಉದ್ದೇಶವನ್ನು ಹೊಂದಲಾಗಿದೆ. ರಕ್ತದಾನ ಮಾಡುವವರು ಹೆಸರು ನೋಂದಾಯಿಸಿಕೊಳ್ಳಬಹುದಾಗಿದ್ದು, ಕೃತಕ ಅಂಗಾಂಗ ಜೋಡಣೆ ಬಗ್ಗೆ ಸಂಬಂಧಪಟ್ಟ ಸಂಸ್ಥೆಯೊಂದಿಗೆ ಚರ್ಚಿಸಲಾಗಿದೆ. ಅವರು ಶಿಬಿರದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೃಹತ್ ಶಿಬಿರದಲ್ಲಿ ಜಿಲ್ಲಾಡಳಿತ ಕೈಜೋಡಿಸಲಿದ್ದು, ಸರ್ಕಾರದರಿಂದ ಅಧಿಕೃತ ಆದೇಶವನ್ನು ಕಾಯುತ್ತಿದ್ದೇವೆಂದರು. ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಜಿಲ್ಲೆಯಲ್ಲಿ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಿದ್ದು, 41,803 ಜನರಿಗೆ ಅಧಿಕರಕ್ತದೊತ್ತಡ, 58315 ಮಂದಿಗೆ ಸಕ್ಕರೆಖಾಯಿಲೆ, 1102 ಜನರಿಗೆ ಕ್ಯಾನ್ಸರ್ ಇರುವುದು ಕಂಡುಬಂದಿದೆ. ಕೆಲವರಿಗೆ ಕ್ಯಾನ್ಸರ್ 2ನೆ ಹಂತದಲ್ಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆಂದರು.
ಪ್ರತಿ ಗ್ರಾಮ ಪಂಚಾಯತಿಗಳಲ್ಲಿ 500 ರಿಂದ 1ಸಾವಿರ ಜನರನ್ನು ನೋಂದಣಿ ಮಾಡಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ ಹಾಗೇ ಶಿಬಿರಕ್ಕೆ ಬರುವ ಜನರಿಗೆ ಮೂಲಭೂತ ಸೌಲಭ್ಯ ಸೇರಿದಂತೆ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಸಾರ್ವಜನಿಕರ ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದರು.
ಶಿಬಿರದಲ್ಲಿ 25 ಸಾವಿರ ಜನರು ಆರೋಗ್ಯ ತಪಾಸಣೆಗೆ ಒಳಗಾಗುವ ಸಾಧ್ಯತೆಗಳಿವೆ. 250ರಿಂದ 300 ಮಂದಿ ಆರೋಗ್ಯ ಸಿಬ್ಬಂದಿ, 500 ಪ್ಯಾರಮೆಡಿಕಲ್ ವಿದ್ಯಾರ್ಥಿಗಳು ಸೇವೆಗೆ ಮುಂದಾಗಲಿದ್ದಾರೆಂದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g