ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಸಿ.ಟಿ ರವಿ ಶಂಕುಸ್ಥಾಪನೆ
1 min readಚಿಕ್ಕಮಗಳೂರು-ತಾಲ್ಲೂಕಿನ ಮಲ್ಲೇನಹಳ್ಳಿಯ ದೇವಿಪುರದಲ್ಲಿ ನಿಮಾರ್ಣವಾಗುತ್ತಿರುವ ನೂತನ ವಿದ್ಯುತ್ ಉಪಕೇಂದ್ರ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಟಿ ರವಿ ಭೂಮಿಪೂಜೆ ನೆರವೇರಿಸಿದರು.ಬಳಿಕ ಮಾತನಾಡಿದ ಅವರು ಈ ಭಾಗದಲ್ಲಿನ ವಿದ್ಯುತ್ ವೋಲ್ಟೇಜ್ ಬಹುದಿನಗಳ ಸಮಸ್ಯೆಯಾಗಿದ್ದು ಅದನ್ನು ಬಗೆಹರಿಸುವಂತೆ ಇಲ್ಲಿನ ಜನರ ಬಹುದಿನಗಳ ಬೇಡಿಕೆಯಿಟ್ಟಿದ್ದರು. ಕೋವಿಡ್ ಜತೆಗೆ ಜಾಗದ ಸಮಸ್ಯೆಯಿಂದಾಗಿ ಕಾಮಗಾರಿಗೆ ಚಾಲನೆ ದೊರೆತಿರಲಿಲ್ಲ. ಇದೀಗ ಸಮಸ್ಯೆ ನಿವಾರಣೆಯಾಗಿದ್ದು ಹೊಸದಾಗಿ ವಿದ್ಯುತ್ ಉಪಕೇಂದ್ರ ನಿರ್ಮಾಣವಾಗಲಿದ್ದು ಇದರಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆಯಾಗಲಿದೆ. ಇನ್ನು ಮಲ್ಲಂದೂರು, ಗಾಣದಾಳು ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಮಂಜೂರಾತಿ ದೊರಕಿದೆ. ಆದರೆ ಅಲ್ಲಿಯೂ ಅರಣ್ಯ, ಡೀಮ್ಡ್ ಜಾಗದ ಸಮಸ್ಯೆ ಕಾರಣ ಸ್ಟೇಷನ್ ನಿರ್ಮಾಣ ವಿಳಂಬವಾಗಿದೆ ಎಂದರು.
ದೇಶದಲ್ಲಿ ನವೀಕರಿಸಬಹುದಾದ ಇಂಧನಗಳ ಬಳಕೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿಶೇಷ ಆದ್ಯತೆ ನೀಡಿದ್ದು ಅದರಂತೆ ಸೋಲಾರ್ ಪ್ಲಾಂಟ್ ಅಳವಡಿಕೆಗೆ ಒತ್ತು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕಲ್ಲಿದ್ದಲು ಒಳಗೊಂಡಂತೆ ಮುಗಿಯುವ ಸಂಪನ್ಮೂಲಗಳ ಕೊರತೆ ಎದುರಾದಾಗ ಸೋಲಾರ್ ಅಳವಡಿಕೆ ತಂತ್ರಜ್ಞಾನ ಉಪಯುಕ್ತವಾಗಲಿದೆ ಎಂದು ತಿಳಿಸಿದರು.
ಸಮಾವೇಶವೊಂದರಲ್ಲಿ ಇಂಗ್ಲೆಂಡ್ ಹಾಗೂ ಇಸ್ರೇಲ್ ಅಧ್ಯಕ್ಷರು ನರೇಂದ್ರ ಮೋದಿಯವರ ಆಡಳಿತ ವೈಖರಿ, ಜನಪ್ರಿಯತೆಯನ್ನು ಕೊಂಡಾಡಿ ಸ್ಮರಿಸಿದ್ದಾರೆ. ಒಂದು ಕಾಲದಲ್ಲಿ ಭಾರತವನ್ನು ಕೀಳುಭಾವನೆಯಿಂದ ನೋಡುತ್ತಿದ್ದ ರಾಷ್ಟ್ರಗಳು ಇದೀಗ ಅಭಿಮಾನದಿಂದ ನೋಡುವಂತೆ ಮೋದಿಯವರು ಮಾಡಿದ್ದಾರೆ ಇದು ದೇಶಕ್ಕೆ ಹೆಮ್ಮೆಯ ವಿಚಾರ ಎಂದು ಕೊಂಡಾಡಿದರು.
