ಕಾಫಿನಾಡ ದತ್ತಜಯಂತಿಗೆ ಸಂಭ್ರಮ ಹಾಗೂ ಶಾಂತಿಯುತವಾಗಿ ತೆರೆಬಿದ್ದಿದೆ
1 min read
ಚಿಕ್ಕಮಗಳೂರು. ತಾಲೂಕಿನ ಶ್ರೀಗುರು ಇನಾಂ ದತ್ತಾತ್ರೇಯ ಸ್ವಾಮಿ ಬಾಬಾಬುಡನ್ ದರ್ಗಾದ ಆವರಣದಲ್ಲಿ ರಾಜ್ಯ ಸರಕಾರ ನೇಮಿಸಿದ್ದ ಅರ್ಚಕರು ವ್ಯವಸ್ಥಾಪನಾ ಸಮಿತಿ ಮೇಲ್ವಿಚಾರಣೆಯಲ್ಲಿ ಗುರುವಾರ ದತ್ತಪಾದುಕೆಗಳಿಗೆ ಪೂಜೆ ನೆರವೇರಿಸುವುದರೊಂದಿಗೆ ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ನಡೆದ ದತ್ತಜಯಂತಿ ಕಾರ್ಯಕ್ರಮಕ್ಕೆ ಶಾಂತಿಯುತ ತೆರೆ ಬಿದ್ದಿದೆ. ದತ್ತಜಯಂತಿ ಹಿನ್ನೆಲೆ 11 ದಿನಗಳ ಹಿಂದೆ ದತ್ತಭಕ್ತರು ದತ್ತಮಾಲಾಧಾರಣೆ ಮಾಡಿದ್ದರು. ಅವರೆಲ್ಲಾ ಇಂದು ಇರುಮುಡಿ ಹೊತ್ತು ದತ್ತಪಾದುಕೆ ದರ್ಶನ ಪಡೆದು ಪುನೀತರಾದರು. ದತ್ತಜಯಂತಿಯ ಹಿನ್ನೆಲೆ ಬುಧವಾರ ನಗರದಲ್ಲಿ ಬೃಹತ್ ಶೋಭಾಯಾತ್ರೆ ನಡೆಯಿತು. ದತ್ತಜಯಂತಿ ಅಂಗವಾಗಿ ದತ್ತಾತ್ರೇಯ ಸ್ವಾಮಿ ಬಾಬಾಬುಡನ್ ದರ್ಗಾದ ಆವರಣದಲ್ಲಿ ಗುರುವಾರ ಹೋಮ ಹವನ ನೇರವೇರಿಸಲಾಗಿದ್ದು, ಗುಹೆಯಲ್ಲಿರಿಸಿದ್ದ ಪಾದುಕೆಗಳಿಗೆ ಅರ್ಚಕರು ಗುರುವಾರ ಪೂಜೆ ಸಲ್ಲಿಸಿದರು. ಮುಜರಾಯಿ ಇಲಾಖೆ ಆಯುಕ್ತರ ಆದೇಶದಂತೆ ವ್ಯವಸ್ಥಾಪನಾ ಸಮಿತಿ ಸದಸ್ಯರ ಮೇಲ್ವಿಚಾರಣೆಯಲ್ಲಿ ಪೂಜಾ ವಿಧಾನಗಳನ್ನು ನಡೆಸಲಾಯಿತು.
ಪಾದುಕೆಗಳ ದರ್ಶನಕ್ಕಾಗಿ ಗುರುವಾರ ಬೆಳಗ್ಗೆ ಜಿಲ್ಲೆ ಹಾಗೂ ರಾಜ್ಯದ ವಿವಿಧೆಡೆಯಿಂದ ವಿವಿಧ ವಾಹನಗಳಲ್ಲಿ ಆಗಮಿಸಿದ್ದ ದತ್ತ ಭಕ್ತರು ದತ್ತಾತ್ರೇಯ ಸ್ವಾಮಿ ಬಾಬಾಬುಡನ್ ದರ್ಗಾದ ಆವರಣಕ್ಕೆ ಆಗಮಿಸಿದ್ದರು. ಇರುಮುಡಿ ಹೊತ್ತಿದ್ದ ಭಕ್ತರು ಹೊನ್ನಮ್ಮನಹಳ್ಳದಲ್ಲಿ ಸ್ನಾನ ಮಾಡಿ ದತ್ತಾತ್ರೇಯರ ನಾಮಸ್ಮರಣೆಯೊಂದಿಗೆ ದತ್ತಪೀಠದತ್ತಕ್ಕೆ ತೆರಳಿದರು. ದತ್ತಾತ್ರೇಯ ಸ್ವಾಮಿ ಬಾಬಾಬುಡನ್ ದರ್ಗಾ, ಪೀಠದ ಆವರಣದಲ್ಲಿ ಅಳವಡಿಸಿದ್ದ ಬ್ಯಾರಿಕ್ಯಾಡ್ನಲ್ಲಿ ಸರತಿ ಸಾಲಿನಲ್ಲಿ ತೆರಳಿ ದತ್ತಪಾದುಕೆಗಳ ದರ್ಶನ ಪಡೆದುಕೊಂಡರು. ಇದೇ ಮೊದಲ ಬಾರಿಗೆ ರಾಜ್ಯ ಸರಕಾರ ವ್ಯವಸ್ಥಾಪನಾ ಸಮಿತಿ ಮೂಲಕ ತಾತ್ಕಲಿಕವಾಗಿ ನೇಮಿಸಿದ್ದ ಇಬ್ಬರು ಅರ್ಚಕರು ಪಾದುಕೆಗಳಿಗೆ ಪೂಜೆ ಸಲ್ಲಿಸಿದ್ದರು. ಹಾಗಾಗಿ ಪೀಠದೊಳಗೆ ತೆರಳಿದ ಭಕ್ತರು ಸಂತೋಷದಿಂದಲೇ ಪಾದುಕೆಗಳ ದರ್ಶನ ಪಡೆದು ಹೊರಬಂದರು. ದತ್ತಜಯಂತಿ ಅಂದರೆ ಒಂದು ರೀತಿ ಬೂದಿಮುಚ್ಚಿದ ಕೆಂಡದಂತೆ ಇರುತ್ತೆ. ಆದರೆ, 4000ಕ್ಕೂ ಅಧಿಕ ಪೊಲೀಸರ ಸರ್ಪಗಾವಲಿನಲ್ಲಿ ದತ್ತಜಯಂತಿಗೆ ಶಾಂತಿಯುತವಾಗಿ ತೆರೆಬಿದ್ದಿದ್ದು, ಜಿಲ್ಲೆಯ ಜನ ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g