ಮಳಲೂರು ಏತ ನೀರಾವರಿ ಯೋಜನೆಗೆ ಭೂಮಿ ಕೊಟ್ಟ ರೈತರಿಗೆ ಇನ್ನೂ ಸಿಕ್ಕಿಲ್ಲ ಪರಿಹಾರ
1 min readಚಿಕ್ಕಮಗಳೂರು: ಮಳಲೂರು ಏತ ನೀರಾವರಿ ಯೋಜನೆಗೆ ಭೂಮಿ ಕಳೆದುಕೊಂಡ ನೂರಾರು ಸಂತ್ರಸ್ತ ರೈತರಿಗೆ ಬರೋಬ್ಬರಿ 12 ವರ್ಷಗಳಿಂದ ಪರಿಹಾರ ಮಾತ್ರ ಇನ್ನೂ ಸಿಕ್ಕಿಲ್ಲ, ಮಾರ್ಚ್ ತಿಂಗಳ ಒಳಗೆ ಜನಪ್ರತಿನಿಧಿಗಳು ಅಧಿಕಾರಿಗಳು ಸಮಸ್ಯೆ ಪರಿಹರಿಸದಿದ್ದರೆ ಶಾಸಕರ ಮನೆ ಮುಂದೆ ಧರಣಿ ನಡೆಸುವುದಾಗಿ ರೈತರು ಎಚ್ಚರಿಸಿದ್ದಾರೆ.
ಮಳಲೂರು ಏತ ನೀರಾವರಿ ಯೋಜನೆ ಎಂದು ಮುಕ್ತಾಯ ಕಾಣುತ್ತೊ ಗೊತ್ತಿಲ್ಲ, ಜೊತೆಗೆ ಯೋಜನೆಗೆ ಭೂಮಿ ಕಳೆದುಕೊಂಡ ರೈತರ ಗೋಳು ಎಂದು ಮುಗಿಯುತ್ತೋ ಅದೂ ಗೊತ್ತಿಲ್ಲ. 12 ವರ್ಷವಾದರೂ ನೂರಾರು ಅನ್ನದಾತರಿಗೆ ಪರಿಹಾರ ಮಾತ್ರ ಸಿಗುತ್ತಿಲ್ಲ, 2012 ರಲ್ಲಿ ಮಳಲೂರು ಏತ ನೀರಾವರಿ ಯೋಜನೆ ಕಾಮಗಾರಿ ಆರಂಭದ ವೇಳೆ 140 ರೈತರ 40 ಕ್ಕೂ ಹೆಚ್ಚು ಎಕರೆ ಭೂಮಿಯನ್ನು ಸರ್ಕಾರ ಭೂಸ್ವಾಧೀನ ಮಾಡಿಕೊಂಡಿತ್ತು. ಆದರೆ ಬೆರಳೆಣಿಕೆಯಷ್ಟು ರೈತರಿಗೆ ಹೊರತುಪಡಿಸಿದರೆ ಇನ್ನೂ 105 ರೈತರಿಗೆ ಪರಿಹಾರ ಮಾತ್ರ ಇನ್ನೂ ಮರೀಚಿಕೆಯಾಗಿದೆ. ಬರೋಬ್ಬರಿ 12 ವರ್ಷಗಳು ಕಳೆದರೂ ಭೂಮಿಗೆ, ಬೆಳೆಗೆ ಪರಿಹಾರವಾಗಲಿ ಕೇಂದ್ರ ಸರ್ಕಾರದ ಆ್ಯಕ್ಟ್ ನಂತೆ ಬಡ್ಡಿಯೂ ಸಹಾ ಕೊಟ್ಟಿಲ್ಲ. ಏತ ನೀರಾವರಿ ಯೋಜನೆ ಕೈಗೆತ್ತಿಕೊಂಡಿರುವ ಕಾವೇರಿ ನೀರಾವರಿ ನಿಗಮ ಕೂಡಾ ರೈತರಿಗೆ ಯಾವುದೇ ಪರಿಹಾರ ಕೊಡುತ್ತಿಲ್ಲ ಜನಪ್ರತಿನಿಧಿಗಳಾಗಲಿ, ಜಿಲ್ಲೆಯ ಅಧಿಕಾರಿಗಳಾಗಲಿ ಅನ್ನದಾತರ ಜೊತೆ ನಿಲ್ಲುತ್ತಿಲ್ಲ. ಮೂಡಿಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಅಂಬಳೆ ಹೋಬಳಿಯ ಕದ್ರಿಮಿದ್ರಿ, ಕಂಬೀಹಳ್ಳಿ, ಬಿಗ್ಗನಹಳ್ಳಿ, ತಗಡೂರು , ಮಳಲೂರು ಸೇರಿದಂತೆ ಹಲವು ಗ್ರಾಮಗಳ ರೈತರು ಪರಿಹಾರಕ್ಕಾಗಿ ನಿತ್ಯ ಅಲೆದಾಡುವ ಪರಿಸ್ಥಿತಿ ಎದುರಾಗಿದೆ. ಜೊತೆಗೆ ರೈತರ ಜಾನುವಾರುಗಳಿಗೆ ಮೇವನ್ನಾದರೂ ಒದಗಿಸಿ ಎಂದು ಜನರು ಗೋಗರಿಯುತ್ತಿದ್ದಾರೆ. ಮಾರ್ಚ್ ವೇಳೆಗೆ ನೀರಿನ ಅಭಾವ ಸಹಾ ಬಿಗಡಾಯಿಸಲಿದೆ. ಅಷ್ಟರೊಳಗೆ ಪರಿಹಾರ ಕೊಡಿಸಬೇಕೆಂದು ರೈತ ಸೋಮೇಗೌಡ ಒತ್ತಾಯಿಸಿದರು. ತಪ್ಪಿದ್ದಲ್ಲಿ ಮೂಡಿಗೆರೆ ಶಾಸಕಿ ನಯನ ಮೋಟಮ್ಮ ಮನೆ ಎದುರು ಆಮರಣಾಮಂತ ಉಪವಾಸ ನಡೆಸುವ ಎಚ್ಚರಿಕೆಯನ್ನು ಅವರು ಕೊಟ್ಟಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g