ಕುಲಬಾಂಧವರನ್ನು ಒಗ್ಗೂಡಿಸುವ ಮೂಲಕ ಶಕ್ತಿ ಪ್ರದರ್ಶಿಸಬೇಕಿದೆ_ಸಿ.ಆನಂದ್
1 min read
ಚಿಕ್ಕಮಗಳೂರು: ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ವನ್ನಿಯಕುಲ ಕ್ಷತ್ರಿಯ ಸಮಾಜದ ಸಂಘ ಸ್ಥಾಪಿಸಿ ಕುಲಬಾಂಧವರನ್ನು ಒಗ್ಗೂಡಿಸುವ ಮೂಲಕ ಶಕ್ತಿ ಪ್ರದರ್ಶಿಸಬೇಕಿದೆ ಎಂದು ಸಮಾಜದ ಮುಖಂಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಆನಂದ್ ಹೇಳಿದರು.
ತಾಲ್ಲೂಕಿನ ತೇಗೂರು ಸಮೀಪದಲ್ಲಿ ರಾಜ್ಯ ವನ್ನಿಯಕುಲ ಕ್ಷತ್ರಿಯ ಸಂಘದ ವತಿಯಿಂದ ಇಂದು ಆಯೋಜಿಸಿದ್ದ ಜಿಲ್ಲಾ ಸಮಿತಿ ಉದ್ಗಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಲವು ದಶಕಗಳ ಹಿಂದೆ ನಮ್ಮ ಪೂರ್ವಜರು ತಮಿಳುನಾಡಿನಿಂದ ಕೂಲಿ ಕಾರ್ಮಿಕರು, ವ್ಯಾಪಾರಿಗಳಾಗಿ ಕರ್ನಾಟಕಕ್ಕೆ ಬಂದು ನೆಲೆಸಿದ್ದಾರೆ. ಇಂದು ಸಾವಿರಾರು ಸಂಖ್ಯೆಯಲ್ಲಿ ವನ್ನಿಯ ಕುಲ ಕ್ಷತ್ರಿಯ ಸಮುದಾಯದ ಕುಲ ಬಾಂಧವರಿದ್ದಾರೆ. ಆದರೆ ಸಂಘಟನೆ ಕೊರತೆಯಿಂದ ಸಮಾಜ ಹಿಂದುಳಿದಿದೆ ಅವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಎಲ್ಲಾ ಜಿಲ್ಲೆ ಹಾಗೂ ತಾಲೂಕು ಕೇಂದ್ರಗಳಲ್ಲಿ ಸಂಘವನ್ನು ಸ್ಥಾಪಿಸುವ ಅಗತ್ಯವಿದೆ ಎಂದರು.
ರಾಜ್ಯದಲ್ಲಿ ವನ್ನಿಯ ಕುಲ ಕ್ಷತ್ರಿಯ ಸಂಘ ರಚನೆಯಾಗಿ 11 ತಿಂಗಳು ಕಳೆದಿವೆ ಆದರೆ ವಿವಿಧ ಜಿಲ್ಲೆಗಳಲ್ಲಿರುವ ಸಮಾಜದ ಕುಲಬಾಂಧವರ ನಿಖರ ಸಂಖ್ಯೆ ತಿಳಿದಿಲ್ಲ. ತಮಿಳುನಾಡಿನಿಂದ ವಲಸೆ ಬಂದು ಜನಾಂಗ ನೆಲೆಸಿರುವ ಪೈಕಿ ಶಿವಮೊಗ್ಗ ಮತ್ತು ಭದ್ರಾವತಿ ಕಡೆಗಳಲ್ಲಿ ಹೆಚ್ಚು ಜನಸಂಖ್ಯೆ ಹೊಂದಿದೆ. ಪ್ರತಿ ಜಿಲ್ಲೆ ಹಾಗೂ ತಾಲ್ಲೂಕು ಹಂತದಲ್ಲಿ ಸಂಘಗಳು ಸ್ಥಾಪನೆಗೊಂಡಾಗ ಸಮಗ್ರ ಮಾಹಿತಿ ಸಿಗಲಿದೆ ಎಂದರು.
ರಾಜಕೀಯವಾಗಿ ಸಾಮಾಜಿಕವಾಗಿ ಎಲ್ಲಾ ಕ್ಷೇತ್ರಗಳ ಪ್ರಗತಿ ಜೊತೆಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಜನಾಂಗ ಒಗ್ಗಟ್ಟು ಪ್ರದರ್ಶನ ಮಾಡಬೇಕು ಈ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಕರೆ ನೀಡಿದರು.
ವನ್ನಿಯಕುಲ ಕ್ಷತ್ರಿಯ ಸಂಘದ ರಾಜ್ಯಾಧ್ಯಕ್ಷ ಗಂಗಾಧರ್ ಮಾತನಾಡಿ ಜಿಲ್ಲಾ ಹಂತದಲ್ಲಿ ಸಂಘ ಸ್ಥಾಪನೆ ಗೊಂಡಿರುವುದು ಸಂತಸ ತಂದಿದೆ ಸಮಾಜದ ವ್ಯವಸ್ಥೆ ಇರುವವರೆಗೂ ಸಂಘವನ್ನು ಉತ್ತುಂಗ ಮಟ್ಟಕ್ಕೆ ಬೆಳೆಸುವ ನಿಟ್ಟಿನಲ್ಲಿ ಕುಲಬಾಂಧವರು ಶ್ರಮಿಸಬೇಕು ಎಂದು ಮನವಿ ಮಾಡಿದರು.
