ಅಭ್ಯರ್ಥಿ ಬಗ್ಗೆ ಮಾಹಿತಿ ಸಂಗ್ರಹಿಸಲು ಬಂದಿದ್ದ ವೀಕ್ಷಕರ ಎದುರೇ ಕಾಂಗ್ರೆಸ್ ಕಾರ್ಯಕರ್ತರ ಗಲಾಟೆ
1 min readಮುಂಬರೋ ವಿಧಾನಸಭಾ ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಬಂದಿದ್ದ ಕೆ.ಪಿ.ಸಿ.ಸಿ. ವೀಕ್ಷಕರ ಎದುರೇ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಪರಸ್ಪರ ಗಲಾಟೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ. ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಗಪೂರ್, ಜಿಲ್ಲಾಧ್ಯಕ್ಷ ಅಂಶುಮಂತ್, ಕಾಂಗ್ರೆಸ್ ಮುಖಂಡರಾದ ಹೆಚ್.ಎಸ್.ಪುಟ್ಟಸ್ವಾಮಿ ಸೇರಿದಂತೆ ವಿವಿಧ ಮುಖಂಡರು ಹೈಕಮಾಂಡ್ ಆದೇಶದ ಮೇರೆಗೆ ವೀಕ್ಷಕರಾಗಿ ಆಗಮಿಸಿದ್ದರು. ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಪದಾಧಿಕಾರಿಗಳಿಂದ ಪಕ್ಷದ ಅಭ್ಯರ್ಥಿಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಾಗುತ್ತಿತ್ತು. 300-350 ಕಾರ್ಯಕರ್ತರಿಗೆ ತಮ್ಮ ಅಭಿಪ್ರಾಯವನ್ನ ಲಿಖಿತವಾಗಿ ತಿಳಿಸಲು ಅವಕಾಶವಿತ್ತು. ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳ ಪಟ್ಟಿ ನೀಡಿ, ಅವರ ಹೆಸರಿನ ಮುಂದೆ ತಮ್ಮ ಅಭಿಪ್ರಾಯ ತಿಳಿಸಲು ಸೂಚಿಸಲಾಗಿತ್ತು.
ಈ ವೇಳೆ, ನಯನಾ ಮೋಟಮ್ಮ ಪರ ಮತ್ತು ವಿರುದ್ಧ ಗುಂಪುಗಳ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ನಯನಾ ಮೋಟಮ್ಮ ಅವರ ಪರವಾಗಿ ಇರುವವರಿಗೆ ಹೆಚ್ಚು ಅಭಿಪ್ರಾಯ ತಿಳಿಸಲು ಅವಕಾಶ ನೀಡಿದ್ದೀರಿ. ಅವರ ವಿರುದ್ಧದ ಕಾರ್ಯಕರ್ತರ ಹೆಸರುಗಳನ್ನ ಬಿಟ್ಟಿದ್ದೀರಾ ಎಂದು ನಯನಾ ಮೋಟಮ್ಮ ವಿರುದ್ಧ ಗುಂಪಿನ ಕಾರ್ಯಕರ್ತರು, ಮುಖಂಡರು ಆರೋಪಿಸಿ ಜಿಲ್ಲಾಧ್ಯಕ್ಷರ ಜೊತೆ ವಾಗ್ವಾದಕ್ಕಿಳಿದಿದ್ದರು. ಈ ವೇಳೆ, ಪರಸ್ಪರ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು, ಕೈ-ಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು. ಈ ಸಂದರ್ಭದಲ್ಲಿ ಮುಖಂಡರು ಮಧ್ಯಪ್ರವೇಶಿಸಿ ಗಲಾಟೆಯನ್ನ ನಿಯಂತ್ರಿಸಿದ್ದಾರೆ. ಈ ಮಧ್ಯೆ ಮಾಜಿ ಸಚಿವೆ ಮೋಟಮ್ಮನವರೇ ಅಭ್ಯರ್ಥಿಯಾಗಬೇಕು ಎಂದು ಅನೇಕ ಮುಖಂಡರು, ಕಾರ್ಯಕರ್ತರು ವೀಕ್ಷಕರೆದುರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ, ಮೂಡಿಗೆರೆ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ. ಟಿಕೆಟ್ ವಿಚಾರದಲ್ಲಿ ಬೂದಿ ಮುಚ್ಚಿದ ಕೆಂಡದಂತಿದ್ದ ಭಿನ್ನಾಭಿಪ್ರಾಯ ಇಂದು ವೀಕ್ಷಕರೆದುರೇ ಸ್ಫೋಟಗೊಂಡಿದೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g