ಜಯಂತಿ ಆಚರಣೆ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಬಾರದು : ಶಾಸಕ ಹೆಚ್.ಡಿ ತಮ್ಮಯ್ಯ
1 min readಚಿಕ್ಕಮಗಳೂರು : ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲಾ ಸಮುದಾಯಗಳು ಈ ಆಚರಣೆಯಲ್ಲಿ ಭಾಗವಹಿಸಬೇಕು ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಕರೆ ನೀಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಗಳ ಸಂಯುಕ್ತಾಶ್ರದಲ್ಲಿ ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಮಾಯಣ ಎಂಬ ಸಂಸ್ಕೃತ ಶ್ಲೋಕಗಳಿರುವ ಮಹಾಕಾವ್ಯದ ಸೃಷ್ಟಿಕರ್ತ ಮಹರ್ಷಿ ವಾಲ್ಮೀಕಿ ಎಂದು ಹೇಳುವುದಕ್ಕೆ ತುಂಬಾ ಸಂತೋಷವಾಗುತ್ತದೆ. ಮಹರ್ಷಿ ವಾಲ್ಮೀಕಿ ಎಂಬ ಹೆಸರು ಬರುವ ಮೊದಲು ರತ್ನಾಕರ ಎಂಬ ಹೆಸರಿನಿಂದ ಅವರನ್ನು ಕರೆಯುತ್ತಿದ್ದರು. ನಾರದ ಮುನಿಯಿಂದ ಆಶೀರ್ವಾದ ಪಡೆದ ನಂತರ 24,000 ಶ್ಲೋಕಗಳಿರುವ ರಾಮಾಯಣ ಎಂಬ ಮಹಾ ಕಾವ್ಯದ ಗ್ರಂಥವನ್ನು ರಚನೆ ಮಾಡಿರುವುದು ನಾವು ನೀವೆಲ್ಲ ನೆನಪಿನಲ್ಲಿ ಇಟ್ಟುಕೊಳ್ಳಬೇಕದ ವಿಷಯ. ನಮ್ಮ ಜಿಲ್ಲೆ, ನಮ್ಮ ರಾಜ್ಯದಲ್ಲಷ್ಟೆ ಅಲ್ಲದೆ ಉತ್ತರ ಪ್ರದೇಶ, ಬಿಹಾರದಲ್ಲೂ ಕೂಡ ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ಆಚರಣೆ ಮಾಡುತ್ತಿದ್ದಾರೆ ಎಂದು ಹೇಳಿದರು.
ಒಬ್ಬ ವ್ಯಕ್ತಿಯ ಹಿಂದೆ ಸಂಘರ್ಷಗಳಿದ್ದರೆ, ದುಃಖಗಳಿದ್ದರೆ, ಇಕ್ಕಟ್ಟು ಬಿಕ್ಕಟ್ಟುಗಳಿದ್ದರೆ ಅವುಗಳನ್ನೆಲ್ಲ ಮೆಟ್ಟಿನಿಂತರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಮಹರ್ಷಿ ವಾಲ್ಮೀಕಿ ಅವರ ಜೀವನ ಒಳ್ಳೆಯ ನಿದರ್ಶನ. ನಮ್ಮ ಜೀವನದ ಶ್ರೇಷ್ಠತೆ ನಿರ್ಧಾರವಾಗುವುದು ನಾವು ಯಾವೆಲ್ಲ ಒಳ್ಳೆ ಕೆಲಸಗಳನ್ನು ಮಾಡುತ್ತೇವೆ, ನಾವು ಹೇಗೆ ನಡೆದುಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಜೀವನ ಶ್ರೇಷ್ಠವಾಗಿರುತ್ತದೆ. ಈ ಜಯಂತಿಯನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲಾ ಸಮುದಾಯಗಳು ಈ ಆಚರಣೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಅಂಬೇಡ್ಕರ್, ಬಸವಣ್ಣ, ಬುದ್ಧ, ನಾರಾಯಣ ಗುರು, ವಾಲ್ಮೀಕಿ ಎಂತಹ ಎಲ್ಲರ ಜಯಂತಿಗಳಲ್ಲಿ ಸಾರ್ವಜನಿಕರನ್ನು ಒಗ್ಗೂಡಿಸಿ ಆಚರಣೆ ಮಾಡೋಣ ಇದು ಸಾರ್ವಜನಿಕರ ಜಯಂತಿಯಾಗಬೇಕು. ಯಾವುದೋ ಒಂದು ಸಮಾಜಕ್ಕೆ ಸೀಮಿತವಾಗಬಾರದು ಎಂದರು. ಯಾವುದೋ ಒಂದು ಸಮುದಾಯ ಅಥವಾ ಸಮಾಜಕ್ಕೆ ಮಾತ್ರ ಈ ಜಯಂತಿಗಳನ್ನು ಸೀಮಿತಗೊಳಿಸದೆ ಎಲ್ಲರೂ ಒಗ್ಗಟ್ಟಿನಿಂದ ಜಯಂತಿ ಆಚರಣೆ ಮಾಡುವಂತಹ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದು ತಿಳಿಸಿದರು.
