ಗ್ರಾ.ಪಂ ಸದಸ್ಯರನ್ನು ಒತ್ತಾಯದಿಂದ ರೆಸಾರ್ಟ್, ಹೋಂ ಸ್ಟೇ ಸೇರಿಸಲು ಬಿಜೆಪಿ ಯತ್ನ, ಅಕ್ರಮ ತಡೆಯಲು ರಾತ್ರೋ ರಾತ್ರೊ ಡಿಸಿಗೆ ಕಾಂಗ್ರೆಸ್ ಮನವಿ
1 min readಚಿಕ್ಕಮಗಳೂರು: ತಾಲೂಕಿನ ಅಂಬಳೆ ಹಾಗೂ ಕುರುವಂಗಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಗೆ ಸೇರಿದ ಗ್ರಾಮ ಪಂಚಾಯಿತಿ ಸದಸ್ಯರುಗಳನ್ನು ಒತ್ತಾಯಪೂರ್ವಕವಾಗಿ ಆಕ್ರಮವಾಗಿ ಕರೆದೊಯ್ಯಲು ಬಿಜೆಪಿ ಮುಖಂಡರು ಪ್ರಯತ್ನಿಸುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಒತ್ತಾಯಿಸಿದೆ.
ಬುಧವಾರ ರಾತ್ರಿ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಗೆ ಈ ಕುರಿತು ಮನವಿ ಸಲ್ಲಿಸಲಾಗಿದ್ದು,ವಿಧಾನ ಪರಿಷತ್ ಚುನಾವಣೆಯನ್ನು ಶಾಂತಿ ಮತ್ತು ಸುವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ ಹಗಲು ರಾತ್ರಿ ಶ್ರಮಿಸುವ ಮೂಲಕ ಸಿದ್ಧತೆ ನಡೆಸಿರುವುದು ಸ್ವಾಗತಾರ್ಹ ಸಂಗತಿ. ಆದರೆ, ಈ ನಡುವೆ ಚಿಕ್ಕಮಗಳೂರು ತಾಲೂಕಿನ ಅಂಬಳೆ ಮತ್ತು ಕುರುವಂಗಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಅಂಬಳೆ, ಮರ್ಲೆ, ಕಳಸಾಪುರ, ಮುಗುಳುವಳ್ಳಿ, ಬೀಕನಹಳ್ಳಿ, ಮೂಗ್ತಿಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳನ್ನು ಒತ್ತಾಯಪೂರ್ವಕವಾಗಿ ಕರೆದೊಯ್ಯಲು ಬಿಜೆಪಿಯ ಕೆಲ ಮುಖಂಡರು ಗ್ರಾಮಗಳಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ಆಮೀಷಗಳನ್ನು ನೀಡುತ್ತಿದ್ದು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
ಇನ್ನು ಇದಕ್ಕೆ ಸಂಬಂಧಿಸಿದಂತೆ ಮನವಿಯಲ್ಲಿ ಒತ್ತಾಯ ಮತ್ತು ಅಕ್ರಮವಾಗಿ ಕರೆದೊಯ್ಯುವ ಗ್ರಾಮ ಪಂಚಾಯಿತಿ ಸದಸ್ಯರುಗಳ ವಾಸ್ತವ್ಯಕ್ಕಾಗಿ ಮೂಡಿಗೆರೆ ತಾಲೂಕಿನ ಕಿರುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಪ್ಪದಕಲ್ಲು, ಮೂಡಿಗೆರೆ ತಾಲೂಕಿನ ಜನ್ನಾಪುರ ಗೌಡಳ್ಳಿ ಸರ್ಕಲ್ನ ಬೆಳವಾಡಿ ಸುಧೀರ್ ಹೋಂ ಸ್ಟೇ ಹಾಗೂ ಚಿಕ್ಕಮಗಳೂರು ತಾಲೂಕಿನ ಹುಕ್ಕುಂದದಲ್ಲಿರುವ ಹೋಂ ಸ್ಟೇಗಳಲ್ಲಿ ಕೆಲ ಸದಸ್ಯರನ್ನು ಉಳಿಸಿದ್ದಾರೆ. ಹಾಗೂ ಸ್ಥಳ ಕಾಯ್ದಿರಿಸಲಾಗಿದೆ. ಈ ರೀತಿ ಒತ್ತಾಯ ಮತ್ತು ಆಕ್ರಮವಾಗಿ ಸದಸ್ಯರನ್ನು ಕರೆದೊಯ್ಯುವುದು ಉಲ್ಲಂಘನೆಯಾಗಿದ್ದು, ಸಂಬಂಧಪಟ್ಟ ವಾಹನಗಳನ್ನು ವಶಪಡಿಸಿಕೊಳ್ಳುವುದರೊಂದಿಗೆ ಮುಖಂಡರುಗಳ ವಿರುದ್ಧ ಹಾಗೂ ಹೋಂ ಸ್ಟೇಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕಾಂಗ್ರೆಸ್ ಮನವಿ ಮಾಡಿದೆ
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g