ಸಮಾಜಕ್ಕೆ ಬೇಕಾದ ಅಗತ್ಯತೆಗಳು, ಸೌಲಭ್ಯಗಳನ್ನು ಸರ್ಕಾರದ ವತಿಯಿಂದ ಪಡೆಯಲು ಸಮುದಾಯ ಬಾಂಧವರು ಸಂಘಟಿತರಾಗಬೇಕು. ರಾಜ್ಯದಲ್ಲಿ ವನ್ನಿಯಕುಲ ಕ್ಷತ್ರಿಯ ಜಾತಿ ಪ್ರಮಾಣ ಪತ್ರ ಪಡೆಯಲು ಸುಮಾರು 93 ವರ್ಷಗಳೇ ಬೇಕಾಯಿತು. ಮುಂದಿನ ದಿನಗಳಲ್ಲಿ ಸಮಾಜ ಸಂಘಟಿತವಾದಾಗ ರಾಜಕೀಯ ಸ್ಥಾನಮಾನದ ಜೊತೆಗೆ ಸಾಮಾಜಿಕ ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗಲಿದೆ ಎಂದರು.
ಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರನ್ನು ಸಮಾಜದ ಮುಖಂಡರು ಭೇಟಿಯಾಗಿ ಸಮಾಜದ ಏಳಿಗೆ ನಿಟ್ಟಿನಲ್ಲಿ ಹಲವು ಮನವಿ ಸಲ್ಲಿಸಲಾಗಿದೆ. ಜಿಲ್ಲೆಯ ಜಿಲ್ಲಾಧ್ಯಕ್ಷರು ಕ್ಷೇತ್ರ ಪ್ರವಾಸ ಕೈಗೊಳ್ಳುವ ಮೂಲಕ ಜನಾಂಗದ ಸಂಘಟನೆಗೆ ಮುಂದಾಗಿದ್ದು ಎಲ್ಲರೂ ಕೈಜೋಡಿಸುವಂತೆ ವಿನಂತಿಸಿಕೊಂಡರು.
ವನ್ನಿಯಕುಲ ಕ್ಷತ್ರಿಯ ಸಂಘದ ಜಿಲ್ಲಾಧ್ಯಕ್ಷ ಜಿ.ರವಿಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಹಲವಾರು ವರ್ಷಗಳಿಂದ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಿರುವ ಸಮಾಜವನ್ನು ಸಂಘಟನೆ ಮೂಲಕ ಒಂದಾಗಿಸಬೇಕಿದೆ ಆ ನಿಟ್ಟಿನಲ್ಲಿ ಸಂಘಗಳು ರಚನೆಯಾಗುತ್ತಿದ್ದ ಸಮುದಾಯದ ಸದಸ್ಯರು ಹೆಚ್ಚು ಸದಸ್ಯತ್ವ ಪಡೆಯುವ ಮೂಲಕ ಸಂಘವನ್ನು ಬಲಪಡಿಸುವಂತೆ ವಿನಂತಿಸಿಕೊಂಡರು.
ಇದೇ ವೇಳೆ ಸಮಾರಂಭದಲ್ಲಿ ಉತ್ತಮವಾಗಿ ಸಮಾಜಸೇವೆಯಲ್ಲಿ ಕಾರ್ಯನಿರ್ವಹಿಸಿದ ಹಾಗೂ ಭಾರತೀಯ ಸೈನ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈನಿಕನಿಗೆ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷರಾದ ಜಿ.ಶಂಕರ್ಕುಮಾರ್, ಚಿನ್ನಪ್ಪಗೌಂಡರ್, ಜಿಲ್ಲಾ ಸಂಘದ ಗೌರವಾಧ್ಯಕ್ಷ ಲಕ್ಷ್ಮೀನಾರಾಯಣ್, ಉಪಾಧ್ಯಕ್ಷರಾದ ವೀರ ಪುತ್ರನ್, ಪಿಚ್ಚಾಂಡಿ, ಸತ್ಯವತಿ ಕೃಷ್ಣರಾಜ್, ಪಿ.ಲೋಕೇಶ್, ಪ್ರಧಾನ ಕಾರ್ಯದರ್ಶಿ ಪಿ.ಕುಮಾರ್, ಖಜಾಂಚಿ ಡಿ.ಜಯಚಂದ್ರನ್, ಸಂಘಟನಾ ಕಾರ್ಯದರ್ಶಿ ಸಂತೋಷ್, ಕಾನೂನು ಸಲಹೆಗಾg ಸುಬ್ಬಯ್ಯ, ಆಂತರಿಕ ಸಲಹೆಗಾರ ಮಲ್ಲಿಕಾದೇವಿ, ಜಂಟಿ ಕಾರ್ಯದರ್ಶಿಗಳಾದ ಚಿನ್ನಪ್ಪ, ಎನ್.ಮಂಜುನಾಥ್, ಜಯಕುಮಾರ್, ಎ.ಎಂ. ಶ್ರೀಧರ್ ಸೇರಿದಂತೆ ವಿವಿಧ ತಾಲ್ಲೂಕಿನ ಮುಖಂಡರುಗಳು ಉಪಸ್ಥಿತರಿದ್ದರು
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g