ಜಿಲ್ಲೆಯ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾಗದೆ ಕಾಂಗ್ರೆಸ್ ಸದಾ ಟೀಕೆ ಮಾಡುತ್ತಿದೆ. ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರು, ಕಡೂರು-ಮೂಡಿಗೆರೆ ಹೆದ್ದಾರಿ ನಿರ್ಮಾಣಕ್ಕೆ ಅನುದಾನ, ಹೈಟೆಕ್ ಆಸ್ಪತ್ರೆಗೆ ಅನುದಾನ ಮಂಜೂರು, ನೀರಾವರಿ ಯೋಜನೆಗಳು ಅನುದಾನ ತಂದಿದ್ದು ಬಿಜೆಪಿ ಹೊರತು ಕಾಂಗ್ರೆಸ್ ಅಲ್ಲ, ಕಾಂಗ್ರೆಸ್ ಅಧಿಕಾರ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಜಿಲ್ಲೆಯ ನಿಯೋಗವನ್ನು ಅವರ ಕರೆದೊಯ್ದ ಅನುದಾನಕ್ಕೆ ಮನವಿ ಮಾಡಲಾಗಿತ್ತು ಆಗ ಯಾವುದೇ ಅನುದಾನ ನೀಡದೆ ಅಪಮಾನ ಮಾಡಿ ಕಳುಹಿಸಿದ್ದರು ಎಂದು ದೂಷಿಸಿದರು.
ಅಭಿವೃದ್ಧಿ ವಿಚಾರದಲ್ಲಿ ತಮ್ಮ ತಾಕತ್ತು ತೋರಿಸಬೇಕೆ ವಿನಃ ನಿಂದನೆ, ಟೀಕೆ ಮಾಡುವುದರಿಂದ ಜನತೆಯಿಂದ ಮತವನ್ನು ಗಿಟ್ಟಿಸಿಕೊಳ್ಳಲು ಸಾಧ್ಯವಿಲ್ಲ, ಜನತೆ ನಕರಾತ್ಮಕ ರಾಜಕಾರಣವನ್ನು ಎಂದಿಗೂ ಒಪ್ಪುವುದಿಲ್ಲ, ಜನಪರ ಚಿಂತನೆಯಿಂದ ನಾಯಕತ್ವದ ಜತೆಗೆ ಪಕ್ಷದ ಬೆಳವಣಿಗೆಯೂ ಆಗಲಿದೆ ಎಂದು ಕಾಂಗ್ರೆಸ್ ವಿರುದ್ದ ವ್ಯಂಗ್ಯವಾಡಿದರು.
ಕೋವಿಡ್ ಮತ್ತೀತರ ತಾಂತ್ರಿಕ ಕಾರಣದಿಂದಾಗಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳ ನೋಂದಣಿ ಪ್ರಕ್ರಿಯೆ ವಿಳಂಬವಾಗಿದೆ, ಈಗಾಗಲೇ ಬೋಧಕ ವರ್ಗ ಹಾಗೂ ಭೋದಕೇತರ ಸಿಬ್ಬಂದಿಗಳ ನೇಮಕಾತಿ ಆಗಿದ್ದು ವೈದ್ಯಕೀಯ ಸಂಸ್ಥೆ ನಿಗಧಿಪಡಿಸಿದ ಮೂಲಭೂತ ಸೌಕರ್ಯಗಳ ಕೊರತೆ ಕಾರಣದಿಂದಾಗಿ ಈ ಬಾರಿಯಲ್ಲಿ ನೇಮಕಾತಿಯಾಗಿಲ್ಲ ಅದಕ್ಕಾಗಿ ಕ್ರಮವಹಿಸಲಾಗುತ್ತಿದೆ. ಕಾಂಗ್ರೆಸ್ ಅವಧಿಯಲ್ಲಿ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜಿಗೆ ಯಾವುದೇ ಪ್ರಯತ್ನ ಮಾಡಿರಲಿಲ್ಲ, ಇದೀಗ ಮೆಡಿಕಲ್ ಕಾಲೇಜು ನೋಂದಣಿ ವಿಳಂಬಕ್ಕೆ ಸಂಕಟ ಪಡುತ್ತಿರುವುದು, ಮೊಸಳೆ ಕಣ್ಣೀರು ಸುರಿಸಿದಂತೆ ಎಂದು ವ್ಯಂಗ್ಯವಾಡಿದರು.
ನಿಮ್ಮ ಎಲ್ಲಾ ಸ್ಥಳಿಯ ಸುದ್ದಿಗಳಿಗಾಗಿ ಮಲ್ನಾಡ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿಕೊಳ್ಳಲು ಈ ಲಿಂಕನ್ ಪ್ರೆಸ್ ಮಾಡಿ, ಲೈಕ್ ಮಾಡಿ, ಶೇರ್ ಮಾಡಿ,
https://youtube.com/channel/UCbV1djwI3wZ-HVhKoGSaq1g