ದೇವೀರಮ್ಮನ ಬೆಟ್ಟ ಹತ್ತಲು ತುದಿಗಾಲಲ್ಲಿರೋ ಭಕ್ತರು
1 min read
ಚಿಕ್ಕಮಗಳೂರು : ನಾಡಿನ ಸುಪ್ರಸಿದ್ಧ ಪ್ರವಾಸಿ ತಾಣ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ನೆಲೆ ನಿಂತಿರೋ ಶಕ್ತಿದೇವತೆ ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಬಿಂಡಿಗ ದೇವೀರಮ್ಮನ ಬೆಟ್ಟ ಹತ್ತಲು ಕ್ಷಣಗಣನೆ ಆರಂಭವಾಗಿದೆ. ಸಮುದ್ರಮಟ್ಟದಿಂದ ಸುಮಾರು 3800 ಅಡಿ ಎತ್ತರದ ಪಿರಮಿಡ್ ಆಕಾರದ ಬೆಟ್ಟದ ತುದಿಯಲ್ಲಿ ನೆಲೆಸಿರುವ ಆ ದೇವಿಯನ್ನ ನೋಡಲು ಇಂದು ಮಧ್ಯರಾತ್ರಿಯಿಂದಲೇ ಸಾವಿರಾರು ಜನ ಬೆಟ್ಟ ಹತ್ತಿ ಬೆಳಗ್ಗಿನ ಜಾವದ ಹೊತ್ತಿಗೆ ಗುಡ್ಡದ ತುದಿಯಲ್ಲಿ ನಿಂತಿರುತ್ತಾರೆ. ಪ್ರತಿ ವರ್ಷ ಈ ಬೆಟ್ಟವನ್ನ 50 ಸಾವಿರಕ್ಕೂ ಅಧಿಕ ಭಕ್ತರು ಹತ್ತಿ ದೇವಿಯನ್ನ ಕಂಡು ಪುಳಕಿತರಾಗುತ್ತಿದ್ದರು. ಆದರೆ, ಕಳೆದ ಎರಡ್ಮೂರು ವರ್ಷಗಳಿಂದ ಮಳೆ ಹಾಗೂ ಕೊರೋನಾ ಕಾರಣದಿಂದ ಬೆಟ್ಟ ಹತ್ತುವವರ ಸಂಖ್ಯೆ ತೀವ್ರ ಇಳಿಮುಖವಾಗಿತ್ತು. ಜಿಲ್ಲಾಡಳಿತ ಹಾಗೂ ದೇವಾಲಯದ ಆಡಳಿತ ಮಂಡಳಿ ಕೂಡ ಹೆಚ್ಚಿನ ಭಕ್ತರು ಬರದಂತೆ ಮನವಿ ಮಾಡಿತ್ತು. ಕೊನೆಗೆ ಜಿಲ್ಲಾಡಳಿತ ಸ್ಥಳಿಯರು ಮಾತ್ರ ಹತ್ತಬೇಕೆಂದು ಆದೇಶಿಸಿತ್ತು. ಆದರೆ, ಈ ವರ್ಷ ಮಳೆ ಹಾಗೂ ಕೊರೋನಾ ಎರಡೂ ಇಲ್ಲದ ಕಾರಣ ಈ ವರ್ಷ ಸುಮಾರು 80 ಸಾವಿರಕ್ಕೂ ಅಧಿಕ ಭಕ್ತರು ಬೆಟ್ಟ ಹತ್ತಬಹುದು ಎಂದು ಅಂದಾಜಿಸಲಾಗಿದೆ. ಕಳೆದ ಎರಡ್ಮೂರು ವರ್ಷಗಳಿಂದ ಬೆಟ್ಟದ ಭಕ್ತರು ಹಾಗೂ ದೇವರಿಗೆ ಹರಕೆ ಕಟ್ಟಿಕೊಂಡಿರೋ ಭಕ್ತರು ಈ ವರ್ಷ ಬೆಟ್ಟ ಹತ್ತಲು ಉತ್ಸುಕರಾಗಿದ್ದಾರೆ.
ಕೆಲವರು ಬೆಟ್ಟ ಹತ್ತುವಾಗ ಸೌದೆಯನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಮೇಲೆ ಹಾಕಿ ಹರಕೆ ತೀರಿಸುವ ಭಕ್ತರು ಇದ್ದಾರೆ. ಈ ವರ್ಷ ಹರಕೆ ಹೊತ್ತ ಭಕ್ತರು ಹರಕೆ ತೀರಿಸಲು ಬೆಟ್ಟ ಹತ್ತಿ ಬೆಟ್ಟದ ತಾಯಿಯನ್ನ ನೋಡಲು ಕಾತುರದಿಂದಿದ್ದಾರೆ. ಈಗಾಗಲೇ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಜಿಲ್ಲಾಡಳಿತ ಬೆಟ್ಟ ಹತ್ತುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಮುಂಜಾಗೃತ ಕ್ರಮಗಳನ್ನ ಕೈಗೊಂಡಿದೆ. ಚಿಕ್ಕಮಗಳೂರಿನಿಂದ ಮಲ್ಲೇನಹಳ್ಳಿಗೆ ಹೆಚ್ಚುವರಿ ಬಸ್ಗಳನ್ನೂ ಬಿಟ್ಟಿದೆ. ಪೊಲೀಸ್ ಇಲಾಖೆ ಕೂಡ ಬಿಗಿ ಬಂದೋಬಸ್ತ್ ಕಲ್ಪಿಸಿದ್ದು, ಒಂದು ಡಿ.ವೈ.ಎಸ್.ಪಿ, ಎಂಟು ಸರ್ಕಲ್ ಇನ್ಸ್ಪೆಕ್ಟರ್, 32 ಪಿ.ಎಸ್.ಐ, 87 ಎ.ಎಸ್.ಐ, 500ಕ್ಕೂ ಅಧಿಕ ಪೇದೆಗಳು, 62 ಹೋಂಗಾರ್ಡ್ ಹಾಗೂ 6 ಡಿ.ಎ.ಆರ್.ತುಗಡಿಗಳನ್ನ ನಿಯೋಜಿಸಲಾಗಿದೆ. ಭಾನುವಾರ ರಾತ್ರಿಯಿಂದ ಸೋಮವಾರ ಸಂಜೆವರೆಗೂ ಕಾಫಿನಾಡು ಭಕ್ತರು ಹಾಗೂ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುತ್ತೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g