ವಾಲ್ಮೀಕಿ ಭವನದ ನಿರ್ಮಾಣಕ್ಕಾಗಿ ಸರ್ಕಾರದಿಂದ 75 ಲಕ್ಷದ ಅನುದಾನ ಕೂಡ ಬಿಡುಗಡೆಯಾಗಿದ್ದು ಕಾಮಗಾರಿಯು ಶೇಕಡ 90ರಷ್ಟು ಮುಗಿದಿದೆ. ಇನ್ನು ಕೇವಲ 10 ಭಾಗದಷ್ಟು ಮಾತ್ರ ಕಾಮಗಾರಿ ಬಾಕಿ ಇದೆ. ಇರುವಂತಹ ಸಣ್ಣಪುಟ್ಟ ಅಡೆತಡೆಗಳನ್ನು ಜಿಲ್ಲಾಡಳಿತವೂ ನಿವಾರಣೆ ಮಾಡಿ ಆದಷ್ಟು ಬೇಗ ಭವನದ ಉದ್ಘಾಟನೆ ಆಗಬೇಕು. ಅದನ್ನ ಜಿಲ್ಲಾಡಳಿತವು ಗುತ್ತಿಗೆದಾರರಿಂದ ತೆಗೆದುಕೊಂಡು ಚಿಕ್ಕಮಗಳೂರಿನ ಜನರಿಗೆ ಅರ್ಪಿಸಬೇಕು ಎಂದ ಅವರು ಮುಂದಿನ ಜಯಂತಿಯನ್ನು ಆ ವಾಲ್ಮೀಕಿ ಭವನದಲ್ಲೇ ಆಚರಣೆ ಮಾಡುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಜ್ಞಾನ ದೃಷ್ಟಿ ಕೇವಲ ನಿಮ್ಮ ಗುರಿಯ ಕಡೆ ಇದ್ದಾಗ ಮಾತ್ರ ಏನಾದರೂ ಸಾಧನೆಯನ್ನು ಮಾಡಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಅಲ್ಲದೆ ವಾಲ್ಮೀಕಿ ಸಂಘದವರು ಆಯೋಜನೆ ಮಾಡಿದಂತಹ ಕ್ರೀಡೆಯಲ್ಲಿ ಭಾಗವಹಿಸಿದಂತಹ ಎಲ್ಲಾ ಕ್ರೀಡಾಪಟುಗಳಿಗೆ ಅಭಿನಂದನೆ ಸಲ್ಲಿಸಿದರು.
ಇದೇ ವೇಳೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ವಾಲ್ಮೀಕಿ ಅವರನ್ನ ಕೇವಲ ಯಾವುದೋ ಒಂದು ವರ್ಗಕ್ಕೆ ಸೀಮಿತ ಮಾಡುವುದು ಘೋರ ಅಪರಾಧವಾಗುತ್ತದೆ. ಅವರು ಹೇಳಿರುವಂತಹ ಎಲ್ಲ ವಿಚಾರಗಳು ಎಲ್ಲರಿಗೂ ದಾರಿದೀಪವಾಗಬೇಕು. ವಾಲ್ಮೀಕಿ ಅವರ ಕೊಡುಗೆಯ ಬಗ್ಗೆ ಹೇಳಲು ಪದಗಳು ಸಾಲುವುದಿಲ್ಲ. ಮಹರ್ಷಿಗಳು ಈ ನಾಡಿನ ಬಹುದೊಡ್ಡ ಆಸ್ತಿ ಎಂದು ತಿಳಿಸಿದರು.
ವಾಲ್ಮೀಕಿ ಅವರ ವಿಚಾರಧಾರೆಗಳನ್ನು ನಾಡಿಗೆ ತಿಳಿಸುವುದರ ಜೊತೆಗೆ ಮುಂದಿನ ಪೀಳಿಗೆಗೆ ಈ ಮಾರ್ಗದಲ್ಲಿ ನಡೆಯಿಸುವಂತಹ ಕೆಲಸವನ್ನು ನಾವುಗಳು ಮಾಡಬೇಕಿದೆ. ಆಚರಣೆ ಅನ್ನೋದು ಕೇವಲ ಒಂದು ದಿನಕ್ಕೆ ಸೀಮಿತವಾಗಿದೆ ನಿತ್ಯ ನಿರಂತರವಾಗಿರಬೇಕು ಅವರ ವಿಚಾರಧಾರೆಗಳು ಹರಿಯುವ ನೀರಿನಂತಾಗಬೇಕು ಎಂದರು.
ದಾಸ ಸಾಹಿತ್ಯ, ವಚನ ಸಾಹಿತ್ಯ, ಸಂವಿಧಾನ, ರಾಮಾಯಣದಂತಹ ವಿಚಾರಧಾರೆಗಳಿಂದ ಈ ನಾಡು ನಿರ್ಮಾಣವಾಗಿದೆ. ಈ ವಿಚಾರಧಾರೆಗಳಿಂದ ನಾಡಿನ ಸರ್ವತೋಮುಖ ಬೆಳವಣಿಗೆ ಸಾಧ್ಯ. ಪ್ರಸ್ತುತದಲ್ಲಿರುವಂತಹ ಸವಲತ್ತು ಅವಕಾಶಗಳನ್ನು ಬಳಸಿಕೊಂಡು ನಾವು ನಿಸ್ವಾರ್ಥ ಸಮಾಜವನ್ನು ಸಮಾಜವನ್ನು ಕಟ್ಟಲಿಲ್ಲದಿದ್ದರೆ ಮಹರ್ಷಿಯವರ ರಾಮಾಯಣ ದರ್ಶನಕ್ಕೆ ಅರ್ಥ ಬರುವುದಿಲ್ಲ ಮತ್ತು ವಿಚಾರಧಾರೆಗಳನ್ನು ಹಂಚಿದಾಗ ಮಾತ್ರ ಈ ಜಯಂತಿಗಳಿಗೆ ಅರ್ಥ ಬರುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಪ್ರತಿಭಾನ್ವಿತ ವಾಲ್ಮಿಕಿ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ವೇದಿಕೆಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ವಿಕ್ರಮ್ ಅಮಟೆ, ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಸೇರಿದಂತೆ ಮತ್ತಿತರರಿದ್ದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g