ಒಂದು ಕಾಲದ ನಕ್ಸಲ್ ಪೀಡಿದ ಪೊಲೀಸ್ ಠಾಣೆ ಈಗ ರಾಜ್ಯಕ್ಕೆ ಫೇಮಸ್
1 min readಚಿಕ್ಕಮಗಳೂರು : ಕಾಫಿನಾಡಿನ ಬಾಳೂರು ಪೊಲೀಸ್ ಠಾಣೆ ಇದೀಗ ರಾಜ್ಯಕ್ಕೆ ಮಾದರಿಯಾಗಿದೆ. ಒಂದು ಕಾಲದಲ್ಲಿ ನಕ್ಸಲ್ ಪೀಡಿತ ಪ್ರದೇಶದ ಸ್ಟೇಷನ್ ಆಗಿತ್ತು, ಹಾಗಾಗಿ, ಸಿಬ್ಬಂದಿಗಳು ವರ್ಗಾವಣೆಯಾಗಲು ಹಿಂದೇಟು ಹಾಕುತ್ತಿದ್ರು, ಇದೀಗ ಪೊಲೀಸರೇ ನಾ ಮುಂದು, ತಾ ಮುಂದು ಅಂತ ಬಾಳೂರು ಠಾಣೆಯನ್ನೇ ಬಯಸುತ್ತಿದ್ದಾರೆ.ಕಾಫಿನಾಡು ಚಿಕ್ಕಮಗಳೂರು ಅಂದ್ರೆ ಥಟ್ ಅಂತ ನೆನಪಾಗೋದೆ ದಟ್ಟಡವಿ. ಮುಗಿಲೆತ್ತರದ ಬೆಟ್ಟಗುಡ್ಡಗಳು. ಅರಣ್ಯವನ್ನು ನಾಚಿಸುವಂತಹ ಕಾಫಿ ತೋಟಗಳು. ಅಪ್ಪಟ ಮಲೆನಾಡ. ಸದಾ ತಣ್ಣನೆಯ ಗಾಳಿ. ಮಳೆಗಾಲದಲ್ಲಿ ಮಲೆನಾಡ ಬದುಕು ನಿಜಕ್ಕೂ ಸಾಹಸ. ಅಲ್ಲಿನ ಪೊಲೀಸ್ ಠಾಣೆಗೆ ಸಿಬ್ಬಂದಿಗಳು ವರ್ಗಾವಣೆ ಆಗೋಕೂ ಪೊಲೀಸರು ಹಿಂದೇಟು ಹಾಕ್ತಿದ್ರು. ಯಾಕಂದ್ರೆ, ಒಂದು ಕಾಲದಲ್ಲಿ ಇದು ನಕ್ಸಲ್ ಪೀಡಿತ ಪ್ರದೇಶದ ಠಾಣೆ ಕೂಡ. ಆದರೆ, ಈಗ. ಆ ಸ್ಟೇಷನ್ ಫುಲ್ ಲಕ-ಲಕ ಅಂತಿದೆ. ಇದೇ ಆ ಠಾಣೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾಳೂರು ಸ್ಟೇಷನ್. ಸುತ್ತಲೂ ಹಚ್ಚಹಸಿರು. ದಟ್ಟ ಕಾಡು. ಮಧ್ಯದಲ್ಲಿ ಸುಂದರ ಸ್ಟೇಷನ್. ಇದಕ್ಕೆಲ್ಲಾ ಕಾರಣ ಪಿ.ಎಸ್.ಐ. ಪವನ್. ದಾನಿಗಳು ಹಾಗೂ ಸಿಬ್ಬಂದಿಗಳ ನೆರವಿನಿಂದ ಈಗ ಠಾಣೆಗೆ ಹೈಟೆಕ್ ಲುಕ್ ಸಿಕ್ಕಿದೆ. ದೂರು ನೀಡಲು ಬಂದ ದೂರುದಾರರಿಗೆ ವಿಶ್ರಾಂತಿ ಪಡೆಯಲು ಮಿನಿ ಪಾರ್ಕ್. ಠಾಣೆಯ ಒಳಾಂಗಣಕ್ಕೆ ಹೈಟೆಕ್ ಸ್ಪರ್ಶದ ಜೊತೆ ಸಕಲ ವ್ಯವಸ್ಥೆ ಕಲ್ಪಿಸಿದ್ದಾರೆ. ಬಾಳೂರು ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಠಾಣಾ ವ್ಯಾಪ್ತಿಯ ಜನರಿಗೆ ಠಾಣೆಯ ಮೇಲಿದ್ದ ಭಯದ ಕಲ್ಪನೆಯನ್ನು ದೂರ ಮಾಡಿ ಮೆಚ್ಚುಗೆ ಕಾರಣವಾಗಿದೆ. ಪೊಲೀಸರ ಈ ಜನಸ್ನೇಹಿ ಪೊಲೀಸ್ ಠಾಣೆ ಕನಸಿಗೆ ಸ್ಥಳೀಯರು ಕೈಜೋಡಿಸಿದ್ದರಿಂದ ನಕ್ಸಲ್ ಪೀಡಿತ ಪ್ರದೇಶದ ಪೊಲೀಸ್ ಠಾಣೆಗೆ ಹೈಟೆಕ್ ಸ್ಪರ್ಶ ಸಿಕ್ಕಿದೆ…
.
ಇಷ್ಟೇ ಅಲ್ಲ.ಸಿಬ್ಬಂದಿಗಳು ವಿಶ್ರಾಂತಿಯ ವೇಳೆ ಆಟವಾಡಲು ಟೆನಿಸ್ ಹಾಗೂ ಶೆಟಲ್ ಕಾಕ್ ಕೋರ್ಟ್, ಸುಂದರ ಪಾರ್ಕ್, ಸೇರಿದಂತೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಪಡೆದಿರುವುದು ಠಾಣೆಯ ವಿಶೇಷ. ಬಾಳೂರು ಪೊಲೀಸ್ ಠಾಣೆಯ ಪಿ.ಎಸ್.ಐ ಪವನ್ ಕುಮಾರ್ ವಿವಿಧ ದಾನಿಗಳಿಂದ ನೆರವು ಪಡೆದು ಸಹ ಸಿಬ್ಬಂದಿಗಳ ನೆರವನಿಂದ ಠಾಣೆಗೆ ಹೈಟೆಕ್ ಸ್ಪರ್ಶ ನೀಡುವ ಮೂಲಕ ಆಕರ್ಷಣೀಯ ಕೇಂದ್ರ ಬಿಂದುವಾಗಿಸಿದ್ದಾರೆ. ಪಿ.ಎಸ್.ಐ ಪವನ್ ಕುಮಾರ್ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ಮಲ್ಲಂದೂರು ಪೊಲೀಸ್ ಠಾಣೆಗೂ ಕೂಡ ಅಲ್ಲಿನ ಪಿಎಸ್ಐ ರವೀಶ್ ಇದೇ ರೀತಿ ಹೈಟೆಕ್ ಸ್ಪರ್ಶ ನೀಡಿದರು. ಎಸ್.ಪಿ.ಉಮಾ ಪ್ರಶಾಂತ್ ಎರಡು ಠಾಣೆಯ ಪಿ.ಎಸ್.ಐ.ಗಳ ಕೆಲಸಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.ಒಟ್ಟಾರೆ ಬಾಳೂರು ಪೊಲೀಸ್ ಠಾಣೆ ಅಂದ್ರೆ ವರ್ಗಾವಣೆಯಾಗಲು ಮಾರುದ್ದ ದೂರ ಸರಿಯುತ್ತಿದ್ದ ಸಿಬ್ಬಂದಿಗಳು ಠಾಣೆಗೆ ಬರಲು ಮನಸ್ಸು ಮಾಡುತ್ತಿದ್ದಾರೆ. ಠಾಣೆಯ ಪರಿಸರ ಹಾಗೂ ಸಿಬ್ಬಂದಿಗಳ ಸಹಕಾರದಿಂದ ಮನಸ್ಸಿದ್ದರೆ ಮಾರ್ಗ ಎಂಬ ಮಾತಿನಂತೆ ಜನರು ಹಾಗೂ ದೂರದ ಊರುಗಳ ಜನರಿಂದಲೂ ಮೆಚ್ಚುಗೆ ಪಡೆದಿರುವ ಈ ಪೊಲೀಸ್ ಠಾಣೆ ಇದೀಗ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಠಾಣೆಗೆ ಹೈಟೆಕ್ ಸ್ಪರ್ಶ ನೀಡಿದರೆ ಸಾಲದು. ನ್ಯಾಯ-ನೀತಿ-ಸತ್ಯದ ಪರ ಕೆಲಸದ ಮೂಲಕ ಅಲ್ಲಿನ ಪೊಲೀಸರು ಜನರ ಮನಸ್ಸನ್ನು ಗೆದ್ದು ಠಾಣೆಗೆ ಹೈಟೆಕ್ ಸ್ಪರ್ಶ ನೀಡಬೇಕಿದೆ….
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g